ಶಿಕ್ಷಣದ ಮಹತ್ವ ಹೆಚ್ಚಾಗುತ್ತಿದ್ದಂತೆ ಅದರ ವ್ಯಾಪ್ತಿ ಮತ್ತು ವಿಸ್ತಾರಗಳೂ ಬದಲಾಗುತ್ತಿವೆ. ಮಕ್ಕಳಿಗೆ ಎಳವೆಯಲ್ಲೇ ಅಂದರೆ ಪೂರ್ವ ಬಾಲ್ಯಾವಧಿ ಶಿಕ್ಷಣ ನೀಡುವತ್ತ ಪ್ರಮುಖವಾಗಿ ಗಮನ ಹರಿಸಲಾಗುತ್ತಿದೆ.
ಮಗುವೊಂದರ ಎಂಟನೇ ವಯಸ್ಸಿನ ವರೆಗಿನ ಅವಧಿ ಅದರಲ್ಲೂ ಹುಟ್ಟಿನಿಂದ ನಾಲ್ಕನೇ ವರ್ಷದ ವರೆಗಿನ ಅವಧಿ ಇಡೀ ಬದುಕಿನ ತಳಹದಿ ಎಂಬುದು ಸಂಶೋಧನೆಗಳಿಂದ ದೃಢ ಪಟ್ಟಿದೆ. ವ್ಯಕ್ತಿಯ ಬೌದ್ಧಿಕತೆಗೆ ಸಂಬಂಧಪಟ್ಟ ನರಮಂಡಲಗಳ ಬೆಳವಣಿಗೆ ಮತ್ತು ಅವುಗಳ ವಿನ್ಯಾಸಗಳು ಈ ಹಂತದಲ್ಲೇ ರೂಪುಗೊಳ್ಳುವ ಕಾರಣ ಪೂರ್ವ ಬಾಲ್ಯಾವಧಿ ಶಿಕ್ಷಣದ ಕೊಡುಗೆ ಮಹತ್ತರವಾಗಿದೆ. ಗರ್ಭಧಾರಣೆಯ ಕ್ಷಣದಿಂದಲೇ ಮೆದುಳಿನ ನರ ಕೋಶಗಳು ಇತರ ನರಕೋಶಗಳಿಗಿಂತ ವೇಗವಾಗಿ ವೃದ್ಧಿಯಾಗುತ್ತವೆ. ಹುಟ್ಟಿನ ನಂತರವೂ ಪ್ರಾಥಮಿಕ ಹಂತದಲ್ಲಿ ಬೆಳವಣಿಗೆಯು ಅದೇ ವೇಗದಲ್ಲಿದ್ದು ಹುಟ್ಟಿದಾಗ ಪ್ರೌಢವಯಸ್ಕರ ಮೆದುಳಿನ 25% ತೂಕ ಹೊಂದಿರುತ್ತದೆ. ಒಂದನೇ ವರ್ಷಕ್ಕೆ 50%, ಎರಡನೇ ವರ್ಷಕ್ಕೆ 75% ಮತ್ತು ಮೂರು ವರ್ಷ ತುಂಬುವ ಹೊತ್ತಿಗೆ 90% ಆಗಿರುತ್ತದೆ. ಪ್ರೌಢರಲ್ಲಿ ಸುಮಾರು ನೂರು ಬಿಲಿಯನ್ ನ್ಯೂರಾನ್ ಗಳಿದ್ದು ಅವುಗಳಲ್ಲಿ ಬಹುಭಾಗ ಗರ್ಭದೊಳಗಿದ್ದ ಮೊದಲ ಐದು ತಿಂಗಳಿನಲ್ಲಿ ರೂಪುಗೊಂಡವುಗಳಾಗಿರುತ್ತವೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಜೀವಿತಾವಧಿಯಲ್ಲಿ ಯಾವಾಗ ಬೇಕಾದರೂ ಇವುಗಳ ಹೊಸ ಹುಟ್ಟು ಸಾಧ್ಯವಾಗಿದ್ದರೂ ಹಳೆಯ ಸತ್ತು ಹೋಗಿರುವ ನ್ಯೂರಾನ್ ಗಳ ಜಾಗವನ್ನು ತುಂಬುವಷ್ಟು ಮಾತ್ರ ಹೊಸದು ಜನ್ಮ ತಳೆಯುತ್ತವೆ. ಆದ್ದರಿಂದಲೇ ಬಾಲ್ಯಾವಸ್ಥೆಯು ಬದುಕಿಗೆ ಪರಿಪೂರ್ಣ ರೂಪ ನೀಡುವ ರೂವಾರಿ ಎನಿಸಿದೆ.
