ಮಗು ಹುಟ್ಟುವ ಮೊದಲು ಅಮ್ಮ ಹುಟ್ಟುತ್ತಾಳಂತೆ !!!!

ಮಗು

ಮನದ ಮಂದಾರವೇ,
ನಿನ್ನ ಬರುವಿಕೆಯಿಂದ ಸಂಭ್ರಮ, ಪುಳಕ, ಜಗತ್ತನ್ನೇ ಗೆದ್ದಂಥ ಹೆಮ್ಮೆ, ಖುಷಿ, ಜತೆಗೊಂದು ಹಿಡಿ ಆತಂಕ ಎಲ್ಲ ಕೊಡಮಾಡಿದ ನಿಂಜತೆ ತುಂಬಾ ಮಾತಾಡಬೇಕು ಅನಿಸಿತು ನೋಡು ಕಂದಾ… ಮನದಲ್ಲಿ ಮಲ್ಲಿಗೆ ಅರಳಿದೆ. ಮನೆ ತುಂಬ ಅದರ ಘಮ. ತಿಂಗಳುಗಳ ನಂತರ ಬರುವ ನಿನಗೆ ಇವತ್ತೇ ಕಾಲ್ಗೆಜ್ಜೆ ತಂದಿಟ್ಟೆ. ನೀನು ಝಲ್ಲೆನಿಸಿಕೊಂಡು ಅಂಬೆಗಾಲಿಕ್ಕುವ ಚಿತ್ರ ನನ್ನೆದುರು. ನೀನು ನಮ್ಮ ಬಹುದಿನಗಳ ನಿರೀಕ್ಷೆ ಮಗೂ. ಅದನ್ನು ಪೂರೈಸಲು ಇಷ್ಟು ದಿನಗಳು ಬೇಕಾಯಿತಾ ನಿನಗೆ…
ಪುಟ್ಟೂ ನಿಜ ಹೇಳಲಾ ? ನಿನ್ನನ್ನು ಹೇಗೆ ಬರಮಾಡಿಕೊಳ್ಳುವುದೋ ಗೊತ್ತಾಗ್ತಾ ಇಲ್ಲ. ಕಾರ್ಗತ್ತಲಲ್ಲಿ ಬೆಳ್ಳಿ ಮಿಂಚೊಂದು ಹೊಳೆದರೆ ಥಟ್ಟನೆ ಕಣ್ಣಿಗೆ ಏನೂ ಕಾಣಿಸುವುದಿಲ್ಲ ನೋಡು ಅಂಥಾ ಅನುಭವ. ಎಲ್ಲ ಅಯೋಮಯ. ಅದರ ನಡುವಲ್ಲೂ ಎಷ್ಟೊಂದು ಕನಸುಗಳು ಚಿಗುರಿವೆ ಗೊತ್ತಾ ? ನೀನು ಬಂದ ಕ್ಷಣದಿಂದ ನಮ್ಮ ಮನೆ ತುಂಬುವ ಸಡಗರ ಇಲ್ಲೇ ಠಿಕಾಣಿ ಹೂಡುತ್ತದೆ. ಆಮೇಲೆ ಬೇಸರವೆಂಬುದು ಇರೋದೇ ಇಲ್ಲ. ಬೇಸರದ ಬೇಸಿಗೆಗೆ ಬಾಯಾರಿ ಹೋದಾಗ ತುಂಬಿ ಬಂದ ಅಮೃತ ವಾಹಿನಿ ನೀನು. ಸ್ನೇಹ ಸೆಲೆ; ಪ್ರೇಮ ನೆಲೆ ನೀನು. ಮನೆ ತುಂಬ ಅಚ್ಚಾಗುವ ನಿನ್ನ ಪುಟ್ಟ ಪಾದಗಳ ಗುರುತು ಅಡಿಗಡಿಗೆ ಭರವಸೆಯ ಐಸಿರಿ; ಬದುಕಿಡೀ ಪಸರಿಸುವ ನಿನ್ನುಸಿರ ಸೌಗಂಧ ಹಬ್ಬಿದಂತೆ ಶ್ರೀ ಗಂಧದ ವಲ್ಲರಿ. ಅರ್ಜಂಟ್ ಅನ್ನೋ ನಾವು ಹಾರಾಡುವ ಜೆಟ್ ವೇಗದಲ್ಲಿ ಸಾಗುತ್ತಿದ್ದ ಧಾವಂತದ ದಿನಗಳಲ್ಲಿ ಮೆಲ್ಲನೆ ಅಡಿಯಿಟ್ಟ ನೀನು ಬದುಕಿನ ಮೆಗಾ ಧಾರಾವಾಹಿಯಲ್ಲಿ ಸವಿಯಾದೊಂದು ಇಮೋಷನಲ್ ಬ್ರೇಕ್ ! ಮರೀ, ನೀನು ಹೆಣ್ಣೇ ಆಗಿರುತ್ತೀ ಎಂಬ ದೊಡ್ಡ ನಂಬಿಕೆಯಿಂದ ನಿಂಗೆ “ಪ್ರಣತಿ” ಅಂತ ಹೆಸರಿಟ್ಟಿದೀನಿ; ಒಂದು ವೇಳೆ ಅಲ್ಲದೇ ಹೋದರೆ “ಪ್ರಣೀತ್”.. ಹೆಸರು ಚಂದ ಇದೆ ಅಲ್ವಾ ? ನಿಂಗಿಷ್ಟ ಆಗ್ಲಿಲ್ಲ ಅನ್ಸಿದ್ರೆ ಹೇಳು ನೂರಾರು ಹೆಸರುಗಳ ಪಟ್ಟಿನೇ ಇದೆ.

ಈಗಿನ್ನೂ ಕುಡಿಯೊಡೆದಿದ್ದರೂ ಅದೆಷ್ಟು ಪರಿಯಲ್ಲಿ ನಿನ್ನ ಇರುವಿಕೆಯನ್ನು ತೋರಿಸುತ್ತಿದ್ದೀ ಬಂಗಾರ… ಮಳೆಬಿಲ್ಲು, ನಕ್ಷತ್ರ, ನರ್ಸರಿ ಮಕ್ಕಳ ಹಾಡು, ಆಗಸದಲ್ಲಿ ಚಿತ್ತಾರ ಬರೆವ ಮೋಡ, ಮಳೆ ಹನಿಯ ತುಂತುರು, ಮನೆಯೆದುರಿನ ಪಾಕರ್ಿಗೆ ವಾಕಿಂಗ್ ಬರುವ ಅಜ್ಜ ಅಜ್ಜಿ, ಅಷ್ಟೆಲ್ಲ ಗೌಜು ಗದ್ದಲದ ನಡುವೆಯೂ ಸ್ಯಾಂಕಿ ಕೆರೆಯಲ್ಲಿ ತನ್ನ ಪಾಡಿಗೆ ತಾನು ಈಜಾಡುವ ಬಾತುಕೋಳಿಯ ತನ್ಮಯತೆ ಎಲ್ಲದರಲ್ಲೂ ಹೊಸತನ ದಕ್ಕಿದ್ದು ನಿನ್ನಿಂದ ಕಂದಾ. ಇಂಥದ್ದೊಂದು ಅದ್ಭುತ ಮಾಯಾಲೋಕದ ಸೃಷ್ಟಿಯ ಹಿಂದಿನ ಶಿಲ್ಪಿ ನೀನು. ಯಾವತ್ತೂ ಇಷ್ಟವಾಗದಿದ್ದ ಕಾಟನ್ ಕ್ಯಾಂಡಿ ಈಗ ಬೇಕು ಅನ್ನಿಸ್ತಾ ಇದೆ. ಗೊಂಬೆಗಳೆಂದರೆ ಮಾರು ದೂರ ಸರಿಯುತ್ತಿದ್ದೆ. ಈಗ ಬಂದರೆ ಇಡೀ ಮನೆಯೇ ಬೊಂಬೆಮನೆ ! ನನ್ನೊಳಗೇ ಇದ್ದು ನನ್ನನ್ನು ಕುಣಿಸುತ್ತಿರುವ ಮಾಯಾವಿ ಗೊಂಬೆಯೇ ಯಾವಾಗ ಬರುತ್ತೀ ಮಡಿಲಿಗೆ ?

