ಶತಮಾನಗಳ ಹಿಂದೆ ಭರತಖಂಡವನ್ನು ಆಳಿದ್ದ ಸನಾತನ ಆರೋಗ್ಯ ವೇದ ಆಯುರ್ವೇದ ಪದ್ಧತಿ ಮತ್ತೆ ಮರುಕಳಿಸುತ್ತಿದೆ. ಅಡ್ಡ ಪರಿಣಾಮಗಳಿಲ್ಲದ ಆರೋಗ್ಯಕರ ರೋಗ ನಿವಾರಣಾ ಕ್ರಮದತ್ತ ಜನ ಹೆಚ್ಚಾಗಿ ವಾಲುತ್ತಿದ್ದಾರೆ. ಪರಿಣಾಮ ಆಯುರ್ವೇದ ಮತ್ತೆ ಪ್ರಜ್ವಲಿಸುತ್ತಿದೆ. ಆಯುರ್ವೇದ ಶಿಕ್ಷಣ ಪೂರೈಸುತ್ತಿರುವವರಿಗೆ ಇರುವ ಹೊಸ ಸವಾಲು ಮತ್ತು ಭವಿಷ್ಯ, ಜಾಗತಿಕ ಮಟ್ಟದಲ್ಲಿ ಗಳಿಸಿದ ಮನ್ನಣೆಗೆ ಪೂರಕವಾಗುತ್ತಾ ಬಂದ ಅಂಶಗಳೇನು ? ಇವರಿಗಿರುವ ಉದ್ಯೋಗಾವಕಾಶಗಳ ಕುರಿತು ವಿವರ ಇಲ್ಲಿದೆ.
ಈ ನಿಟ್ಟಿನಲ್ಲಿ ನೋಡಿದರೆ ಹೊಸದಾಗಿ ಡಿಗ್ರಿ ಕೈಯಲ್ಲಿ ಹಿಡಿದು ಕಾಲೇಜಿನಿಂದ ಹೊರ ಬರುತ್ತಿರುವ ವೈದ್ಯರು ಎದುರಿಸಬೇಕಾದ ಪ್ರಮುಖ ಸವಾಲೆಂದರೆ ಸಮಾಜದ ನಿರೀಕ್ಷೆಯನ್ನು ಸಮರ್ಥವಾದ ರೀತಿಯಲ್ಲಿ ಪೂರೈಸುವುದು. ಆಯುರ್ವೇದ ಪದ್ಧತಿಯಲ್ಲಿ ರೋಗ ನಿರ್ಧಾರ ಮತ್ತು ಚಿಕಿತ್ಸೆಯ ವಿಧಾನದ ನಿರ್ಣಯ ಬಹುತೇಕ ವೈದ್ಯರ ವೃತ್ತಿಪರ ಕೌಶಲ್ಯ ಮತ್ತು ಬುದ್ಧಿಶಕ್ತಿಯ ಆಧಾರದ ಮೇಲೆ ಅವಲಂಬಿಸಿದೆ. ಅಷ್ಟಲ್ಲದೆ ಬಹಳಷ್ಟು ಸಂದರ್ಭಗಳಲ್ಲಿ ಯಾವುದೇ ಆಧುನಿಕ ಪ್ರಯೋಗಾಲಯದ ಪರೀಕ್ಷೆಗಳಿಲ್ಲದೆ (Modern Diagnostic Reports) ಯೋಗ ರತ್ನಾಕರದಲ್ಲಿ ಹೇಳಿರುವಂತೆ ನಾಡಿ, ಮೂತ್ರ, ಮಲ, ಜಿಹ್ವ, ಸ್ಪರ್ಶ, ಶಬ್ದ, ದೃಕ್, ಆಕೃತಿಗಳ ಮೂಲಕ ಮಾಡಿದ ರೋಗನಿರ್ಣಯದ (Diagnosis) ವಿಶ್ವಸನೀಯತೆಯನ್ನು