ಪ್ರೂನಿಂಗ್ (pruning) ಎಂಬ ನರಕೋಶಗಳ ನಡುವಣ ಸಂಪರ್ಕಗಳು ನಶಿಸುತ್ತ ಹೋಗುವ ಬೆಳವಣಿಗೆಯ ಬಹುಮುಖ್ಯ ಹಂತವನ್ನು ಮಗು ದಾಟಿ ಬಂದಿರುವುದಿಲ್ಲವಾದ್ದರಿಂದ ಮಗುವಿನ ಮೆದುಳಿನ ಸಾಮರ್ಥ್ಯ ಆಗಾಧವಾಗಿರುತ್ತದೆ ಮತ್ತು ದೊಡ್ಡವರಿಗಿಂತ ಹೆಚ್ಚು ಸಂಖ್ಯೆಯ ಸಿನ್ಯಾಪ್ಸಿಸ್ (ಕ್ರೋಮೋಸೋಮ್ ಜೋಡಿಗಳ ಸಂಗಮ) ಮತ್ತು ಡೆಂಡ್ರೈಟು (ನರ ಸಂಬಂಧಿ ಪ್ರಚೋದನೆಯನ್ನು ಜೀವಕೋಶಕ್ಕೆ ತಲುಪಿಸುವ ಜೀವಕೋಶದ ಕವಲು ಚಾಚಿಕೆಗಳು) ಗಳಿರುತ್ತವೆ. ಅಂದರೆ ಯಾವುದೇ ವಿಚಾರಗಳು ವಿವಿಧ ರೀತಿಯಲ್ಲಿ ಸಂಚರಿಸಬಹುದಾಗಿದ್ದು ಸಂಕೀರ್ಣ ಯೋಚನೆಗಳಿಗೆ ಮೆದುಳು ಬಹು ಬೇಗ ತೆರೆದುಕೊಳ್ಳುತ್ತದೆ. ಮೆದುಳಿನ ಪ್ರೂನಿಂಗ್ ಸಂಪೂರ್ಣವಾಗಿ ಮಗು ಬೆಳೆಯುವ ವಾತಾವರಣವನ್ನು ಅವಲಂಬಿಸಿರುತ್ತದೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದರಲ್ಲಿ ಹುಟ್ಟಿನ ನಂತರದ ಹಲವು ತಿಂಗಳುಗಳ ಕಾಲ ಬೆಕ್ಕಿನ ಮರಿಗಳ ಕಣ್ಣುಗಳನ್ನು ಬಟ್ಟೆಯಿಂದ ಕಟ್ಟಿಡಲಾಯಿತ್ತು. ಬಟ್ಟೆಯನ್ನು ಬಿಚ್ಚಿದ ನಂತರವೂ ಅವುಗಳ ದೃಷ್ಟಿ ಸಾಮರ್ಥ್ಯ ಸಮರ್ಪಕವಾಗಿರಲಿಲ್ಲ. ಏಕೆಂದರೆ ದೃಷ್ಟಿ ಸಂಬಂಧಿ ನರಗಳ ಬೆಳವಣಿಗೆಗೆ ಅವಕಾಶವೇ ಸಿಕ್ಕಿರಲಿಲ್ಲ. ಹಾಗೆಯೇ ಮಕ್ಕಳಲ್ಲೂ ಬುದ್ಧಿಯನ್ನು ಸಾಣೆ ಹಿಡಿದಷ್ಟೂ ಹೆಚ್ಚು ಹರಿತವಾಗುತ್ತ ಹೋಗುತ್ತದೆ. ಉತ್ತೇಜನದ ಕೊರತೆಯಿಂದಾಗಿ ಮೆದುಳಿನ ಸಾಮರ್ಥ್ಯ ನಶಿಸುವುದಕ್ಕಿಂತ ಹೆಚ್ಚಿನ ದುರಂತ ಇನ್ನೊಂದಿಲ್ಲ ಎಂಬುದು ಇಂದಿನ ಬಹಳಷ್ಟು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.
