ಅಂಗನವಾಡಿಯಲ್ಲೊಂದು ಆರ್ತನಾದ

"ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು"

“ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು”

“ಅಮ್ಮಾ ಅಮ್ಮಾ; ನಂಗೆ ಅಮ್ಮ ಬೇಕೂ; ನಾ ಹೋಗ್ತೀನೀ”

“ಏಯ್ ಸುಮ್ನಿರು; ಜಾಸ್ತಿ ಅತ್ರೆ ಕರಡಿ ಕೋಣೆಗೆ ಹಾಕ್ಬಿಡ್ತೀನಿ ನೋಡು. ಬಾಯ್ಮುಚ್ಕೊಂಡು ಸುಮ್ಮನಿದ್ರೆ ಮಾತ್ರ ಅಮ್ಮ ಬರೋದು. ಇಲ್ಲ ಅಂದ್ರೆ ಕರಡಿ ಬಂದು ಕಚ್ಚಿ ಬಿಡುತ್ತೆ” ಸಂಭಾಳಿಸಿ ಸುಸ್ತಾದ ಶಿಕ್ಷಕಿಯ ಗದರು ದನಿ. (ಇದನ್ನು ಕೇಳಿದ ಮಗುವಿನ ಅಳು ಇನ್ನೂ ತಾರಕಕ್ಕೇರುತ್ತದೆ)

“ಅಮ್ಮಾ ಕರಡಿ ಬರುತ್ತೆ ಕರ್ಕೊಂಡು ಹೋಗಮ್ಮಾ: ನಂಗೆ ನೀನು ಬೇಕಮ್ಮಾ”

ಇದು ಮಾತು ಬರುವ ಮಗುವಿನ ವೇದನೆಯಾದರೆ ಇನ್ನೂ ಮಾತು ಬಾರದ ಪುಟ್ಟು ಕಂದನದು ಬರೀ ಅಳು ಅಳು. ನಡು ನಡುವೆ ಹೊರಡಿಸುವ “ಮಾ” ಶಬ್ದದಲ್ಲಿ ‘ಅಮ್ಮಾ’ ಎಂಬ ಕರೆ.

********

ಅದೊಂದು ಪ್ರತಿಷ್ಠಿತ ಶಾಲೆಯ ಡೇಕೇರ್ ಸೆಂಟರಿನ ದೃಶ್ಯ. ಪ್ರತಿದಿನ ಈ ಎರಡು ಮಕ್ಕಳ ಅಳು ಕೇಳಿ ಯಾಕೋ ಮನಸು ಆರ್ದ್ರವಾಗಿತ್ತು. ಬಹುಶಃ ಹೊಸದಾಗಿ ಸೇರಿಕೊಂಡ ಮಕ್ಕಳಿರಬೇಕು; ಹೊಂದಾಣಿಕೆ ಆಗೋವರೆಗೂ ಅಳುತ್ತಾರೆಂದು ಮೊದಲೊಂದು ವಾರ ಅಂದುಕೊಂಡೆ. ಹದಿನೈದು ದಿನಗಳಾದರೂ ಅಳು ನಿಲ್ಲದ್ದು ಕೇಳಿ ಕೊನೆಗೊಮ್ಮೆ ಮನಸು ತಡೆಯದೇ ಕೇಳಿದರೆ ಅವೆರಡೂ ಮಕ್ಕಳು ಸೇರಿಕೊಂಡು ಎರಡು ತಿಂಗಳಾಯ್ತು ಎಂದರು ಶಿಕ್ಷಕಿ. ದೊಡ್ಡ ಮಗು ದಿಶಾಗೆ ಒಂದೂವರೆ ವರ್ಷ ಮತ್ತು ಚಿಕ್ಕ ಕೂಸು ವಿಷ್ಣುಗೆ ಐದು ತಿಂಗಳು. “ಏನ್ಮಾಡೋದು ಹೇಳಿ; ಮುದ್ದು ಮಾಡಿದ್ರೂ, ಬೈದರೂ ಯಾವ ರೀತೀಲಿ ಹೇಳಿದ್ರೂ ಇವಳು ಅಳು ನಿಲ್ಲಿಸಲ್ಲರೀ. ನಮಗಂತೂ ಸಾಕಾಗಿ ಹೋಗಿದೆ” ಎಂದಿದ್ದೂ ಅದೇ ಶಿಕ್ಷಕಿ.