ರೋಗಿಗೆ ಮನವರಿಕೆ ಮಾಡಿಕೊಡುವುದು ಬಹು ದೊಡ್ಡ ಸವಾಲು. ಆಯುರ್ವೇದ ಔಷಧಿಗಳು ತುಂಬಾ ನಿಧಾನವೆಂಬ ತಪ್ಪು ಕಲ್ಪನೆಯಿಂದಾಗಿ ಕೆಮ್ಮು, ಶೀತ, ಜ್ವರದಂಥ ಸಾಮಾನ್ಯ ಖಾಯಿಲೆಗಳಿಗೆ ಈಗಲೂ ಆಯುರ್ವೇದವು ಜನರ ಮೊದಲನೇ ಆಯ್ಕೆಯಾಗಿಲ್ಲ. ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಿ ಆಯುರ್ವೇದದ ಅನುಕೂಲಗಳನ್ನು ಮನದಟ್ಟು ಮಾಡಿ ಅದನ್ನು ಪ್ರಥಮ ಆದ್ಯತೆಯನ್ನಾಗಿಸುವುದು ಕಠಿಣ ಸವಾಲಾಗಿದೆ. ಜನಸಾಮಾನ್ಯರಲ್ಲಿ ಜ್ಞಾನದ ಮಟ್ಟ ಹೆಚ್ಚಿದ್ದರ ಪರಿಣಾಮ ಆಧುನಿಕ ವೈದ್ಯ ಪದ್ಧತಿಯಲ್ಲಿ ಯಾವ ರೋಗ ಎಷ್ಟರ ಮಟ್ಟಿಗೆ ವಾಸಿಯಾಗಬಲ್ಲದು ಎಂಬುದು ಜನರಿಗೆ ಅರ್ಥವಾಗುತ್ತಿದೆ. ಸಹಜವಾಗಿ ಆಯುರ್ವೇದದ ಮೇಲಿನ ನಿರೀಕ್ಷೆಗಳೂ ಹೆಚ್ಚಾಗುತ್ತಿದೆ. ಈ ನಿರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಅದನ್ನು ಪೂರೈಸಲು ಕಠಿಣ ಶ್ರಮ ಮತ್ತು ಜ್ಞಾನದ ಅಗತ್ಯವಿದೆ. ಆಗಾಧವಾಗಿ ಚಾಲ್ತಿಯಲ್ಲಿರುವ ಆಲೋಪತಿಕ್ ಪದ್ಧತಿಯ ಜತೆ ಹೋರಾಟ ನಡೆಸಬೇಕಾಗಿರುವುದು ಇನ್ನೊಂದು ಸಮಸ್ಯೆ. “ಈ ವೃತ್ತಿಪರ ನೈಪುಣ್ಯವನ್ನು ಪಡೆಯಬೇಕೆಂದರೆ ಆತ ಒಂದಷ್ಟು ಸಮಯ ಪರಿಣಿತರ ಬಳಿ ತರಬೇತಿ ಪಡೆದುಕೊಂಡು ಬರುವುದು ಅನಿವಾರ್ಯ” ಎನ್ನುತ್ತಾರೆ ಖ್ಯಾತ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಡಾ. ಪ್ರವೀಣ್ ಕುಮಾರ್.