ಇವತ್ತು ಸಿಕ್ಕಿದ ಡಾಕ್ಟ್ರು ಒಂದಷ್ಟು ಏನೇನೋ ಹೇಳಿದ್ರು. ಮೈ ಮನಗಳೆಲ್ಲ ಬದಲಾಗುವ ಬದುಕಿನೊಂದು ವಿಶೇಷ ಕಾಲಘಟ್ಟ ಇದು. ಪ್ರಾಜೆಸ್ಟಿರಾನ್ ಮತ್ತು ಈಸ್ಟ್ರೋಜೆನ್ ಎಂಬೆರಡು ಹಾಮರ್ೋನುಗಳಿದಾವೆ; ಅವುಗಳಲ್ಲಿ ವ್ಯತ್ಯಯಗಳಾಗುತ್ವೆ. ದೈಹಿಕ ಬದಲಾವಣೆಗಳಿಂದ ಹಿಂಡಿದಂತಾದ ಎಲ್ಲಾ ಮಸಲ್ಸ್ಗಳನ್ನ ಈ ಹಾಮರ್ೋನು ರಿಲ್ಯಾಕ್ಸ್ ಮಾಡುತ್ತೆ. ಈ ಪ್ರಕ್ರಿಯೆ ನಿರಂತರ ನಡೆಯುತ್ತಿರೋ ಕಾರಣ ವಾಂತಿ, ಹೊಟ್ಟೆ ತೊಳಸುವಿಕೆಗಳೆಲ್ಲಾ ಬರುತ್ತೆ. ಇನ್ನು ಮುಖದಲ್ಲಿ ಕಪ್ಪು ಉಂಗುರಗಳು ಬಂದರೂ ಬರಬಹುದು ನೋಡಿ; ಅವೆಲ್ಲವೂ ದೇಹದಲ್ಲಿನ ಬೇರೆ ಬೇರೆ ಹಾಮರ್ೋನುಗಳ ಕಿತಾಪತಿ. ಮಗುವಾದ ಮೇಲೆ ಅವೆಲ್ಲ ಸರಿಹೋಗತ್ತೆ. ಹೊಟ್ಟೆಯ ಸ್ನಾಯುಗಳ ಗಾತ್ರ ಹಿರಿದಾಗೋದರಿಂದ ಸ್ಟ್ರೆಚ್ ಮಾಕರ್್ ಅಂತೀವಲ್ಲ ಅದೂ ಬರುತ್ತೆ. ಸಾಮಾನ್ಯವಾಗಿ ದೇಹದ ‘ಗ್ರಾವಿಟಿ ಸೆಂಟರ್’ ಅಂತ ಕರೆಯಲ್ಪಡೋದು ಬೆನ್ನು ಮೂಳೆ. ಆದರೆ ಹೊಟ್ಟೆ ಎನ್ಲಾಜರ್್ ಆಗೋ ಕಾರಣ ಈ ಸೆಂಟರ್ ಆಫ್ ಗ್ರಾವಿಟಿನಲ್ಲಿ ಸಣ್ಣ ಬದಲಾವಣೆ ಆಗುತ್ತೆ. ಇದರಿಂದಾಗಿ ಬೆನ್ನು ನೋವು ಕೂಡ ಬರೋ ಸಾಧ್ಯತೆಗಳು ಇರ್ತಾವೆ. ಸ್ನಾಯುಗಳ ಗಾತ್ರ ಹಿಗ್ಗುವ ಕಾರಣ ಒಮ್ಮೊಮ್ಮೆ ರಕ್ತನಾಳಗಳಲ್ಲಿ ದೈನಂದಿನ ರಕ್ತ ಸಂಚಾರದ ರೀತಿಗೆ ಅಲ್ಪ ಮಟ್ಟದ ತೊಂದರೆಗಳು ಬಂದ್ರೆ ಕಾಲಲ್ಲಿ ನೀರು ಸೇರುವುದೂ ಇದೆ ಅಂತೆಲ್ಲ ಉದ್ದಕ್ಕೊಂದು ಪಟ್ಟಿನೇ ಕೊಟ್ರು. ಜತೆಗೇ ಇವೆಲ್ಲ ಗರ್ಭಧಾರಣೆಯ ಸಹಜವಾದ ಪ್ರಕ್ರಿಯೆಗಳು. ಇವೆಲ್ಲವೂ ಆಗೇ ಆಗುತ್ತೆ ಅಂತೇನಿಲ್ಲ; ಅವರವರ ದೇಹ ಪ್ರಕೃತಿಯ ಮೇಲೇ ಅವಲಂಬಿಸಿದೆ ಅನ್ನೋದೊಂದು ಮಾತು ಹೇಳಿದ್ರು ನೋಡು; ದೊಡ್ಡದೊಂದು ಸಮಾಧಾನ.

ಈಗ ನೀನು ಬರ್ತಿದ್ದೀ ಅನ್ನೋ ಒಂದೇ ಕಾರಣಕ್ಕೆ ಮನೇಲಿ ನಂಗೆ ರಾಯಲ್ ಟ್ರೀಟ್ಮೆಂಟ್. ಎಂದೂ ಇಲ್ಲದ ಉಪಚಾರ. ನಿಂತ್ರೆ ಕೂತ್ರೆ ನೋಡ್ಕೋತಾನೇ ಇರ್ತಾರೆ ಎಲ್ಲರೂ. ಕಬ್ಬಿಣದಂಶ, ಫೋಲಿಕ್ ಆಸಿಡ್ ಇರೋ ಸೊಪ್ಪು, ತರಕಾರಿ, ಬೆಣ್ಣೆ, ಹಣ್ಣುಗಳನ್ನೇ ಹೆಚ್ಚು ತಿನ್ನಬೇಕು, ತೀರ ಉಷ್ಣ ಪದಾರ್ಥಗಳ ಕಡೆ ಕಡೆಗಣ್ಣಿಂದಲೂ ನೋಡಕೂಡದು. ಎಲ್ಲೇ ಕೂತರೂ ನೇರ ಭಂಗಿ, ಭಾರ ಎತ್ತಬಾದರ್ು. ಸದಾ ಜಿಗಿಯುತ್ತಲೇ ಇರುತ್ತಿದ್ದ ನಂಗೀಗ ಆಟ, ಓಟ ಎರಡೂ ನಿಷಿದ್ಧ. ತಿನ್ನೋದು ಅಂದ್ರೆ ಬಾರೀ ಕಷ್ಟ ಪಡುತ್ತಿದ್ದ ನಾನು ಎರಡು ಗಂಟೆಗೊಮ್ಮೆ ಕ್ವಾಲಿಟಿ ಆಹಾರವನ್ನ ಕ್ವಾಂಟಿಟಿ ಲೆಕ್ಕ ಹಾಕಿ ತಿನ್ನಬೇಕೆಂಬ ಅಪ್ಪಣೆ. ಜೀವಮಾನದಲ್ಲಿ ಮೊತ್ತ ಮೊದಲ ಬಾರಿಗೆಂಬಂತೆ ಶಿಸ್ತು ಪಾಲಿಸ್ತಾ ಇದೀನಿ ಅಂದ್ರೆ ಅದು ನಿನ್ನ ಕಾರಣಕ್ಕೆ. ಅಂದ ಹಾಗೆ ಇನ್ನೊಂದ್ವಿಷ್ಯ ಹೇಳೋದು ಮರ್ತೆ ನೋಡು. ಐದನೇ ತಿಂಗಳಲ್ಲೊಮ್ಮೆ, ಅದಾಗಿ ಒಂದು ತಿಂಗಳು ಕಳೆದ ಮೇಲೊಮ್ಮೆ ಅದೆಂಥದೋ ಟಿ.ಟಿ ಇಂಜೆಕ್ಷನ್ ತೊಗೋಳೋದು ಕಡ್ಡಾಯ ಅಂತೆ. ಅದೇ ಭಯ ನಂಗೆ. ಇಂಜೆಕ್ಷನ್ ಅಂದ್ರೆ ಮೈಲಿ ದೂರ ಹೋಗೋಳು ನಾನು. ಆದ್ರೆ ನಿನಗಾಗಿ ಅಂತಂದ್ಮೇಲೆ ಎಲ್ಲಾದಕ್ಕೂ ಸೈ ಸೈ. ಇವೆಲ್ಲಾ ಮಾಡಿದ್ಕೆ ನೀನು ನಂಗೆ ದಿನಾ ನೂರು ಪಪ್ಪಿ ಕೊಡ್ಬೇಕು ಮತ್ತೆ… ದಿನದ ಮೊದಲ ಮುತ್ತು ನಂಗೇ ಸಲ್ಲಬೇಕು ಸರೀನಾ.. ಇಲ್ಲಾ ಅಂದ್ರೆ ಟೂ… ಟೂ… ಟೂ…