ಎರಡೂ ಮಕ್ಕಳ ಅಮ್ಮಂದಿರು ಬೆಳಗ್ಗೆ ಎಂಟು ಘಂಟೆಗೆ ಮಕ್ಕಳನ್ನು ಬಿಟ್ಟು ಹೋದರೆ ಸಂಜೆ ಆರಕ್ಕೆ ಮರಳಿ ಮನೆಗೆ ಬರುವಾಗ ಮಕ್ಕಳನ್ನು ಕರಕೊಂಡು ಹೋಗುವವರು. ಆಫೀಸಿಂದ ಮನೆಗೆ ಸುಮಾರು ಒಂದೂವರೆ ಘಂಟೆ ಪ್ರಯಾಣ ಮಾಡಿ ಬಂದ ತಾಯಂದಿರಿಗೆ ಮಕ್ಕಳ ಮುಖ ಕಂಡಾಕ್ಷಣ ಮುಖ ಅರಳುವ ಬದಲು ಸುಸ್ತೇ ಹೆಚ್ಚು ಕಾಣುತ್ತಿತ್ತು. ಮನೆಗೆ ಹೋದ ನಂತರ ಮನೆಕೆಲಸಗಳ ಧಾವಂತ. ಈ ಸರ್ಕಸ್ಸಿನಲ್ಲಿ ಅವರು ಮಕ್ಕಳ ಜತೆ ಖುಷಿಯಾಗಿ ಕಳೆಯಬಹುದಾದ ಸಮಯದ ಬಗ್ಗೆ ಯೋಚಿಸಿದರೆ ಆ ಸಾಧ್ಯತೆ ತೀರ ಕಡಿಮೆ ಎನಿಸಿತು. “ಈ ಸಾಫ್ಟ್^ವೇರ್ ಇಂಡಸ್ಟ್ರಿನೇ ಹಾಗೆ; ನಾನು ಮಗು ನೆಪ ಹೇಳಿ ಒಂದು ವರ್ಷ ಮನೇಲಿದ್ರೆ ನನ್ನ ಪಕ್ಕದ ಟೇಬಲ್^ನವರು ನನ್ನ ಅಷ್ಟೂ ಅವಕಾಶಗಳನ್ನ ಕಸಿದುಕೊಂಡು ಬಿಡುತ್ತಾರೆ. ಮುಂದಿನ ವರ್ಷ ನಾನವರ ಕೈ ಕೆಳಗೆ ಕೆಲಸ ಮಾಡುವಂತಾದರೂ ಆಶ್ಚರ್ಯವಿಲ್ಲ. ಅಂಥ ಅವಮಾನದ ಬದಲು ಇಲ್ಲಿ ಬಿಟ್ಟು ಹೋದರೆ ಹೆಂಗೋ ಆಗತ್ತೆ. ಹೆಂಗಿದ್ರೂ ರಾತ್ರಿ ನಂಜತೆನೇ ಇರುತ್ತಲ್ಲ ಮಗು” ಎಂದಿದ್ದು ತಿಂಗಳಿಗೆ ಐವತ್ತೈದು ಸಾವಿರ ಸಂಬಳ ತರುವ ತಾಯಿ.