“ಆಯುರ್ವೇದ ಪದ್ಧತಿಯಲ್ಲಿ ಪ್ರತಿ ರೋಗಿಯ ದೇಹ ಪ್ರಕೃತಿಗೆ ತಕ್ಕಂತೆ (ಪುರುಷ ಪುರುಷಂ ವೀಕ್ಷ್ಯಾ) ಔಷಧಿ ಕೊಡುವ ಕಾರಣ ಅಡ್ಡ ಪರಿಣಾಮಗಳು ಇರುವುದಿಲ್ಲ/ತುಂಬಾ ಕಡಿಮೆ ಇರುತ್ತವೆ. ಮತ್ತು ಔಷಧಿಗಳ ಅವಶ್ಯಕತೆಯೇ ಇಲ್ಲದೆ ದೇಹ ಪ್ರಕೃತಿ ಮತ್ತು ಹವಾಮಾನಕ್ಕನುಗುಣವಾದ ಆಹಾರ ಸೇವಿಸುವ ಮೂಲಕ ಬಹಳಷ್ಟು ಖಾಯಿಲೆಗಳನ್ನು ದೂರವಿಡಲು ಅವಕಾಶವಿದೆ. ಅಷ್ಟಲ್ಲದೆ ಯಾವುದೇ ವೈದ್ಯ ಪದ್ಧತಿಯಲ್ಲೂ ಕಡಿಮೆಯಾಗದ ಆಮವಾತ (Rheumatoid Arthritis), ಆಮ್ಲ ಪಿತ್ತ (Chronic Ulcer), ಮುಂತಾದ ದೀರ್ಘಕಾಲದ (Chronic) ಖಾಯಿಲೆಗಳಿಗೆ ಆಯುರ್ವೇದದಲ್ಲಿ ಮಾತ್ರ ಪರಿಹಾರವಿದೆ. ಆಯುರ್ವೇದದ ಇಂಥ ಅನನ್ಯತೆಯೇ ಜಾಗತಿಕ ಮನ್ನಣೆಗೆ ಕಾರಣ” ಎಂಬ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ ಬೆಂಗಳೂರಿನಲ್ಲಿ ವೈದ್ಯವೃತ್ತಿ ನಡೆಸುತ್ತಿರುವ ಡಾ. ಗಿರಿಧರ ಎನ್.ಕೆ.
ಜಗತ್ತಿನೆಲ್ಲೆಡೆ ಆಯುರ್ವೇದಕ್ಕೆ ಮಣೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಮತ್ತು ಪೋಷಕರು ಆಯುರ್ವೇದದ ಕಲಿಕೆಗೆ ಒಲವು ತೋರಿಸುತ್ತಿದ್ದಾರೆ. ಪರಿಣಾಮ ಎಂಬಿಬಿಎಸ್ ಸೀಟ್ ಸಿಗದ ಕಾರಣ ಬಿಎಎಂಎಸ್ ಓದುತ್ತಾರೆ ಎಂಬ ಭಾವನೆ ಸಂಪೂರ್ಣ ಬದಲಾಗಿದೆ. ಹಾಗೆಯೇ ಓದಲು ಇಚ್ಛಿಸಿದವರಿಗೆ ವಿಷಯಗಳ ಆಯ್ಕೆಯೂ ಬಹಳಷ್ಟಿದೆ. ಆಯುರ್ವೇದದ ಸ್ನಾತಕೋತ್ತರ ಪದವಿಗಳಲ್ಲಿ ಹದಿನೈದು ಆಯ್ಕೆಗಳಿವೆ.
- ದ್ರವ್ಯಗುಣ – ಆಯುರ್ವೇದೀಯ ದ್ರವ್ಯಗಳ ಗುಣಲಕ್ಷಣಗಳ ಕಲಿಕೆ (Pharmacology)
- ಸಂಹಿತಾ ಸಿದ್ಧಾಂತ – ಆಯುರ್ವೇದದ ಮೂಲಭೂತ ಸಿದ್ಧಾಂತಗಳು ಮತ್ತು ಶಾಸ್ತ್ರಗಳ ಕಲಿಕೆ. (Study of Basic Principles & Classical Texts)
- ಸ್ತ್ರೀ ರೋಗ ಮತ್ತು ಪ್ರಸೂತಿ ತಂತ್ರ (Obstetrics & Gynaecology)
