ಮತ್ತೆ ಬಂದಿದೆ ಅಮ್ಮನ ಹಬ್ಬ

ಬ್ಲಾಗ್ ಜಗತ್ತಿನ ಬಹುತೇಕ ಮಂದಿ ನಮ್ಮ ಸಮಾಜದ ಆಗುಹೋಗುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಬರೆದಿದ್ದು ನೋಡಿದ್ದರಿಂದ ಇಂಥ ಒಂದು ಸದುದ್ದೇಶದ ಕಾರ್ಯಕ್ರಮದಲ್ಲಿ ಭಾಗಿಗಳಾಗಬಹುದು ಎಂಬ ನಿರೀಕ್ಷೆಯೊಡನೆ ಇದೊಂದು ಆಮಂತ್ರಣ ನೀಡುತ್ತಿದ್ದೇನೆ. ಬನ್ನಿ ಅಮ್ಮನ ಹಬ್ಬಕ್ಕೆ

ಹೆತ್ತವರ ತುತ್ತಿನ ಋಣಕ್ಕೆ….

 

ಪ್ರತಿ ವರ್ಷದಂತೆ ಈ ವರ್ಷವೂ 8-03-2009  ಭಾನುವಾರ ಮಾತೃ ದೇವತೆ ಪುಟ್ಟಚನ್ನಮ್ಮರವರ ಜನ್ಮದಿನದ ಅಂಗವಾಗಿ “ಪುನಂ ಪ್ಯಾಲೇಸ್”, ನಂ. 22, ಹೆಚ್.ಐ.ಜಿ., ಕೆ.ಹೆಚ್.ಬಿ. 2 ನೇ ಸ್ಟೇಜ್, ಬಸವೇಶ್ವರ ನಗರ, ಬೆಂಗಳೂರು-79 ಇಲ್ಲಿ ನಾವು ಮಾತೃ ಉತ್ಸವ ಎಂಬ ಸಾಂಸ್ಕೃತಿಕ ಹಬ್ಬ ಮಾಡುತ್ತಿದ್ದೇವೆ. ಹಿನ್ನೆಲೆ :

 

 ಮಾತೃಶ್ರೀ  ಪುಟ್ಟಚನ್ನಮ್ಮರವರು ಹೆತ್ತ ಮಕ್ಕಳಿಗಷ್ಟೇ ತಾಯಿಯಾಗಿರಲಿಲ್ಲ. ನೊಂದವರೆಲ್ಲರ ತಾಯಾಗಿ ಸ್ಪಂದಿಸಿ ಕಂಬನಿ ತೊಡೆದರು. ಇಂದು ಪುನಂ ಸಂಸ್ಥೆಯು ನ್ಯಾಯ ಧರ್ಮಗಳ ಮಾರ್ಗದಲ್ಲಿ ಸಾಗುತ್ತಿದೆಯೆಂದರೆ ಇಲ್ಲಿ ತಾಯಿ ಹಾಕಿ ಕೊಟ್ಟ ಬುನಾದಿಯಿದೆ. ಆದ್ದರಿಂದಲೇ ಅವರಿಲ್ಲದಿದ್ದರೂ ಇಲ್ಲವೆನಿಸುತ್ತಿಲ್ಲ. ಅಂಥವರು ಜನ್ಮ ತಳೆದ ಕ್ಷಣ ನಮ್ಮ ಪಾಲಿಗೆ ಮಹತ್ವಪೂರ್ಣ. ಅದಕ್ಕಾಗಿ ಅವರ ಜನ್ಮ ದಿನವನ್ನು ಅವರು ಹಾಕಿ ಕೊಟ್ಟ ಆದರ್ಶಗಳಂತೆ ಆಚರಿಸುವ ಸಂಕಲ್ಪ ನಮ್ಮದು

ಹುಟ್ಟಿನಿಂದ ಸಾವಿನವರೆಗೂ ಸಂಘಜೀವಿಗಳಾಗಿಯೇ ಬದುಕುವ ನಾವು ನಮಗೆ ಗೊತ್ತೇ ಇಲ್ಲದಂತೆ ಸಮಾಜದಿಂದ ಬಹಳಷ್ಟು ಪಡೆದುಕೊಂಡಿರುತ್ತೇವೆ. ನಮ್ಮ ಮೇಲೆ ಸಮಾಜದ ಋಣ ಬಹಳಷ್ಟಿದೆ. ಅದನ್ನು ಕೈಲಾದ ಮಟ್ಟಿಗೆ ತೀರಿಸುವುದಕ್ಕೆ ಇದೊಂದು ಪ್ರಯತ್ನವೇ ಹೊರತು ನಾವಿದನ್ನು ಸಾಧನೆ ಅಂತಾಗಲೀ, ನಾವು ಮಾಡುತ್ತಿರೋದು ಯಾರೂ ಮಾಡದ ಮಹತ್ಕಾರ್ಯ ಅಂತಾಗಲೀ ಭಾವಿಸಿಲ್ಲ. ರಕ್ತದಾನದಂಥ ಸೇವೆಯಿಂದ ಸಿಗಬಹುದಾದ ಪುಣ್ಯಕ್ಕಿಂತ ಒಂದಷ್ಟು ಜೀವಗಳಿಗೆ ಸಹಾಯ ಮಾಡಿದ ನೆಮ್ಮದಿ ಸಿಗುತ್ತದಲ್ಲ ಅದು ಹೆಚ್ಚಿನದು

mathru-invite-21mathru-invite-12

 