ವಿಷ್ಣುವಿನ ತಾಯಿಯದು ಇನ್ನೊಂದು ಕಥೆ. “ಅಯ್ಯೋ ನಮ್ದು ಜಾಯಿಂಟ್ ಫ್ಯಾಮಿಲಿ ಕಣ್ರೀ; ಮನೇಲಿದ್ರೆ ನಾನು ಎಷ್ಟು ಕೆಲ್ಸ ಮಾಡಿದ್ರೂ ನಮ್ಮತ್ತೆಗೆ ಸಾಕಾಗಲ್ಲ. ಹೋಗ್ಲಿ ಮಗು ನೋಡ್ಕೋತಾರಾ ಅದೂ ಇಲ್ಲ. ಅದರ ಬದಲು ತಿಂಗಳಿಗಿಷ್ಟು ಅಂತ ಕೊಟ್ರೆ ಮುಗೀತು ಡೇ ಕೇರ್^ನವರೇ ಮಗೂನ ನೋಡ್ಕೋತಾರೆ. ಇದ್ಯಾವ ತಲೆನೋವೂ ಇಲ್ಲದೇ ಆರಾಮಾಗಿ ಕೆಲಸಕ್ಕೆ ಹೋಗಿ ಬರ್ತೀನಿ. ನಮ್ಮನ್ನ ಬಿಟ್ಟಿರೋದು ಮಗೂಗೂ ಈಗಿಂದ ಅಭ್ಯಾಸ ಆದ್ರೆ ಒಳ್ಳೇದಲ್ವಾ?” ಎಂದವಳಿಗೆ “ಅಷ್ಟಕ್ಕೂ ಮಗು ನಿಮ್ಮನ್ನ ಬಿಟ್ಟಿರಬೇಕಾದ್ದು ಯಾಕೆ” ಕೇಳಬೇಕೆಂದುಕೊಂಡರೂ ಕೇಳದೆ ಸುಮ್ಮನುಳಿದೆ.

ಅಂದರೆ ಮಕ್ಕಳನ್ನು ಸದಾ ಅವುಚಿಕೊಂಡೇ ಇರಬೇಕಾಗಿಲ್ಲ; ಅದು ಸಾಧ್ಯವೂ ಇಲ್ಲ. ಹಾಗಂತ ಎಳೆಗೂಸುಗಳನ್ನ ಯಾರದೋ ಕೈಯಲ್ಲಿಟ್ಟು ನಡೆದುಬಿಟ್ಟರೆ ಆಕೆ “ತಾಯಿ”ಯಾಗಿದ್ದಕ್ಕೇನರ್ಥ ? ಎಳೆಯ ಮಗುವನ್ನು ಬಿಟ್ಟು ಕೆಲಸದ ಟೇಬಲ್^ಗೆ ನಡೆದು ಹೋಗುವುದು ತಾಯಿಗೆ ಸುಲಭವಿರಬಹುದು. ಆದರೆ ಗರ್ಭ ಕಟ್ಟಿದ ಕ್ಷಣದಿಂದಲೇ ತಾಯಿಯೊಡನೆ ಅನೂಹ್ಯವಾದ ಸಂಬಂಧದ ಎಳೆಯಲ್ಲಿ ಬೆಸೆದುಕೊಂಡ ಮಗುವಿಗೆ ತಾಯಿಯಿಂದ ಬೇರಾಗುವುದು ಅಷ್ಟು ಸುಲಭವಲ್ಲ. ಮಗುವಿಗೆ ಅಮ್ಮನೇ ಜಗತ್ತು, ಅವಳೇ ಎಲ್ಲಾ. ಇವತ್ತು ತಾಯಿ ಮಡಿಲಿತ್ತರಲ್ಲವೇ ನಾಳೆ ಅವಳ ಸಂಕಟಕ್ಕೆ, ವೃದ್ಧಾಪ್ಯಕ್ಕೆ ಮಗು ತಾಯಾಗಿ ಪೊರೆಯುವುದು ?