- ಪಂಚಕರ್ಮ (Panchakarma)
- ಕಾಯ ಚಿಕಿತ್ಸಾ – ಸಾಮಾನ್ಯ ರೋಗಗಳ ಚಿಕಿತ್ಸಾ ಕಲಿಕೆ. (General Medicine)
- ಶಾಲಾಕ್ಯ – ಕಣ್ಣು, ಕಿವಿ, ಮೂಗು ಮತ್ತು ಗಂಟಲು ಚಿಕಿತ್ಸಾ ಕಲಿಕೆ. (Eye & E.N.T)
- ಶಲ್ಯ – ಶಸ್ತ್ರ ಚಿಕಿತ್ಸೆ (ಕ್ಷಾರ ಸೂತ್ರ, ಕ್ಷಾರ ಕರ್ಮ, ಅಗ್ನಿ ಕರ್ಮ) ಕಲಿಕೆ. (Surgery)
- ಅಗದ ತಂತ್ರ – ವಿಷವೈದ್ಯ ಕಲಿಕೆ (Toxicology)
- ಬೈಷಜ್ಯ ಕಲ್ಪನಾ ಮತ್ತು ರಸಶಾಸ್ತ್ರ – ಗಿಡಮೂಲಿಕೆಗಳು ಮತ್ತು ಖನಿಜ ಮೂಲಗಳಿಂದ ಔಷಧಿ ತಯಾರಿಕಾ ವಿಧಾನಗಳ ಕಲಿಕೆ. (Ayurvedic Pharmaceutics)
- ಸ್ವಸ್ಥ ವೃತ್ತ – ಯೋಗ ಮತ್ತು ಯೋಗ್ಯ ಜೀವನಶೈಲಿಯಿಂದ ಸಾಮುದಾಯಿಕ ಮತ್ತು ಸಾಂಕ್ರಾಮಿಕ ರೋಗಗಳ ತಡೆ ಕಲಿಕೆ. (Preventive & Social Medicines)
- ಶರೀರ ರಚನಾ – ಅಂಗರಚನಾ ಶಾಸ್ತ್ರ (Anatomy)
- ಶರೀರ ಕ್ರಿಯಾ – ಶರೀರ ವಿಜ್ಞಾನ (ಅಂಗಾಂಗಗಳ ಸಹಜಕ್ರಿಯೆ ಮತ್ತು ದೈಹಿಕ ವ್ಯಾಪಾರಗಳ ಕಲಿಕೆ) (Physiology)
- ರೋಗ ನಿಧಾನ – ರೋಗ ಲಕ್ಷಣಗಳ ಕಲಿಕೆ (Pathology)
- ಮಾನಸರೋಗ – ಮನೋರೋಗಗಳ ಚಿಕಿತ್ಸೆ. (Psychiatry)
- ಕೌಮಾರಭೃತ್ಯ – ಬಾಲಚಿಕಿತ್ಸೆ (Paediatrics)
ಇಷ್ಟಲ್ಲದೆ ಆರು ತಿಂಗಳ ಪಂಚಕರ್ಮ ಶಿಕ್ಷಣದ ಕೋರ್ಸ್ ಇದ್ದು ಇಲ್ಲಿ ತರಗತಿಯೊಳಗಿನ ಪಾಠಕ್ಕಿಂತ ವೃತ್ತಿಪರ ತರಬೇತಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಆಯುರ್ವೇದದ ತೊಟ್ಟಿಲೆನಿಸಿಕೊಂಡ ಕೇರಳ ರಾಜ್ಯದಲ್ಲಿ ಆಯುರ್ವೇದ ನರ್ಸಿಂಗ್ ಬಿ.ಎಸ್ಸಿ, ಮತ್ತು ಆಯುರ್ವೇದ ಬಿ.ಫಾರ್ಮ ಕೋರ್ಸ್ ಗಳು ಲಭ್ಯವಿವೆ. ಇವುಗಳಲ್ಲಿ ಸ್ತ್ರೀ ರೋಗ ಮತ್ತು ಪ್ರಸೂತಿ ತಂತ್ರ, ಪಂಚಕರ್ಮ, ಕಾಯ ಚಿಕಿತ್ಸಾ, ಶಾಲಾಕ್ಯ, ಶಲ್ಯ ಮತ್ತು ಕೌಮಾರಭೃತ್ಯಗಳು ಬಹು ಬೇಡಿಕೆಯಲ್ಲಿರುವ ವಿಷಯಗಳಾಗಿವೆ.