ಮೆದುಳಿನ ಎಡ ಭಾಗವು ತಾರ್ಕಿಕ ಯೋಚನೆಗಳಿಗೆ (Logical) ಸಂಬಂಧ ಪಟ್ಟಿದ್ದು, ಬಲಭಾಗವು ಸೃಜನಶೀಲತೆ ಮತ್ತು ಸ್ಫುಟ ನೆನಪುಗಳಿಗೆ (Creative & Photographic Memory) ಸಂಬಂಧಿಸಿದ ಕಾರ್ಯ ನಿರ್ವಹಿಸುತ್ತದೆ. ಇವುಗಳನ್ನು ನಾವು ಯಾವ ರೀತಿ ಉತ್ತೇಜಿಸುತ್ತೇವೆಂಬುದರ ಮೇಲೆ ಅದರ ಸಾಮರ್ಥ್ಯ ಹೆಚ್ಚುತ್ತಾ ಹೋಗುತ್ತದೆ. ಶಾಲೆಗೆ ಸೇರಿದ ನಂತರವೇ ಕಲಿಕೆ ಪ್ರಾರಂಭಿಸುವುದು ತಪ್ಪೇನಲ್ಲ; ಆದರೆ ಅಷ್ಟರಲ್ಲಾಗಲೇ ಮೆದುಳಿನ ಬಹುಪಾಲು ಬೆಳವಣಿಗೆ ಮುಗಿದು ಹೋಗಿರುವುದರಿಂದ ಅದರ ಸಾಮರ್ಥ್ಯ ವೃದ್ಧಿಸುವ ಅವಕಾಶವನ್ನು ನಾವು ಕಳೆದುಕೊಂಡಾಗಿರುತ್ತದೆ.
ಪೂರ್ವ ಬಾಲ್ಯಾವಧಿ ಶಿಕ್ಷಣ ನೀಡುವವರು ಯಾರು ಮತ್ತು ಅವರಿಗಿರಬೇಕಾದ ಅರ್ಹತೆಗಳೇನು ಎಂಬ ಪ್ರಶ್ನೆ ತುಂಬಾ ಮೌಲಿಕವಾದುದಾಗಿದೆ. ಚೈಲ್ಡ್ ಕೇರ್ ಸೆಂಟರ್ ಗಳು, ನರ್ಸರಿಗಳು, ಪ್ಲೇ ಹೋಮ್ ಗಳೆಲ್ಲವೂ ಇದೇ ವರ್ಗಕ್ಕೆ ಸೇರುತ್ತವೆ. ಪ್ರಸ್ತುತ ತಂದೆ ತಾಯಿಯರಿಬ್ಬರೂ ಕೆಲಸಕ್ಕೆ ಹೋಗುವುದು ಸರ್ವೇ ಸಾಮಾನ್ಯವಾಗಿರುವ ಕಾರಣ ಮಗುವನ್ನು ಅಲ್ಲಿ ಬಿಟ್ಟು ಹೋಗುವುದು ಅನಿವಾರ್ಯವಾಗಿದೆ. ಅಂಥ ಸಂದರ್ಭಗಳಲ್ಲಿ ಇವರು ಮಗುವಿನ ಬುದ್ಧಿ ಬೆಳವಣಿಗೆಯನ್ನು ಪೋಷಿಸುವ ಕೆಲಸ ಮಾಡಬೇಕಿರುತ್ತದೆ. ಅಲ್ಲಿರುವಷ್ಟೂ ಹೊತ್ತು ಮಗುವಿನ ಬೇಕು ಬೇಡಗಳನ್ನು ನೋಡಿಕೊಳ್ಳುವುದೇ ಅಲ್ಲದೆ ಶಾರೀರಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಸಾಮಾಜಿಕ ನಡವಳಿಕೆಗಳನ್ನು ಕಲಿಸುವ ಮತ್ತು ತಿದ್ದುವ ಜವಾಬ್ದಾರಿಯೂ ಅವರದೇ ಆಗಿರುತ್ತದೆ. ಮಗುವಿನ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸುವುದು, ಪ್ರತಿಭೆ ಮತ್ತು ಸ್ವಾವಲಂಬನೆ ಬೆಳೆಸುವಿಕೆ, ಆತ್ಮಗೌರವದ ವೃದ್ಧಿಗೂ ಇವರ ಕೊಡುಗೆ ಅಪಾರವಾಗಿರುತ್ತದೆ.
ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ನರ್ಸರಿ ಅಥವಾ ಪ್ಲೇ ಹೋಂಗಳಲ್ಲಿ ಮಕ್ಕಳನ್ನು ಬಿಡುವ ಮೊದಲು ಅಲ್ಲಿನ ಸಿಬ್ಬಂದಿಗಳು ಈ ನಿಟ್ಟಿನಲ್ಲಿ ಸರಿಯಾದ ಶಿಕ್ಷಣ ಪಡೆದಿದ್ದಾರೆಯೇ ಎಂದು ಪರಿಶೀಲಿಸಿದ ನಂತರವೇ ಮಕ್ಕಳನ್ನು ಅಡ್ಮಿಷನ್ ಮಾಡಿಸುವ ಪ್ರವೃತ್ತಿ ಹೆಚ್ಚಿದೆ. “ನಾವು ಪೂರ್ವ ಬಾಲ್ಯಾವಧಿ ಶಿಕ್ಷಣದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಿದ್ದು ಮಗುವಿನ ಸರ್ವತೋಮುಖ ಬೆಳವಣಿಗೆಯನ್ನು ಸಮರ್ಥವಾಗಿ ಪೋಷಿಸುವ ಅರ್ಹತೆಯುಳ್ಳವರ ಬಳಿ ಮಾತ್ರ ಮಗುವನ್ನು ಬಿಡುವ ನಿರ್ಧಾರ ಮಾಡಿದ್ದೇವೆ” ಎನ್ನುತ್ತಾರೆ ಪುಟ್ಟ ಮಗುವಿನ ತಾಯಿ ರಮ್ಯಾ ಸುಹಾಸ್.
ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಮಕ್ಕಳೊಂದಿಗೆ ಕೆಲಸ ಮಾಡಬಯಸುವವರು ಈ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುವುದು ಕಡ್ಡಾಯವಾಗಲೂಬಹುದು. ಬೆಂಗಳೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಶ್ರೀಮತಿ ವಿ.ಹೆಚ್.ಡಿ. ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ಈ ನಿಟ್ಟಿನಲ್ಲಿ ಹೊಸದೊಂದು ಹೆಜ್ಜೆಯಿಟ್ಟಿದೆ. ಇಲ್ಲಿನ ಮಾನವ ವಿಕಾಸ ವಿಭಾಗವು ಪೂರ್ವ ಬಾಲ್ಯಾವಧಿ ಶಿಕ್ಷಣ ಮತ್ತು ನಿರ್ವಹಣೆ (M.Sc. in Early Childhood Education And Administration (ECEA)) ಎಂಬ ಎರಡು ವರ್ಷದ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಿದ್ದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಾಮಾನ್ಯ ಮಕ್ಕಳು ಮಾತ್ರವಲ್ಲದೆ ವಿಶಿಷ್ಟ ಚೇತನ ಮಕ್ಕಳ ಬಾಲ್ಯ ನಿರ್ವಹಣೆಯನ್ನೂ ಒಳಗೊಂಡಿರುವುದು ಈ ಪದವಿಯ ವೈಶಿಷ್ಟ್ಯ. ಈ ಪದವಿಯು ಪೂರ್ವ ಬಾಲ್ಯಾವಧಿ ಶಿಕ್ಷಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಗ್ರ ಪಾಠಗಳನ್ನು ಹೊಂದಿದ್ದು ಅವುಗಳ ಪ್ರಾಯೋಗಿಕ ಅಳವಡಿಕೆಗಾಗಿ “ಮಕ್ಕಳ ಮಂದಿರ” ಎಂಬ ಪ್ರಾಯೋಗಿಕ ಶಿಶು ವಿಹಾರ ಕೂಡಾ ಇಲ್ಲಿದ್ದು ಇದು ಕಲಿಕೆಗೆ ಬಹಳಷ್ಟು ಸಹಕಾರಿಯಾಗಿದೆ.