ನಿನ್ನೆ ಮನೆಗೆ ಬಂದ ಗೆಳತಿ ಸೌಮನಸ್ಯಂ ಗರ್ಭಧಾರಣಂ ಅಂತಂದ್ಲು. ಮರ್ಕಟದಂತೆ ಬದಲಾಗುವ ಹುಚ್ಚು ಹೊಳೆಯಂಥ ಮನಸನ್ನು ಯಾವಾಗ್ಲೂ ಖುಷಿಯಾಗಿ ಶಾಂತವಾಗಿಡೋದಿಕ್ಕೆ ಏನೇನು ಬೇಕೋ ಎಲ್ಲಾ ಮಾಡ್ತಿದೀನಿ ಬಂಗಾರ. ನೀನು ಭೂಮಿಗೆ ಬರೋ ವರೆಗೂ ಯಾವತ್ತೂ ನಿಂಗೆ ನೋವಾಗಬಾರದು. ಕೋಪ ತಾಪಗಳು ನಿನಗೆ ಅಭ್ಯಾಸವಾಗಬಾದರ್ು. ನಿನ್ನ ಬದುಕು ಭವಿಷ್ಯಗಳ ಬಗ್ಗೆ ಸಾವಿರ ಕನಸಿದೆ ನಂಗೆ. ನೀನು ನಮ್ಮೊಡನಿದ್ದೂ ನಮ್ಮಂತಾಗದೆ ಬೆಳೆಯಬೇಕು. IQ & EQಗಳು ಹದವಾಗಿ ಮಿಳಿತವಾದ ಧೀಶಕ್ತಿ ನೀನಾಗಬೇಕು. ಮನುಷ್ಯನ ವಿಕೃತಿಯನ್ನು ಮೀರಿ ಭೂರಮೆ ಪ್ರಕೃತಿಯಲ್ಲಿನ ವಿಸ್ಮಯಗಳಿಗೆ ತೆರೆದುಕೊಳ್ಳುವಂತೆ ನೀನು ರೂಪುಗೊಳ್ಳಬೇಕು… ಭೂ ಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗಿ “ಹಿಂದೂಸ್ಥಾನವು ಎಂದೂ ಮರೆಯದ….” ಮತ್ತು ಮುಂದೊಂದು ದಿನ ಜಗತ್ತೇ ಮೆಚ್ಚುವ ವಿಜ್ಞಾನಿ ನೀನಾಗಬೇಕು… ಡಾಕ್ಟರು ಇಂಜಿನಿಯರು ಆಗಬೇಕೆಂಬ ಹಂಬಲವಿಲ್ಲ. ಮನೆಗೆ ಮಲ್ಲಿಗೆಯಾಗು, ದೀನ ದುರ್ಬಲರಿಗೆ ಬೆಲ್ಲ ಸಕ್ಕರೆಯಾಗು ಸಾಕು…. ನಾವೇರಲಾರದೆಲ್ಲ ಶಿಖರಗಳನ್ನು ನೀನೇರಬೇಕು. ಅದಕ್ಕಾಗೇ ಕ್ಷಣ ಬಿಡುವು ಸಿಕ್ಕರೂ ಅಂಥದ್ದೇ ಪುಸ್ತಕಗಳನ್ನ ಓದ್ತಿದೀನಿ. ಎಲ್ಲಾ ಹೊತ್ತಿನಲ್ಲೂ ಸುಮಧುರ ಸಂಗೀತ. ನೋಡೋದಿದ್ದರೆ ಕಾಮಿಡಿ ಫಿಲ್ಮ್ ಮಾತ್ರ. ಸುತ್ತೆಲ್ಲರೂ ಈ ಬದಲಾವಣೆಯನ್ನ ಪಿಳಿಪಿಳಿ ಕಣ್ ಬಿಟ್ಕೊಂಡು ಸುಮ್ಮನೇ ನೋಡ್ತಿದಾರೆ. ನನ್ನಂಥ Tomboy ಹೀಗಾಗಿದ್ದು ಅಚ್ಚರಿ ಅವರಿಗೆಲ್ಲ.

ಯಾವ ಭರವಸೆಯೂ ಇಲ್ಲದೇ ಬದುಕು ಬರೀ ಯಾತನೆಯ ಗೂಡಾಗಿದ್ದ ದಿನಗಳಲ್ಲಿ ಕೂಡ ನಮ್ಮನ್ನು ಜೀವಂತವಾಗಿರಿಸಿದ್ದು ಪ್ರೀತಿ..ಪ್ರೀತಿ ಮತ್ತು ಪ್ರೀತಿ. ಅದೊಂದು ನಮ್ಮ ದಾಂಪತ್ಯದಲ್ಲಿ ಹೊಳೆಯಾಗಿ ಹರಿಯುತ್ತಿತ್ತು. ಅಂಥದ್ದೇ ಯಾವುದೋ ಒಂದು ಅಮೃತ ಘಳಿಗೆಯಲ್ಲಿ ಕುಡಿಯೊಡೆದ ನೀನು ಬದುಕನ್ನೂ ಅಷ್ಟೇ ಪ್ರೀತಿಸಬೇಕು. ಎಂದಿಗೂ ಬತ್ತದ ಜೀವನ್ಮುಖಿ ಕಾರಂಜಿಯಾಗಬೇಕು ಕಂದಾ.. ನಿನ್ನ ಪ್ರತಿ ಹೆಜ್ಜೆಗೂ ಅಪ್ಪ ಅಮ್ಮನ ಒಲವಿನ ಸಾಥ್ ಇದೆ, ಇರುತ್ತದೆ. ಸೋಲನ್ನು ಸೋಲಿಸುವ ದಿಟ್ಟತನ ಹುಟ್ಟಬೇಕು ನಿನ್ನಲ್ಲಿ. ನಿಂಗೊತ್ತಾ ಮಗೂ ನಿನ್ನ ಹುಟ್ಟೇ ನಿನ್ನ ಮೊದಲ ಗೆಲುವು. ಜತೆಗಿದ್ದ ಸಾವಿರಾರು ಜೀವ ಕಣಗಳನ್ನ ಹಿಂದಿಕ್ಕಿ ನೀನೇ ಫಲಿಸಿದ್ದೀ ನೋಡು ಅದು ನಿನ್ನ ವಿಜಯದ ದಾರಿಯಲ್ಲಿನ ಪ್ರಥಮ ಹೆಜ್ಜೆ. ಉಳಿದ ಹೆಜ್ಜೆಗಳಿಗೆ ಬದುಕಿಡೀ ಸಮಯವಿದೆ ಬಿಡು.

ಇವೆಲ್ಲ ಸಂಭ್ರಮದ ನಡುವೆಯೂ ಭಯ ಕಾಡುತ್ತದೆ. ಏನೋ ಒಂದು ಆತಂಕ, ತಳಮಳ ಎಲ್ಲ ನನ್ನನ್ನು ಸುತ್ತುಗಟ್ಟಿದ್ದಿದೆ. ಹೆರಿಗೆಯೆಂದರೆ ಮರುಹುಟ್ಟು ಅಂತಾರೆ. ಜೀವ ಒತ್ತೆಯಿಡಬೇಕು ಅಂತಾರೆ. ಹಾಗೇನಾದ್ರೂ ಆದ್ರೆ ? ನಾನಿಲ್ಲದೇ ನೀನು ಅಪ್ಪ ಇಬ್ಬರೇ ಇರೋಕಾಗತ್ತಾ ? ಅಷ್ಟಕ್ಕೂ ಆ ಪರಿಯ ವೇದನೆ ಸಹಿಸುವ ಶಕ್ತಿ ಇದೆಯಾ ನಂಗೆ ? ನನ್ನ ಒಳ್ಳೆ ಮುದ್ದು ನೀನು ನಂಗೆ ಹೆಚ್ಚು ನೋವು ಕೊಡಲ್ಲ ಅಲ್ವಾ ? ನೀ ಬಂದ ಮೇಲೆ ನಿನ್ನನ್ನು ಮುಚ್ಚಟೆಯಿಂದ ಸಾಕುವ ಬಗೆ ಹೇಗೆ ? ಕೆಲಸ ಮನೆ ಎರಡನ್ನೂ ನಿಭಾಯಿಸುವ ಧಾವಂತದಲ್ಲಿ ನಿನಗೆ ಅಮ್ಮ ಪೂತರ್ಿಯಾಗಿ ಸಿಗುವಂತೆ ಮರು ವ್ಯವಸ್ಥೆ ಮಾಡಿಕೋ ಬೇಕು. ಅದು ನನ್ನಿಂದಾಗುತ್ತಾ ? ನಿನ್ನಂಥ ಬೆಳಕಿನ ಪುಂಜವನ್ನು ಹೇಗೆ ಕಾಪಾಡಿಕೊಳ್ಳಲಿ ? ನಿನಗೆ ಏನೇನು ಕಲಿಸಬೇಕು ? ಹೇಗೆ ಕಲಿಸಬೇಕು ? ನನಗೆ ಅಮರಕೋಶ ಓದಿಸೋಕೆ ಅಜ್ಜಿ ಇದ್ರು. ನಿನಗೆ ಯಾರು ಓದಿಸ್ತಾರೆ ? ಮಹಾಭಾರತ, ರಾಮಾಯಣಗಳು ನಂಗೇ ಪೂತರ್ಿ ಗೊತ್ತಿಲ್ಲ. ಇನ್ನು ನಿನಗೆ ಹೇಗೆ ಹೇಳಲಿ ? ಅವನ್ನೆಲ್ಲ ನಿನಗೆ ಪ್ರೀತಿಯಿಂದ ಹೇಳೋಕೆ ಯಾರನ್ನು ಕರೆತರಲಿ ? ರಾಮ ಕೃಷ್ಣರ ಜತೆಗೇ ಸುಭಾಸ, ಭಗತರೂ, ಚೆನ್ನಮ್ಮ ಹೊನ್ನಮ್ಮರೂ ನಿನ್ನೆದೆಗೆ ಇಳಿಯಬೇಕು. ಇವಕ್ಕೆಲ್ಲ ಸಮಯ ಹೊಂದಿಸುವ ಬಗೆಯೇನು ? ನನ್ನ ಕಂದನ ಜತೆಗಿರಲು ನನಗೊಂದಷ್ಟು ಘಂಟೆಗಳನ್ನು ಹೆಚ್ಚು ಕೊಡು ಅಂತ ಬದುಕಿಗೊಂದು ಮನವಿ ಬರೆದು ಹಾಕಲಾ ? ಹೇಳು ಮಗೂ… ಇದೆಲ್ಲ ಕೇಳಿಸಿಕೊಂಡು ಒಳಗೊಳಗೇ ನಗುತ್ತಿದೀಯಾ ನನ್ನ ಕಳ್ಳ ಪುಟ್ಟೂ ? ಬೇಗ ಬಾ ನೀನು… ಇಲ್ಲೊಂದು ತಂಗಾಳಿ ಹರಡಲಿ. ಇನ್ನು ನನ್ನ ಕಾಡಬೇಡ ಪ್ಲೀಸ್… ಕಾದಿದೆ ಮನೆ, ಮನಸು, ಬದುಕು ನಿನಗಾಗಿ…