ಇಂದಿನ ತಾಯಂದಿರಿಗೆ ಇದು ಅರ್ಥವಾಗುತ್ತಿದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಆದರೆ ಬೀದಿಗೆರಡರಂತೆ ಬೆಳೆಯುತ್ತಿರುವ ಪ್ರಿಸ್ಕೂಲ್^ಗಳು ಮಕ್ಕಳನ್ನು ತುಂಬಿಕೊಳ್ಳುವ ಚೀಲಗಳಾಗುತ್ತಿರುವುದಂತೂ ಸತ್ಯ. ಹುಟ್ಟಿನ ಮೊದಲ ವರ್ಷವಂತೂ ತಾಯಿಯ ಮಡಿಲಿಗಿಂತ ಮಿಗಿಲಿಲ್ಲ ಮಗುವಿಗೆ. ಮನೆಯಾಚೆಯಿರುವ ಮಗುವನ್ನು ಶಾಲೆಯವರು “ನೋಡಿಕೊಳ್ಳಬಹುದು” ಹೊರತು ತಾಯಿ ಹಾಲು ಕೊಡಲಾರರು; ಹಾಗೇ ಒಲವನ್ನೂ. ತಾಯಿಯ ಬೆಚ್ಚನೆ ಅಪ್ಪುಗೆಯಲ್ಲಿ ಬೆಳೆದ ಮಕ್ಕಳ ಸರ್ವತೋಮುಖ ಬೆಳವಣಿಗೆ ಬಹಳ ಚೆನ್ನಾಗಿ ಆಗುತ್ತದೆ ಮತ್ತು ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಲ್ಲ ತಾಕತ್ತು ತಾಯಿ ಜತೆಯಲ್ಲಿ ಬೆಳೆಯದ ಮಕ್ಕಳಿಗಿಂತ ಹೆಚ್ಚಿರುತ್ತದೆ ಎಂಬುದು ಇತ್ತೀಚಿನ ಸಂಶೋಧನೆಗಳು ತೆರೆದಿಟ್ಟ ಸತ್ಯ.  “All I am, or can be, I owe to my angel mother.” ಅಂತಾನೆ ಜಗತ್ತು ಕಂಡ ಮಹಾ ನಾಯಕ ತಾಯ ಮಡಿಲಿನಲ್ಲಿ ಬದುಕು ಕಲಿತ ಅಬ್ರಹಾಂ ಲಿಂಕನ್. ಭಾವನೆಗಳನ್ನು ನಿಭಾಯಿಸುವುದರಲ್ಲಿ, ಯಾವುದೇ ಸಮಸ್ಯೆಗಳನ್ನು ಬಿಡಿಸುವುದರಲ್ಲಿ, ಬುದ್ಧಿವಂತಿಕೆಯಲ್ಲಿ ಕೂಡ ತಾಯಿ ಪೊರೆದ ಮಕ್ಕಳೇ ಮುಂದಿರುತ್ತಾರೆ ಅಂತಾರೆ ಈ ಕ್ಷೇತ್ರದ ಸಂಶೋಧಕರು.  “ನಾನು ನನ್ನ ಮಗಳಿಗೆ `ಕ್ವಾಲಿಟಿ ಟೈಮ್` ಕೊಡುತ್ತೇನೆ. ಈಜು, ನಾಟಕ, ಕರಕುಶಲ ಕಲೆಯ ತರಗತಿ ಎಲ್ಲಕ್ಕೂ ನಾನೇ ಕರೆದುಕೊಂಡು ಹೋಗುತ್ತೇನೆ. ಪುಸ್ತಕಗಳನ್ನು ತರಲು ನಾವಿಬ್ಬರೂ ಒಟ್ಟಿಗೆ ಹೋಗುತ್ತೇವೆ. ಅವಳಿಗೆ ಒಳ್ಳೊಳ್ಳೆಯ ಕತೆಗಳನ್ನು ಹೇಳುತ್ತೇನೆ. ಅದಕ್ಕಿಂತ ಮಿಗಿಲಾಗಿ ನನ್ನ ಕಷ್ಟವನ್ನೂ ಹೇಳಿಕೊಳ್ಳುತ್ತೇನೆ. ಅವಳು ತುಂಬಾ ಮೆಚ್ಯೂರ್ ಆಗಿ ಬೆಳೆಯಲು ಇದರಿಂದ ಸಾಧ್ಯವಾಗಿದೆ. ರಂಗಶಂಕರದಲ್ಲಿ ನಾನು ಹೆಚ್ಚು ಮಕ್ಕಳ ನಾಟಕ ನೋಡಿದ್ದೇ ಅವಳಿಗಾಗಿ”  ಎನ್ನುತ್ತಾರೆ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್.