ವಿಶೇಷ ಏನು

ವಿಶೇಷ ಏನೆಂದರೆ ಇದು ಪೂರ್ತಿಯಾಗಿ ಜನಜಾಗೃತಿಗಾಗಿ ಸೇವಾಮನೋಭಾವದಿಂದ ಮಾಡುವ ಹಬ್ಬ. ಇದರ ಹಿಂದೆ ಯಾವುದೇ ಸ್ವಾರ್ಥವಿಲ್ಲ. ಪ್ರಚಾರಗಳ ಅಬ್ಬರವಿಲ್ಲ. ಯಾರೋ ಒಂದಿಬ್ಬರನ್ನು ಉತ್ಸವ ಮೂರ್ತಿಗಳಾಗಿ ಮೆರೆಸಲು, ಅಥವಾ ಯಾವುದೋ ಒಂದು ಪಕ್ಷಕ್ಕೆ ಪ್ರಚಾರ ನೀಡಲು ಮಾಡುವ ಕಾರ್ಯಕ್ರಮ ಇದಲ್ಲ. ಇಲ್ಲಿ ಯಾರದೂ ಕಟೌಟ್, ಭಾವಚಿತ್ರಗಳ ಬ್ಯಾನರ್ ಇರಲ್ಲ. ವಿಶೇಷವಾಗಿ ನಿಮ್ಮ ಗಮನಕ್ಕೆ ತರಬಯಸುವುದೆಂದರೆ, ಕಾರ್ಯಕ್ರಮದ ನೆಪದಲ್ಲಿ ಚಂದಾ ವಸೂಲಿ ಮಾಡಿ ಒಂದಷ್ಟನ್ನು ಖರ್ಚು ಮಾಡಿ ಉಳಿದಿದ್ದನ್ನು ಸ್ವಂತಕ್ಕೆ ಬಳಸಿಕೊಳ್ಳುವ ಯೋಜನೆ ಇದಲ್ಲ. ಯಾರಿಂದಲೂ ಒಂದು ನಯಾ ಪೈಸೆ ಸಂಗ್ರಹಿಸುವುದಿಲ್ಲ.

 

ಯಾರ್ಯಾರು ಬರ್ತಾರೆ ?

ಧಾರ್ಮಿಕ ಗುರುಗಳು, ರಾಜಕೀಯ ಧುರೀಣರು, ನ್ಯಾಯಾಧೀಶರು, ಪತ್ರಕರ್ತರು, ಚಿತ್ರಲೋಕದ ತಾರೆಯರು, ವೈದ್ಯ ವಿಶಾರದರು, ಕೈಗಾರಿಕೋದ್ಯಮಿಗಳು, ಆರಕ್ಷಕ ಪ್ರಮುಖರು, ಶಿಕ್ಷಣ ತಜ್ಞರು, ಸಾಂಸ್ಕೃತಿಕ ಶ್ರೇಷ್ಠರು, ಸಾಮಾಜಿಕ ಸೇವಾಸಕ್ತರು, ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಬರ್ತಾರೆ. ಆಮಂತ್ರಣ ಪತ್ರಿಕೆಯಲ್ಲಿ ಯಾರದೂ ಹೆಸರಿರುವುದಿಲ್ಲ. ಹೆಸರಿನಾಸೆ ಇಲ್ಲದೆ ಸೇವೆಗಾಗಿಯೇ ಬರುವ ಮನಸ್ಸಿರುವವರು ಅವತ್ತು ಖಂಡಿತ ಬಂದು ಭಾಗವಹಿಸುತ್ತಾರೆ. ಸಾಧ್ಯವಾದರೆ ರಕ್ತದಾನವನ್ನೂ ಮಾಡುತ್ತಾರೆ. ಹಾಗಂತ ಬಂದವರೆಲ್ಲ ರಕ್ತದಾನ ಮಾಡಬೇಕೆಂಬ ಒತ್ತಾಯ ಖಂಡಿತ ಇಲ್ಲ.