ಈ ಬಾರಿಯ ಕನ್ನಡ ಪ್ರಭದ ಸಖಿ (ಡಿಸೆಂಬರ್ 1-15)ರಲ್ಲಿ ಪ್ರಕಟವಾದ ಬರಹದ ಮೂಲ ಪ್ರತಿ.

ತಪ್ಪೊಪ್ಪಿಗೆಯೊಂದಿದೆ…

ತಲೆಯೆತ್ತಿ ನೋಡಿದರೆ ಕಪ್ಪು ಆಕಾಶ… ಮಳೆಯನ್ನೂ ಸುರಿಸದೆ ಸುಮ್ಮನಾದ ಮೋಡ… ಮನಸಿನಲ್ಲಿ ಹೆಪ್ಪುಗಟ್ಟಿ ನಿಂತ ದುಖಃದಂತೆ. “ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿದಂತೆ…” ನಿಸಾರರ ಸಾಲುಗಳು ನೆಪಾದವು. ಮೊನ್ನೆ ಗೆಳೆಯ ಹೇಳುತ್ತಿದ್ದ; ನಿನ್ನೊಳಗೇನೋ ಇದೆ ಕಣೇ ಅದನ್ನು ಹೊರ ಹಾಕದ ಹೊರತು ನೀನು ನೀನಾಗುವುದಿಲ್ಲ ಹುಡುಗೀ. ಹೇಳು ಅದೇನು ನಿನ್ನ ಕಾಡುವ ನೋವು ಅಂತ… ಗೊತ್ತಿಲ್ಲ, ಒಮ್ಮೊಮ್ಮೆ ಹೀಗಾಗುತ್ತೆ. ಕಾರಣವೇ ಇಲ್ಲದೆ ಮನ ಮೌನ; ಹೊರಗೆ ಬರಲೊಲ್ಲೆ ಎಂಬಂತೆ ಘನೀಭವಿಸಿ ಒಳಗೆ ಕುಳಿತ ಕಂಬನಿ… ಒಮ್ಮೊಮ್ಮೆ ಚೀರಿ ಹೇಳಬೇಕೆನಿಸುತ್ತದೆ. ಆದರೆ ಬೆಳಕಿನಲ್ಲೇ ಬೆಳೆದ ಸಿದ್ದಾರ್ಥರಿಗದು ಅರ್ಥವಾಗುವುದಿಲ್ಲ. ಕೇಳಬೇಕೆನಿಸುವ ಮನಸೂ ಇಲ್ಲ. ಹಾಗಂತ ಮುನಿಸೇನಿಲ್ಲ. ಸಾಂತ್ವನ ಬೇಕಿನಿಸಿದ ಕ್ಷಣಗಳಲ್ಲಿ ಅನೇಕ ಬಾರಿ ಸಿಕ್ಕಿದ್ದು ಸರಿ ತಪ್ಪುಗಳ ವಿಮರ್ಶೆ. ದಿನವೂ ಬದಲಾಗುತ್ತಿರುವ ಮನುಷ್ಯ ಜಾತಿಯ ಜತೆ ಸಂಬಂಧ ಬೆಸೆದುಕೊಂಡ ನಂತರ ಅರ್ಥ ಮಾಡಿಕೊಳ್ಳುವಿಕೆ ಎಂಬುದು ನನಗರ್ಥವಾಗದ ಮತ್ತು ಬೇಡವಾದ ವಿಚಾರ; ನನ್ನದೇನಿದ್ದರೂ ಒಪ್ಪಿ ಅಪ್ಪುವ ಪ್ರಕ್ರಿಯೆಯಷ್ಟೇ. ಯಾವುದೇ ಉದ್ದೇಶವಿಲ್ಲದೆ ನನ್ನವರೆಂಬ ಸಲಿಗೆಯಿಂದ ಫಿಲ್ಟರ್ ಹಾಕದೆ ಸಹಜವಾಗಿ ಆಡಿದ ಯಾವುದೋ ಮಾತಿಗೆ ನೂರು ವ್ಯಾಖ್ಯಾನ ಟೀಕೆ, ಟಿಪ್ಪಣಿಗಳು, ಮುನಿಸು, ಹಠಗಳ ಪ್ರತಿಕ್ರಿಯೆ. ಎಲ್ಲ ಅವರವರ ಮೂಗಿನ ನೇರಕ್ಕೆ. ಯಾಕೆ ಹಾಗಂದೆ ಏನಾಯ್ತು ನಿನಗೆ ಕೇಳುವ ವ್ಯವಧಾನಕ್ಕಿಂತ ಪಾಠ ಕಲಿಸುವ ತರಾತುರಿ ಹೆಚ್ಚಿನದು. ಆ ಸಂದರ್ಭದಲ್ಲಿ ಹಾಗಲ್ಲ ಹೀಗೆ ಅಂತ ನನ್ನನ್ನೇ ವಿವರಿಸಿಕೊಳ್ಳುವುದು ಸಾಧ್ಯವಾಗದ ಮತ್ತು ಬೇಡವಾದ ವಿಚಾರ. ಬರೆಯ ಹೊರಡುತ್ತೇನೆ ಎಲ್ಲವನ್ನು ಪೂರ್ತಿಗೊಳಿಸಲಾಗದು. ಹಾಗೇ ಅಪೂರ್ಣವಾಗಿ ಉಳಿದವುಗಳು ಹಲವಾರು. ಮತ್ತೆ ಮನ ಮೊಗ್ಗು. ಎಲ್ಲಿ ಹೋದಳು ಶಮಾ ಅಂತ ತಮ್ಮ ಮೆಸೇಜು ಕಳಿಸಿದ್ದಾನೆ… ತಿಂಗಳಿಗೂ ಹೆಚ್ಚಾಯಿತು ಬ್ಲಾಗಿನಂಗಳಕ್ಕೆ ನೀವು ಬರದೆ ಅಂದಿದೆ ಮಾಲತಿಯ ಎಸ್.ಎಂ.ಎಸ್. ನಾ ಹೀಗಾಡ್ತೀನಿ ಅನ್ನೋ ಒಂದೇ ಕಾರಣಕ್ಕೆ ಜೀವದ ಗೆಳೆಯ ಬ್ಲಾಗಿಗೆ ಬರೋದೇ ಬಿಟ್ಟಿದ್ದಾನೆ. ಇನ್ ಬಾಕ್ಸ್ ತೆರೆದು ನೋಡಿದರೆ ಅಲ್ಲೂ ಇದೇ ಪ್ರಶ್ನೆ. ಕೆಲವರಿಗೆ ಬೇಸರ; ಕೆಲವರಿಗೆ ಏನಾಯಿತೆಂಬ ಕಾತರ; ಕೆಲವರಿಗೆ ಕೋಪ. ನನಗರ್ಥವಾಗುತ್ತೆ ಎಲ್ಲವೂ; ಎಲ್ಲರ ಕಾಳಜಿಯೂ… ಆದರೆ ಉತ್ತರಿಸಲಾಗುತ್ತಿಲ್ಲ. ಏನೂ ಬೇಡದ ಭಾವ; ಊಟ ತಿಂಡಿಯೂ, ನಾನು ತುಂಬ ಇಷ್ಟಪಡುವ ರುಮಾಲಿ ರೋಟಿಯೂ ಸೇರುತ್ತಿಲ್ಲ. ಕಾರಣ ಕೇಳಿದರೆ ಗೊತ್ತಿಲ್ಲ ಒಂದೇ ಶಬ್ದ. ಒಟ್ಟಿನಲ್ಲಿ ಮೋಡ ಕವಿದ ವಾತಾವರಣ… ಒಮ್ಮೊಮ್ಮೆ ಹೀಗಾಗುವುದುಂಟು ಕ್ರಮೇಣ ಸರಿ ಹೋಗುತ್ತದೆಯೆಂದ ಗೆಳೆಯನಂಥ ತಮ್ಮ. ನಿಜವಿರಬಹುದು ಆತ ಹೇಳಿದ್ದು… ಅವನಿಗೆ ಇಂಥ ಅನುಭವಗಳು ಹಲವಾರು… (ಲೆಕ್ಕವಿಲ್ಲದಷ್ಟು ಬಾರಿ ನಾನೂ ಆತನನ್ನು ನೋಯಿಸಿ ಬೆನ್ನು ಹಾಕಿ ನಡೆದದ್ದುಂಟಲ್ಲ)