ಈ ಪದವಿ ಮುಗಿಸಿದವರು ಡೇ ಕೇರ್, ಪ್ರೀ ಸ್ಕೂಲ್ ಹಾಗೂ ವಿಶೇಷ ಶಿಕ್ಷಣ ಸಂಸ್ಥೆಗಳನ್ನು ಇತರರಿಗಿಂತ ಭಿನ್ನವಾಗಿ ಮತ್ತು ಸಮರ್ಥವಾಗಿ ನಡೆಸಲು ಅರ್ಹರಾಗುತ್ತಾರೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಂಶೋಧಕರಾಗಿ, ಮಕ್ಕಳ ಜಾಹೀರಾತು ಸಂಸ್ಥೆಗಳು, ಮಕ್ಕಳ ಪುಸ್ತಕ ಮತ್ತು ಆಟಿಕೆ ತಯಾರಿಕಾ ಸಂಸ್ಥೆಗಳಲ್ಲಿ, ವಾಕ್-ಶ್ರವಣ ಕೇಂದ್ರಗಳು ಮತ್ತು ಮಕ್ಕಳ ಆಡಿಯೋ ವಿಡಿಯೋ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದಾಗಿದೆ. ಪೂರ್ವ ಬಾಲ್ಯಾವಧಿ ಕಲ್ಯಾಣಕ್ಕಾಗಿ ಶ್ರಮಿಸುವ ಸರ್ಕಾರೇತರ ಸಂಸ್ಥೆಗಳಲ್ಲಿ, ಅಥವಾ ಶಾಲೆಗಳಲ್ಲಿ ಆಪ್ತ ಸಮಾಲೋಚಕರಾಗಿ ಕೆಲಸ ನಿರ್ವಹಿಸಬಹುದಾಗಿದೆ. ಇವೆಲ್ಲಕ್ಕೂ ಹೆಚ್ಚಾಗಿ ಈ ತಳಹದಿಯ ಮೇಲೆ ಸ್ವ ಉದ್ಯೋಗದ ಎಲ್ಲಾ ಅವಕಾಶವಿದೆ. ಪೂರ್ವ ಬಾಲ್ಯಾವಧಿ ಶಿಕ್ಷಣವೆಂಬುದು ನಮ್ಮಲ್ಲಿ ಹೊಸದಾಗಿ ಬರುತ್ತಿರುವ ಪರಿಕಲ್ಪನೆಯಾದ (Concept) ಕಾರಣ ಉದ್ಯೋಗಾವಕಾಶಗಳು ಹೇರಳವಾಗಿವೆ. ಮಕ್ಕಳಿಗಾಗಿ ಕೆಲಸ ಮಾಡುವ ಜಾಣ್ಮೆ, ಮಕ್ಕಳ ಜತೆಗೇ ಇದ್ದು ಕೆಲಸ ನಿರ್ವಹಿಸುವ ತಾಳ್ಮೆ ಇರುವುದು ಮುಖ್ಯವಷ್ಟೆ.
ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಈ ಬರಹದ ಲಿಂಕ್ ಇಲ್ಲಿದೆ. V.H.D COLLEGE ನಲ್ಲಿನ ಈ ಕೋರ್ಸ್ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದಲ್ಲಿ ನನ್ನನ್ನು ಸಂಪರ್ಕಿಸಬಹುದು.
http://www.vijaykarnatakaepaper.com/pdf/2012/07/02/20120702l_004101006.jpg
pdf ಬೇಕಿದ್ದಲ್ಲಿ.:
Early Childhood Education V.K 2 June 2012