ಜಾಗತಿಕ ಮನ್ನಣೆಯ ಕಾರಣದಿಂದಾಗಿ ಆಯುರ್ವೇದ ವೈದ್ಯರಿಗೆ ಉದ್ಯೋಗಾವಕಾಶಗಳು ಮೊದಲಿಗಿಂತ ಹೆಚ್ಚಾಗಿವೆ. ಆದರೆ “ ಆಯುರ್ವೇದ ಪದ್ಧತಿ ಆಧಾರವಿಲ್ಲದ್ದು, ಅದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ” ಎಂಬ ಕಾರಣ ನೀಡಿ ಐರೋಪ್ಯ ರಾಷ್ಟ್ರಗಳಲ್ಲಿ ಕೆಲವೊಂದು ಸಣ್ಣಪುಟ್ಟ ಮೂಲಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲ ಮೂಲಿಕೆಗಳಿಗೆ ಮೇ 1, 2011 ರಿಂದ ನಿಷೇಧ ಜಾರಿಯಾಗಿದೆ. ಮದ್ದುಗಳೇ ಸಿಗದ ಈ ರಾಷ್ಟ್ರಗಳಲ್ಲಿ ಆಯುರ್ವೇದ ವೈದ್ಯರುಗಳಿಗೆ ಅವಕಾಶ ಇಲ್ಲದಂತಾದರೂ ಜಗತ್ತಿನ ಉಳಿದ ಭಾಗಗಳಲ್ಲಿ ನಿರ್ಬಂಧಗಳಿಲ್ಲ. “ಆದರೆ ಸ್ನಾತಕೋತ್ತರ ಪದವಿ ಮುಗಿಸಿಕೊಂಡವರಿಗೆ ಹೇರಳವಾದ ಅವಕಾಶಗಳಿವೆ. ಇಲ್ಲದೇ ಹೋದಲ್ಲಿ ವೈದ್ಯರು ತನ್ನ ನೈಪುಣ್ಯವನ್ನು ಸಾಬೀತು ಪಡಿಸಿದ ನಂತರವಷ್ಟೇ ಅವಕಾಶಗಳು ತೆರೆದುಕೊಳ್ಳುತ್ತವೆ” ಎಂಬುದು ಸಂಶೋಧಕರಾದ ಡಾ. ಮಧು ಕೆ.ಪಿ ಯವರ ಅಭಿಪ್ರಾಯ. ಆಧಾರವಿಲ್ಲದ ಪದ್ಧತಿ ಎಂಬ ಅಪವಾದವನ್ನು ತೊಡೆದು ಹಾಕುವ ಮತ್ತು ಉಳಿದ ಪದ್ಧತಿಗಳ ನಡುವೆ ಶಕ್ತಿಯುತವಾಗಿ ಎದ್ದು ನಿಲ್ಲುವ ನಿಟ್ಟಿನಲ್ಲಿ ಸಂಶೋಧನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಆಸಕ್ತರಿಗೆ ಈ ಕ್ಷೇತ್ರವು ಉದ್ಯೋಗಕ್ಕಾಗಿ ಕೈ ಬೀಸಿ ಕರೆಯುತ್ತಿದೆ. ಸರ್ಕಾರವೂ “ಆಯುಷ್” ಮೂಲಕ ನಮ್ಮ ಪ್ರಾಚೀನ ಪದ್ದತಿಗೆ ಬೆಂಬಲ ನೀಡುತ್ತಿದ್ದು ಪ್ರತಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಪ್ರಾಥಮಿಕ ರೋಗ್ಯ ಕೇಂದ್ರಗಳಲ್ಲಿ ಆಯುರ್ವೇದವನ್ನು ಕಡ್ಡಾಯ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ. ಆಯುರ್ವೇದ ಶಿಕ್ಷಣ ಸಂಸ್ಥೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕ ವೃತ್ತಿಯ ಉದ್ಯೋಗಾವಕಾಶಗಳಿವೆ. ಬೇರೆ ಯಾವುದೇ ವೈದ್ಯ ಪದ್ಧತಿಗಳನ್ನು ಮೀರಿ ಬೆಳೆಯಬಲ್ಲ ಸಾಮರ್ಥ್ಯವುಳ್ಳ ಆಯುರ್ವೇದ ದಿನೇ ದಿನೇ ಹೊಸ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದೆ. ಬಳಸಿಕೊಳ್ಳುವ ಜಾಣ್ಮೆ ಮತ್ತಿ ನಿಭಾಯಿಸಿ ಗೆಲ್ಲುವ ತಾಕತ್ತಿರಬೇಕು ಅಷ್ಟೇ.
%%%%%%%%%%%%%%%%%%%%%%%
(ವಿ.ಕ 18 ಜುಲೈ 2012, ಲವಲvk 2nd Page)