ಈ ಮೌನಕ್ಕೆ ಮುನಿಯಬೇಡಿ; ಕ್ಷಮೆಯಿರಲಿ ಸ್ನೇಹದಲಿ. ನೋಯಿಸುವ ಉದ್ದೇಶ ನಂಗಿಲ್ಲ. Am Sorry… ಗೆಳೆಯರು ನೀವು. ನೀವೆಲ್ಲರೂ ಬೇಕು ನಂಗೆ. ಎಂದಿನಂತೆ ಮತ್ತೆ ಬನ್ನಿ….
%%%%%%%%%%%%%%%%

ಮನದಂಗಳದ ಮಲ್ಲಿಗೆ ಬಳ್ಳಿ

Hoo Preethi
ಬದುಕೆಂಬ ಭಾವ ಲೋಕದ ಮಹಾನ್ ಅಚ್ಚರಿಯಿವನು. ಇಂಥವ ಇನ್ನೊಬ್ಬನಿರಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಹುಟ್ಟಿಸಿದವನು. ವರ್ಷಗಳಿಂದ ಕಾಡುತ್ತಿದ್ದ ಒಗಟುಗಳಿಗೆ ಉತ್ತರವೆನಿಸುತ್ತಲೇ ಎಂಥ ಒರಟು ಒಗಟಿವನೆಂಬ ಪ್ರಶ್ನೆ ಹುಟ್ಟಿಸಬಲ್ಲ ತಾಕತ್ತಿನವನು. ಉತ್ತರ ಸಿಗದೇ ತಡಕಾಡುತ್ತಿದ್ದರೆ ಮೀಸೆಯಂಚಿನಲಿ ನಗುತ್ತ ಮಡಿಲಿಗೇ ಬಂದು ಪ್ರಶ್ನೆ ಮರೆಸುವ. ಘಟ್ಟದ ಮೇಲಿಂದ ಇಳಿದು ಬಂದು ಅದಾವ ಮಾಯೆಯಲ್ಲೋ ಬಯಲಿನ ಹುಡುಗಿಯನ್ನು ಹೊತ್ತೊಯ್ದ ಹುಡುಗ. ಉತ್ತರದಲ್ಲೇ ಪ್ರಶ್ನೆ ಹುಟ್ಟಿಸಿ ಕಣ್ಣು ಮಿಟುಕಿಸಬಲ್ಲ ಹುಡುಗಿಯನ್ನು ಮರುಳಾಗಿಸಿ ಸುಮ್ಮನೇ ಮೌನದ ಜೋಕಾಲಿಯಲ್ಲಿಟ್ಟು ತೂಗಿದ ಮಾಧವ.

ಲೋಕ ವಿನಾಶವಾದೀತೆಂಬುದು ಸ್ಪಷ್ಟವಿದ್ದರೂ ಗಂಗೆಯ ಬಿಟ್ಟ ಮಹದೇವನೋ, ವಿನಾಶ ತಡೆಯಲು ಆಪೋಶನಗೈದ ಭಗೀರಥನೋ ಎಂಬ ಭ್ರಮೆ ಹುಟ್ಟಿಸಬಲ್ಲ ಧೀರ. ತನ್ನ ಹರಿವಿನುದ್ದಕ್ಕೂ ಹಸಿರ ಸೆರಗು ಮೂಡಿಸಿದ ಗಂಗೆಯೂ ಇವನೇನಾ ? ಇವನ ಮೌನ ಸಹಿಸಿಕೊಳ್ಳುವ ಶಕ್ತಿಯಿಲ್ಲ; ಮೌನದ ಕೋಟೆ ಕೆಡಹುವ ಯುಕ್ತಿಯಿಲ್ಲ. ಪ್ರಿಯನಾ, ಗಂಡನಾ, ಒಲಿದು ಬಂದ ದೇವನಾ, ಎಲ್ಲವೂ ಮೇಳೈಸಿದ ಗೆಳೆಯನಾ… ಉಹುಂ.. ಅರ್ಥಗಳ ಸೂತ್ರಕ್ಕೆ ನಿಲುಕದವನಿವನು. ಹಿಂದೆ ಮುಂದಿನವುಗಳಲಿ ನಂಬಿಕೆಯಿಲ್ಲದಾಗಲೂ ಜನ್ಮಾಂತರದ ಸಾಥಿ ಎನಿಸುತ್ತ ಒಮ್ಮೊಮ್ಮೆ ಮಗುವಿನಂತೆ, ಇನ್ನೊಮ್ಮೆ ನಗುವಿನಂತೆ ಆವರಿಸುವ.. ಸಿಟ್ಟು, ಸೆಡವು, ಮುನಿಸು, ಕೊರಗು, ಬೆರಗು ಎಲ್ಲ ಮುಖದ ಮೇಲಿನ ಮೊಡವೆಯಷ್ಟು ಸಹಜ. ಅಷ್ಟೇ ಹತ್ತಿರಿರುವ ಎಂದು ಕೈ ಚಾಚಿದರೆ ಎಲ್ಲೋ ಬಾನೆತ್ತರದ ನಕ್ಷತ್ರ.

ಬೇಕಾದ್ದನ್ನು ಪಡೆದೇ ತೀರುವ ಛಲದ ಬಳ್ಳಿ ಹುಟ್ಟಿದ್ದು ಇವನೆದೆಯಲ್ಲೇ; ಬೇಡಾದ್ದನ್ನು ನಿರಾಕರಿಸುವ ಜಾಣ್ಮೆ ಕೂಡ. ಜೀವವಿತ್ತ ತನ್ನ ಹಳ್ಳಿಯ ಅಷ್ಟೂ ವಿಸ್ಮಯಗಳು, ನಿರಾಡಂಬರತೆಯನ್ನು ತನ್ನಲ್ಲಿಟ್ಟುಕೊಂಡೇ ಜೀವನವಿತ್ತ ನಗರದ ನಾವೀನ್ಯತೆಯನ್ನು, ಸಾವಿರ ಝಲಕ್ ಗಳನ್ನು ದಿವ್ಯ ನಿರಾಳತೆಯ ಜತೆಗೇ ಮುಟಿಗೆಯಲ್ಲಿಟ್ಟುಕೊಂಡವ.

ಸದ್ದಿಲ್ಲದೇ ಸುಗ್ಗಿಯಲ್ಲರಳುವ ಮೊಗ್ಗಿನಂತೆ ನನ್ನಂಗಳಕೆ ಬಂದು ಪೂರ ಕಲರವದ ಚಪ್ಪರ ಬೆಳೆದವನು. ನಕ್ಷತ್ರಗಳ ತೋರಣ ಕಟ್ಟಿ ಚಂದಿರನ ದೀಪವಾಗಿಸಿದವನು. ಮಿಂಚಂತೆ ಬಂದು ನಕ್ಷತ್ರದ ಐಸಿರಿಯ ಮಡಿಲಲಿಟ್ಟವನು. ನಾ ಕಾಣದೇ ಇದ್ದ ಬದುಕಿನೆಳೆಗಳ ನಿರ್ಭಿಡೆಯಿಂದ ನನ್ನೆದುರು ಹರಡಿ ಜುಮ್ಮೆನಿಸಿದವನು. ನನಗೆ ನೀನೇ ದಿಕ್ಕು, ನೀನೇ ಗಮ್ಯವೆಂದಿದ್ದು ಕೇಳಿಸಲೇ ಇಲ್ಲವೇನೋ ಎಂಬಂತೆ ತನ್ನ ಪಾಡಿಗೆ ತಾನು ನಡೆವ ಮುಸಾಫಿರ್ ಇವನು. ಕಾದು ಕಾದು ಸಾಕಾಗಿ ಇನ್ನು ಈತ ಬರಲೊಲ್ಲವೆಂದು ನಿದ್ರಿಸಿದರೆ ಮಧ್ಯರಾತ್ರಿ ಕನಸಿನಂತೆ ಬಂದು ಎದೆಯ ಕದ ತಟ್ಟುವವನು. ವಿರಹದೆಲ್ಲ ಮುನಿಸನ್ನು ಕ್ಷಣ ಮಾತ್ರದಲ್ಲಿ ತುಟಿಕಚ್ಚಿ ಕರಗಿಸಿ ಬಿಡುವವನು. ನಿನ್ನೆ ರಾತ್ರಿ ನೋಯಿಸಿದ್ದು ನೆನಪೇ ಇಲ್ಲವೆಂಬ ತೆರದಲಿ ಮತ್ತೆ ಆವರಿಸಿ ಒಡಲಲ್ಲಿ ಒಲುಮೆಯ ಅಮೃತಬಳ್ಳಿ ಹಬ್ಬಿಸುವವನು. ಭಾರ ಬದುಕಿನ ದೂರ ದಾರಿಯ ಹಗುರಾಗಿಸಿ ನಮ್ಮ ಪ್ರೀತಿ ಪೊರೆಯುವವನು…

ಹನಿ ಹನಿ..