ಇನ್ನು ಮೂಳೆ, ಹೃದಯ, ನೇತ್ರ ತಪಾಸಣೆ ಮತ್ತು ದಂತ ತಪಾಸಣೆ ಹಾಗೂ ಚಿಕಿತ್ಸೆಗಳಿಂದ ಒಂದಷ್ಟು ಮಂದಿಗೆ ಸಹಾಯ, ಮಾರ್ಗದರ್ಶನ ದೊರಕುತ್ತದೆ. ಆಯುರ್ವೇದೀಯ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯಿಂದ ನಮ್ಮದೇ ಆದ ಸನಾತನ ಆರೋಗ್ಯ ವೇದದ ಪ್ರಯೋಜನಗಳು ಸಿಗುತ್ತವೆ. ಯಾವುದೇ ಔಷಧಿ ಸೇವಿಸದೆ ದೇಹದ ಸ್ವಾಸ್ಥ್ಯ ಕಾಪಾಡುವ ಯೋಗವನ್ನು ಬದುಕಿಗೆ ಅಳವಡಿಸಿಕೊಳ್ಳುವುದು ಹೇಗೆಂಬ ಜ್ಞಾನ ಇಲ್ಲಿ ಸಂಪಾದನೆಯಾಗುತ್ತದೆ.

 

ವಿನಂತಿ :

ಇಂಥದ್ದೊಂದು ಸೇವಾಕಾರ್ಯಕ್ಕೆ ನಿಮ್ಮ ಬೆಂಬಲ ಬೇಕು. ಎಲ್ಲರೂ ಬರಲು ಅನುಕೂಲವಾಗಲಿ ಅನ್ನೋ ಕಾರಣಕ್ಕೆ ಇಡೀ ದಿನ ಕಾರ್ಯಕ್ರಮ ಹಮ್ಮಿಕೊಂಡಿರೋದು. ವರ್ಷದ ಒಂದು ದಿನದ ಸ್ವಲ್ಪ ಸಮಯವನ್ನು ಸೇವೆಗಾಗಿ ಮೀಸಲಿಟ್ಟು ನಮ್ಮೊಡನೆ ಕೈ ಜೋಡಿಸಿ. ಹೆಚ್ಚು ಜನ ಬಂದಷ್ಟು ಹೆಚ್ಚು ಹುಮ್ಮಸ್ಸು ನಮಗೆ. ದಯವಿಟ್ಟು ಬನ್ನಿ. ಸಾಧ್ಯವಾದರೆ ಕುಟುಂಬದವರು ಹಾಗೂ ಸ್ನೇಹಿತರನ್ನೂ ಕರೆತನ್ನಿ. ಒಮ್ಮೆ ಬಂದರೆ ಇದು ಎಲ್ಲ ಕಾರ್ಯಕ್ರಮಗಳ ಹಾಗಲ್ಲ ಅನ್ನೋದು ನಿಮಗೇ ಗೊತ್ತಾಗತ್ತೆ.

ಜಗತ್ತಿನೆಲ್ಲೆಡೆ ಇಂದು ಹಿಂಸೆ, ಭಯೋತ್ಪಾದನೆಗಳಂಥ ಹಲವು ತಲ್ಲಣಗಳು ಅತ್ತಹಾಸಗೈಯುತ್ತ ಮೆರೆಯುತ್ತಿವೆ. ಯಾರದೋ ಅಹಂಗೆ ಯಾರೋ ಬಲಿಯಾಗುತ್ತಿದ್ದಾರೆ. ಸಂದರ್ಭಗಳಲ್ಲಿ ನಾವು ಮಾನವೀಯತೆಯ ಬೆಳಕು ಹೊತ್ತಿಸಲು ಶ್ರೀಕಾರ ಹಾಕೋಣ. ನಾಳೆ ಅದುವೇ ಜಗ ಬೆಳಗುವ ಜ್ಯೋತಿಯಾದೀತುಅಹಮಿನ ಕೋಟೆಯ ಕೆಡವಿ ಹಾಕಿ ಮನವು ತೆರೆಯಲಿ ಸ್ನೇಹಕೆ; ಜತೆಯಾಗಿ ಸಾಗಲಿ ಕೋಟಿ ಹೆಜ್ಜೆಗಳು ಬಾಳಿನೊಲುಮೆಯ ತೀರಕೆಎಂಬ ವಾಣಿ ನಿಜವಾಗಲಿ.

%%%%%%%%%%%%%%%%%

 

ನಿಮ್ಮಲ್ಲಿ ಕೆಲವರಿಗೆ ನನ್ನ ಪರಿಚಯ ಇಲ್ಲಕೆಲವರ ಪರಿಚಯ ನನಗಿಲ್ಲ.. ಏನೂ ತೊಂದರೆಯಿಲ್ಲ.. ನೀವು ಬಂದು  ನಂಗೆ ಫೋನ್ ಮಾಡಿ. ಮಾತೃ ಉತ್ಸವದ ನೆಪದಲ್ಲಿ ಸ್ನೇಹದ ಹೂ  ಅರಳಲಿ

          ಶಮ, ನಂದಿಬೆಟ್ಟ

 

 

 

 

 

 

 

 

ಕೋರಿಕೆ

ಹಾಯ್,
ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ Quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
ಧನ್ಯವಾದಗಳು,
ಶಮ, ನಂದಿಬೆಟ್ಟ