ಚಂದಿರ ಬಾರೋ...

ಬದುಕಿನಾ ಬೊಗಸೆಯಲಿ ನೆನಪುಗಳ ಮೆರವಣಿಗೆ…

ಹೂ ಹನಿಯೇ...

ಹೂ ಹನಿಯೇ...


ಮೊದಲ ಪ್ರೇಮದ ನೆನಪಿನಂತೆ ಸುರಿವ ಮಳೆಗೆ ಮುಖವೊಡ್ಡಿ ಬೊಗಸೆ ತುಂಬ ಮಳೆ ನೀರು ತುಂಬಿಕೊಂಡು ಈ ಕ್ಷಣ ಅವನಿದ್ದಿದ್ದರೆ…. ಅಂದುಕೊಳ್ಳುತ್ತಿದ್ದ ಹಾಗೇ ಪಕ್ಕದಲ್ಲಿದ್ದ ಮೊಬೈಲ್ ಚಿಂವ್ ಚಿಂವ್ ಅಂದಿತ್ತು. ತೆರೆದು ನೋಡಿದರೆ ಮನದ ಮಾತು ಓದಿದೆ ಕಣೇ ಅಂತ ಮೆಸೇಜು ಕಳಿಸಿದ್ದ….. ಅರರೇ ಇವನಿಗೆ ಹ್ಯಾಗೆ ಗೊತ್ತಾಯ್ತು ಅನ್ನುತ್ತ ಕಣ್ ಕಣ್ ಬಿಟ್ಟೆ ಮರುಕ್ಷಣ ಹೊಳೀತು ಮೊನ್ನೆ ಸುಧಾ ಮೂರ್ತಿ ಬರೆದ “ಮನದ ಮಾತು” ಓದುತ್ತಿದ್ದ… ಅದರ ಬಗ್ಗೆ ಹೇಳುತಿದ್ದಾನೆ ಅಂತ. ಹೇಗೂ ಚುಮು ಚುಮು ಚಳಿ.. ಸ್ವಲ್ಪ ರೋಮಾನ್ಸ್ ಮಾಡೋಣ ಅಂತ ಫೋನ್ ಮಾಡಿದರೆ ಪಾಪಿ ಪುಸ್ತಕದ ಬಗೆ ಹೇಳುತ್ತಲೇ ಹೋದ.. ಒಂದಷ್ಟು ಮಾತಾಡಿ ಫೋನಿಟ್ಟ ನಂತರ ಮನಸು ಹಿಂದಕ್ಕೋಡಿತ್ತು.. ಪಿಯುಸಿಯ ದಿನಗಳವು.. ಆವಾಗೆಲ್ಲ ಓದು ಅಂದರೆ ಕೇವಲ ನಲ್ಗಾದಂಬರಿಗಳು. ಸಾಯಿಸುತೆ, ಉಷಾನವರತ್ನರಾಮ್, ಅಶ್ವಿನಿ ಮುಂತಾದ ಒಂದಷ್ಟು ಹೆಸರು ಬಿಟ್ಟರೆ ಬೇರೆ ಯಾರು ಬೇಡ. ಅಂದು ಕ್ಲಾಸಿಗೆ ಚಕ್ಕರ್ ಹೊಡೆದು ತಲೆನೋವು, ಹೊಟ್ಟೆನೋವು (ಇವೆರಡೇ ಕಾರಣ ಯಾಕೆಂದರೆ ಎರಡೂ ಲೆಕ್ಚರರ್ ಕಣ್ಣಿಗೆ ಕಾಣದವು) ಕಾರಣ ಹೇಳ ಕ್ಲಾಸಿನಿಂದ ಹೊರ ಬಂದು ಲೈಬ್ರರಿಗೆ ಹೋಗಿ ಅವುಗಳನ್ನೋದುತ್ತಿದ್ದೆ. ಈಗವುಗಳನ್ನು ಫ್ರೀಯಾಗಿ ಕೊಟ್ಟರು ಬೇಡವೆನಿಸುತ್ತೆ. ಎಷ್ಟು ಬದಲಾಗಿದ್ದೀನಲ್ವಾ ಅನ್ನಿಸಲು ಶುರುವಾಯ್ತು…
ಬಟ್ಟೆ ನೆನೆಸಲು ಸೋಪು ನೀರು ಕದಡಿ ಟಬ್ ನಲ್ಲಿಟ್ಟರೆ ಅದರೊಳಗೆ ಕೂತು ಚಪ್ಪಾಳೆ ಬಡಿಯುತ್ತ ಆಟವಾಡುತ್ತಿದ್ದ ನಾನು.. ಸ್ವಲ್ಪ ದೊಡ್ಡವಳಾಗಿ ಬೆಕ್ಕಿನ ಮರಿಯಂತೆ ಮನೆ ಮಂದಿಯ ಹಿಂದೆಯೇ ಸುಳಿದಾಡುತ್ತಿದ್ದ ನಾನು.. ಎಸ್.ಎಸ್.ಎಲ್.ಸಿ.ಕಳೆದ ನಂತರವೂ ಕ್ಲಾಸಲ್ಲಿ ಉಳಿದೆಲ್ಲರಿಗಿಂತ ಪೆದ್ದಿಯೇ ಆಗಿದ್ದ ನಾನು ಹೀಗಾದ್ದು ಯಾವಾಗ ? ಪ್ರಶ್ನೆಗೆ ಉತ್ತರವಿಲ್ಲ, ಬದುಕೆಂಬ ಕಲೆಗಾರನ ಕೈಚಳಕವೇ ಹೀಗೆ ದಾರಿ ಹೋಕನ ಕಾಲಡಿಯಲಿದ್ದ ಕಲ್ಲು ಶಿಲ್ಪವಾಗಿ ಬದಲಾಗಿದ್ದು ಗೊತ್ತೇ ಆಗದು. ಹೇಗೆ ನೆನಪಿಸಿಕೊಳ್ಳಲೆತ್ನಿಸಿದರೂ ನಾ ಬದಲಾದ ಘಳಿಗೆ ನೆನಪಿಗೆ ಬರಲೊಲ್ಲದು. ಬದುಕಿನ ಒಂದೊಂದೇ ವರುಷಗಳು ಸರಿದಂತೆಲ್ಲ ನಾವೆಷ್ಟು ಬದಲಾಗುತ್ತೇವಲ್ಲಾ….. ತಿರುಗಿ ನೋಡಿದರೆ ಮೂವತ್ತು ವಸಂತಗಳು.. ಕೈ ಬೆರಳ ಸಂದಿಯಿಂದ ಜಾರಿ ಹೋಗುತ್ತಿರುವ ಮಳೆ ಹನಿಯ ಹಾಗೇ ನುಸುಳಿ ಹೋಗಿವೆ…
ನನ್ನ ಸುತ್ತ ನೋಡಿದರೆ ನನ್ನ ಪ್ರಪಂಚ ತುಂಬ ಬದಲಾಗಿದೆ. ಒಂದು ಎರಡನೇ ತರಗತಿಯಲ್ಲ ಬೆಸ್ಟ್ ಫ್ರೆಂಡ್ ಆಗಿದ್ದ ಶ್ರೀಲತಾ, ನಾಲ್ಕರಿಂದ ಆರನೇ ಕ್ಲಾಸ್ವರೆಗೆ ಮೊದಲ ರ್ಯಾಂಕ್ಗೆ ನಂಜತೆ ಫೈಟ್ ಮಾಡುತ್ತಿದ್ದ ಪೋಸ್ಟ್ ಮಾಸ್ಟರ ಮಗಳು ನಮೃತಾ, ಕಾಂಪೌಂಡರ್ ಚಂದ್ರಣ್ಣನ ಮಗಳು ನನ್ನ ಜೀವದ ಗೆಳತಿ ಚಂದ್ರಿಕಾ ಯಾರ ಮುಖವೂ ನೆನಪಾಗುತ್ತಿಲ್ಲ. ಏಳನೇ ಕ್ಲಾಸಿನಲ್ಲಿ ನನ್ನ ಪಕ್ಕದಲ್ಲೇ ಕೂರುತ್ತಿದ್ದ ಪ್ರಕಾಶ, ಮುಖೇಶ, ಮಾವಿನ ಕಾಯಿ ತಂದು ಟೀಚರ ಕಣ್ಣು ತಪ್ಪಿಸಿ ಉಪ್ಪು ಖಾರ ಹಾಕಿ ತಿನ್ನುತ್ತಿದ್ದ ನಮ್ಮ ನೊಟೋರಿಯಸ್ ಗ್ಯಾಂಗಿನ ಪುಟ್ಟ ಹುಡುಗಿ ಗ್ರೇಸಿ.. ಎಲ್ಲರು ಮರೆತು ಹೋಗಿದ್ದು ಯಾವಾಗ ? ಹಳೆಯ ಆಲ್ಬಂ ತೆರೆದು ನೋಡಿದರೆ ಉದ್ದಲಂಗ ಹಾಕಿ ನನ್ನ ಪಕ್ಕ ಕೂತವಳ ಹೆಸರು ರಾಧಾ ಅಂತಲೋ ರಂಜಿನಿ ಅಂತಲೋ ಸ್ಪಷ್ಟವಾಗ್ತಿಲ್ಲ. ಎಲ್ಲ ಅಸ್ಪಷ್ಟ.. ಯಾವುದೋ ಕನಸು ಬಿದ್ದು ಫಕ್ಕನೆ ಎಚ್ಚರಾದಾಗಿನ ಅಲವರಿಕೆಯಂತೆ.. ಅವರೇ ಏನು ಕಾಲೇಜಿನ ಗೆಳತಿ ಗೆಳೆಯರೂ ಇಂದು ನನ್ನ ಬದುಕಿನ ಭಾಗವಾಗಿ ಉಳಿದಿಲ್ಲ.. ಫಸ್ಟ್ ಪಿಯುಸಿಯಲ್ಲಿದ್ದಾಗ ಕಿಟಕಿ ಬದಿಗೆ ಬಂದು ಟಾಟಾ ಮಾಡುತ್ತಿದ್ದ ಮೊದಲ ಹುಡುಗನ ಹೆಸರು ಕೂಡ ಇಂದು ಮನಸಿಗೆ ಬರುತ್ತಿಲ್ಲ.. ನನ್ನ ಭಾವಕೋಶದ ಎಳೆಗಳು ತುಂಬ ಬದಲಾಗಿವೆ.. ಆದರೆ ನನ್ನನ್ನದು ಕಾಡುತ್ತಿಲ್ಲವೇಕೆ ಎಂಬ ತಣ್ಣನೆಯ ಪ್ರಶ್ನೆಯ ಸಣ್ಣ ಗಿರಕಿ ಮನದಲ್ಲಿ..
ಜನರು ಮಾತ್ರವಲ್ಲ ಹೇಗೆ ಬದಲಾಗುತ್ತವೆ ಬದುಕಿನ ಆದ್ಯತೆಗಳೂ ಕೂಡ.. ಒಂದನೇ ಕ್ಲಾಸಿನಲ್ಲಿದ್ದಾಗ ಮಾವನ ಹಾಗೆ ಬಜಾಜ್ ಚೇತಕ್ ಓಡಿಸಿದರೆ ಸಾಕು ಎಂಬಾಸೆ, ಆರು ಏಳಕ್ಕೆ ಬಂದಾಗ ಅಜ್ಜಿ ಮನೆಗೆ ಸುಯ್ಯನೆ ಹೋಗುತ್ತಿದ್ದ ಅಂಬಿಕಾ ಬಸ್ ಡ್ರೈವರ್ ಆಗುವಾಸೆ, ಕಾಲೇಜು ಮೆಟ್ಟಲಿನಲ್ಲಿ ನಿಂತ ಕ್ಷಣ ಪೈಲಟ್ ಆಗಿ ಹಾರುವ ಕನಸು, ಡಿಗ್ರಿಯ ದಿನಗಳಲ್ಲಿ ಮಿಲಿಟರಿಗೆ ಸೇರಲು ಅಪ್ಲಿಕೇಷನ್, (ನನ್ನಂಥ ಕುಳ್ಳಿ ಮಿಲಿಟರಿಗೆ ಲಾಯಕ್ಕಿಲ್ಲ ಅಂತ ಗೊತ್ತಾಗಿದ್ದು ಆಮೇಲೆ) ಓದಿದ್ದು ಸಾಹಿತ್ಯ, ಪತ್ರಿಕೋದ್ಯಮ.. ಮಾಡ್ತಿರೋದು ಉದ್ಯಮ.. ಎಷ್ಟು ಬದಲಾಗಿದೆ ಎಲ್ಲವೂ..
ಹಾಗಂತ ಏನೂ ನೆನಪಿಲ್ಲವೇನೇ ಅಂತ ಮನಸನ್ನು ಕೇಳಿದರೆ ಇನ್ನೊಂದಷ್ಟು ನೆನಪುಗಳ ತಣ್ಣನೆ ಮೆರವಣಿಗೆ.. ಮಳೆಗಾಲದ ಸಂಜೆಗಳಲ್ಲಿ ಹದವಾಗಿ ಸುಟ್ಟು ಎಣ್ಣೆ ಸವರಿ ಅಜ್ಜಿಯ ಮಡಿಲಲ್ಲಿ ಕೂತು ಮೆಲ್ಲುತ್ತಿದ್ದ ಹಲಸಿನ ಹಪ್ಪಳದ ರುಚಿ, ದೊಡ್ಡಮ್ಮ ಹಾಲು ಕರೆಯಲು ಕೂಡುವಾಗ ಗಂಗೆ ಹಸುವಿನ ಕೆಚ್ಚಲಿಗೆ ಹಚ್ಚುತ್ತಿದ್ದ ಬೆಣ್ಣೆಯ ನುಣುಪು, ಬಟ್ಟೆ ಜಗಿಯುವ ಅಭ್ಯಾಸವಿದ್ದ ಪುಟ್ಟ ಕರು ಸುಭದ್ರೆ ತಿಂದು ಹಾಕಿದ ನನ್ನ ಸಿಂಡ್ರೆಲ್ಲಾ ಫ್ರಾಕಿನ ಫ್ರಿಲ್ಲು, ನಾನೆಟ್ಟ ಗಿಡದಲ್ಲರಳಿದ ಮೊದಲ ಪಾರಿಜಾತದ ಸೌರಭ, ಈಶ್ವರ ಮಾವನ ಜತೆ ಹೋಗಿ ನೋಡಿದ ಯಕ್ಷಗಾನದ ದೇವಿ ಕೂತಿದ್ದ ಬೆಳ್ಳಿಯ ಜೋಕಾಲಿಯ ಫಳ ಫಳ, ಅಪ್ಪನ ಹೆಗಲ ಮೇಲೆ ಕೂತು ನೋಡಿದ ಕಟೀಲು ಜಾತ್ರೆಯ ತೇರು.. ಉಹುಂ.. ಒಂಚೂರು ಮರೆತಿಲ್ಲ.. ಕೆಲವೊಂದು ಅಮೃತ ಘಳಿಗೆಗಳು ಯಾವತ್ತಿಗೂ ಬದಲಾಗುವುದೇ ಇಲ್ಲವೇನೋ.. ಮೊದಲ ಮಳೆಗೆ ಇಳೆ ಸೂಸುವ ಗಂಧದ ಹಾಗೆ… ಎಷ್ಟೋ ವರ್ಷಗಳಿಂದ ಜತೆಗಿದ್ದರೂ ಮದ್ಯಾಹ್ನವಾಗುತ್ತಿದ್ದಂತೆ ಫೋನ್ ಮಾಡಿ ಎಷ್ಟೊತ್ತಿಗೆ ಬರ್ತೀಯೇ ಎನ್ನುತ್ತ ಬಂದೊಡನೆ ಬರಸೆಳೆದು ಕಚಗುಳಿಯಿಟ್ಟು ತೆಕ್ಕೆಗೆಳೆದುಕೊಂಡು ಮುತ್ತಿನ ಮಳೆ ಸುರಿಸಿ “ನೀ ಅವತ್ತು ಹೇಗಿದ್ದೆಯೋ ಇವತ್ತೂ ಹಾಗೇ ಇದ್ದೀ ಮುದ್ದೂ… ಮಧ್ಯಾಹ್ನದ ಮೇಲೆ ಆಫೀಸಿಗೆ ರಜಾ ಹಾಕೇ..” ಎನ್ನುವ ಇವನ ಹಾಗೇ…

ಗುಟ್ಟು

ನಿನ್ನೆ ನಿನ್ನ ಮಡಿಲಲ್ಲಿ
ತಲೆಯಿಯಿಟ್ಟು
ವಿರಮಿಸಿದಾಗ
ನಾ ಕಳೆದುಕೊಂಡ
ನನ್ನವ್ವ ನೆನಪಾದಳು..

ಪ್ರಶ್ನೆ

ಏನ ಬರೆಯಲಿ ಹೇಳು
ಬರಿದಾಗಿದೆ ಭಾವ
ಉಲಿಯುವೆನೆಂದರೆ ಸಖಾ
ಬತ್ತಿ ಹೋಗಿದೆ ಜೀವ
ಎದೆಯ ತುಂಬೆಲ್ಲ
ಶಿಥಿಲ ಅವಶೇಷ
ಹುಡುಕಿ ಹುಡುಕಿ ಸೋತೆ
ಬೆಳಕು ಲವಲೇಶ
ಒಡೆದ ಹಡಗಿನ ತುಂಬ
ಕಣ್ಣೀರ ಸವಾರಿ
ಕಣ್ಣಳತೆಯಲಿದೆ ತೀರ
ಸಿಗುತಿಲ್ಲ ಗುರಿ
ಕೆಳೆಯ ಸುಧೆಯಿಂದ
ಸಾಂತ್ವನದ ಸಿಂಚನ
ಆದರೂ ಕಳೆಯಿಲ್ಲ
ಬಿಳುಪೇರಿದೆ ವದನ
ಮನದ ಹಾಳೆಯ ತುಂಬ
ಪ್ರಶ್ನೆಗಳ ಚಿತ್ತಾರ
ನೀಡುವೆಯಾ ಗೆಳೆಯಾ
ನಿನ್ನೆದೆಯ ಉತ್ತರ ?

ಪರಿಣಾಮ

ನಿನ್ನ ನಿಟ್ಟುಸಿರ ಬಿಸಿಗೆ
ನನ್ನ ಕನಸಿನ ಹೂಗಳು
ಒಣಗಿ ಹೋದವು..

ನಿನ್ನ ಕಣ್ಣೀರ ಹನಿಗೆ
ಮನದ ರಂಗೋಲಿಗಳು
ಕದಡಿ ರಾಡಿಯಾದವು..

ನಿನ್ನ ನಡಿಗೆಯ ಭಾರಕ್ಕೆ
ನನ್ನ ಉತ್ಸಾಹದ ಬುಗ್ಗೆಗಳು
ಒಡೆದು ಮರೆಯಾದವು..

ನಿನ್ನ ದುಗುಡದ ಪರಿಗೆ
ನನ್ನ ನಿರೀಕ್ಷೆ ಹಕ್ಕಿಗಳು
ರೆಕ್ಕೆ ಮುರಿದು ನರಳಿದವು..

ನಿನ್ನ ನೋವಿನ ದನಿಗೆ
ನನ್ನ ಮಧುರಾಲಾಪಗಳು
ಕೊರಳಲ್ಲೇ ಇಂಗಿಹೋದವು..

ಒಲವೆ ನಮ್ಮ ಬದುಕು ಮತ್ತು ಕನಸಿನ ಹೆಣ

Withered
ನಿನ್ನನ್ನ ಶ್ರೀಮಂತಿಕೆಯಲ್ಲಿ ನೋಡಿಕೊಳ್ಳಲು ನನ್ನಿಂದಾಗದೇನೋ.. ಅವನಂದ. ದುಡ್ಡೊಂದೇ ಬದುಕಲ್ಲ ಕಣೋ. ಮನ ತುಂಬ ಒಲವಿದೆಯಲ್ಲ ಸಾಕು. ನೀ ಹೇಗಿದೀಯೋ ಹಾಗೇ ಇಷ್ಟ ಅವಳಂದಳು. ಮನೆ ಮಂದಿ ಎಲ್ಲ ಒಪ್ಪಿಯೇ ಆದ ಸಂಭ್ರಮದ ಮದುವೆ. ಇವನಿಗೆ ಪೂತರ್ಿ ಜಗತ್ತೇ ತನ್ನದಾದ ಸಂಭ್ರಮ. ಅವಳಿಗೆ ಸ್ವರ್ಗವೇ ತನ್ನ ಬಳಿ ಬಂದಂತೆ ಭಾಸ. ಜೋಡಿ ಅಂದ್ರೆ ಹೀಗಿರಬೇಕು. ಎಲ್ಲರ ಬಾಯಲ್ಲೂ ಇವರದೇ ಮಾತು. ಹೊಸ ಮನೆ ಹುಡುಕುವುದರಲ್ಲಿ, ಹನಿಮೂನಿನಲ್ಲಿ ಅರ್ಧ ವರ್ಷ ಸಂದು ಹೋಯ್ತು. ನಿನಗೇನೂ ಕೊಡಿಸಲಿಲ್ಲ ಅವನಂದಾಗ ನಂಗೆ ನಿನ್ನ ಹೊರತೇನೂ ಬೇಕಿಲ್ಲ ಅನ್ನುವುದೇ ಅವಳಿಗೂ ಖುಷಿ. ಮತ್ತೆ ಅವಳನ್ನು ಅವನು, ಅವನನ್ನು ಅವಳು ಮೆಚ್ಚಿಸುವ ಭರದಲ್ಲಿ ಮೊದಲೊಂದು ವರ್ಷ ಉರುಳಿದ್ದು ಗೊತ್ತಾಗಲಿಲ್ಲ. ಪ್ರೀತಿಯ ಜತೆ ಇನ್ನೊಂದಷ್ಟು ಸಂಪಾದನೆಯೂ ಬೇಕು ಬದುಕಿಗೆ ಅನ್ನೋದು ಇಬ್ಬರಿಗೂ ಹೊಳೆಯಲಿಲ್ಲ. ಹೊಸ ದಾರಿ ಹುಡುಕಲಿಲ್ಲ. ತುಂಬು ಒಲುಮೆಯಿದೆಯಲ್ಲ ಎಂಬ ಗಟ್ಟಿ ನಂಬಿಕೆ. ಅಷ್ಟರಲ್ಲಿ ಮನೆಯಂಗಳದಲ್ಲಿ ರಿಸೆಷನ್ ಎಂಬ ಅತಿಥಿ ಬಂದು ನಿಂತಿತ್ತು. ಎಲ್ಲೂ ದುಡ್ಡಿಲ್ಲ. ಅವನ ಉದ್ಯಮ ಬೆಳೆಯಲಿಲ್ಲ. ಇವಳ ಸಂಬಳ ಸಿಗಲಿಲ್ಲ. ನಿನಗೇನಾದರೂ ಬೇಕಾ ಕೇಳುವುದು ಅವನಿಗೂ ಕ್ರಮೇಣ ಮರೆವಾಯ್ತು. ಇವಳಿಗೆ ಅವನ ಹೊರತೂ ಇನ್ನೇನಾದರೂ ಬೇಕೆನಿಸಲು ಶುರುವಾಯ್ತು. ವಸ್ತು ಒಡವೆ ಬೇಕೆನಿಸಿದಾಗ ದುಡ್ಡಿಲ್ಲವೆಂತಲೇ ಇಬ್ಬರೂ ಸುಮ್ಮನಿರುತ್ತಿದ್ದರು. ಎಷ್ಟರ ಮಟ್ಟಿಗೆ ಆಸೆ ನುಂಗಿ ಸುಮ್ಮನಿರಬಹುದು ? ಇಬ್ಬರಲ್ಲೂ ಸಣ್ಣಗೆ ಅಸಹನೆ. ಅಷ್ಟರಲ್ಲಿ ಮಗುವೊಂದಾದರೆ ಚೆನ್ನಿತ್ತೇನೋ.. ರಿಸೆಷನ್ ಆ ಕನಸನ್ನೂ ನುಂಗಿತು. ಅವನು ಸಣ್ಣ ವಿಚಾರಕ್ಕೂ ರೇಗುವುದು ಮಾಮೂಲಾಯ್ತು; ಮತ್ತು ಇವಳು ಅಳುವುದೂ. ಗಂಡ ಹೆಂಡಿರ ಜಗಳ ಉಂಡು ಮಲಗಿದರೂ ಮುಗಿಯಲಿಲ್ಲ. (ಹಾಗೆ ಮುಗಿಯಲು ಇವರು ಹಳೆಯ ಕಾಲದ “ಅವಿದ್ಯಾವಂತರಲ”್ಲ) ಈಗ ದುಡ್ಡು ಕನಸುಗಳನ್ನು ನುಂಗಿದ ನಂತರ ಇಬ್ಬರಿಗೂ ಅರ್ಥವಾಗಿದೆ ದುಡ್ಡು ಬದುಕಲ್ಲ ಮತ್ತು ದುಡ್ಡಿಲ್ಲದೆ ಬರಿಯ ಒಲುಮೆಯಿಂದ ಬದುಕು ಸಾಗದು. ಆದರೆ ಹೊಸ ಸಂಪಾದನೆಗಿಂದು ದಾರಿಯಿಲ್ಲ. ಕೆಲಸ ಕೊಡಬಹುದಾದವರ ಬಳಿಯೂ ಸಂಬಳಕ್ಕೆ ದುಡ್ಡಿಲ್ಲ.. ಮೊನ್ನೆಯಷ್ಟೇ ಹೊಳೆಯುತ್ತಿದ್ದ ಜೋಡಿ ಕಂಗಳ ತುಂಬ ಇಂದು ನೀರು.. ಅದರಲ್ಲಿ ತೇಲುತ್ತಿರುವ ಕನಸುಗಳ ಹೆಣಗಳು.