ಆಕರ್ಷಕ ತಲೆಬರಹ ಮತ್ತು A Home away from Home ಎಂಬ ಅಡಿ ಬರಹದೊಡನೆ ಮಕ್ಕಳನ್ನು ತುಂಬಿಕೊಳ್ಳುವ ಶಾಲೆಗಳಲ್ಲಿ ಬಹುತೇಕ ಶಿಕ್ಷಕರಾಗಲೀ, ಆಯಾಗಳಾಗಲಿ ಆ ಕೆಲಸಕ್ಕೆ ತರಬೇತಿ ಪಡೆದವರಾಗಿರುವುದಿಲ್ಲ. ಅಲ್ಲದೇ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ತರಬೇತಿ ಯಾಕೆ ಎಂಬ ನಮ್ಮ ಮನೋಭಾವವೂ ಇದಕ್ಕೆ ಕಾರಣ. ಅತ್ತರೆ ಏನೋ ಮಾಡಿ ಸಮಾಧಾನಪಡಿಸಿದರಾಯ್ತು ಎಂಬ ನಿರ್ಲಕ್ಷ್ಯ ಭಾವ. ಇದರಿಂದಾಗಿ ಮಗುವಿಗೆ ವಯಸ್ಸಿಗೆ ತಕ್ಕ ಪಾಲನೆ ಪೋಷಣೆ ಯಾವುದೂ ಸಿಗದು. ಕರಡಿಯ ಹೆದರಿಕೆಗೆ ಸುಮ್ಮನಾಗುವ ಮಗುವಿನ ಮನಸ್ಸು ಅರಳುವ ಮೊದಲೇ ಮುದುಡುವುದರಲ್ಲಿ ಸಂಶಯವೇ ಇಲ್ಲ.

ಕುಟುಂಬವೆಂದ ಮೇಲೆ ಪ್ರೀತಿ, ಸಿಟ್ಟು, ಜಗಳ, ಕೆಲಸ, ಅಸಮಾಧಾನ ಎಲ್ಲವೂ ಇದ್ದಿದ್ದೇ. ಮಗುವೊಂದು ಬಂದ ನಂತರ ಇವೆಲ್ಲದರ  ಜತೆ ಅದೊಂದು ಮಹತ್ತರ ಜವಾಬ್ದಾರಿ ಕೂಡ ಹೌದು. ನಮ್ಮ ಕನಸುಗಳ ಮುಂದುವರಿಕೆಯೂ ಹೌದು. ಅದನ್ನು ನಿಭಾಯಿಸಲೊಂದಷ್ಟು ಎಕ್ಸ್^ಟ್ರಾ ಜಾಣ್ಮೆ ಮತ್ತು ತಾಳ್ಮೆ ತಂದುಕೊಳ್ಳಬೇಕು. ದುಡ್ಡಿನ ಗಳಿಕೆಗೆ ಯಾವಾಗಾದರೂ ಹೊರಡಬಹುದು; ಆದರೆ ಮಗುವಿನ ಮುದ್ದಿನ ಗಳಿಕೆಗೇ ಸಮಯವಿರದಿದ್ದಲ್ಲಿ ದುಡ್ಡು ತುಂಬಿದ ಪರ್ಸು ಮನ ತುಂಬಲಾರದು. ಇದು ಅರ್ಥ ಆದಾಗಷ್ಟೆ ಬದುಕಿನಂಗಳದ ಹೂವು ಅರಳಿ ಮನೆ ಮನ ತುಂಬ ಸುಗಂಧ ಹರಡಲು ಸಾಧ್ಯ.

 %%%%%%%%%%%

18 ಜೂನ್ 2014 ರ ಕನ್ನಡಪ್ರಭದ ಬೈಟುಕಾಫಿಯ 3ನೇ ಪುಟದಲ್ಲಿ ಪ್ರಕಟಿತ

(ಚಿತ್ರ ಕೃಪೆ : ಇಂಟರ್^ನೆಟ್)


ಹಕ್ಕೀ ನಿನ್ನ ಅಡ್ರಸ್ ಹೇಳು..

ಗುಬ್ಬಚ್ಚೀ...

ಗುಬ್ಬಚ್ಚೀ...

ಮೈ ಡಿಯರ್ ಗುಬ್ಬಚ್ಚೀ,
ವರ್ಷಗಳ ನಂತರ ಇವತ್ತು ನಿನ್ನನ್ನು ನೋಡಿದೆನಲ್ಲ ಆ ಸಂತೋಷಕ್ಕೆ ಈ ಪತ್ರ. ನಿನ್ನನ್ನು ನೋಡ್ತಿದ್ದಂತೆ ನಾನು ಛಕ್ಕಂತ ಚಿಕ್ಕೋಳಾಗ್ಬಿಟ್ಟೆ. ಬಾಲ್ಯದ ಖುಷ್ ಖುಷಿಯ ದಿನಗಳ ಚಿತ್ರ ಕಣ್ಣ ಮುಂದೆ. ಹೌದು ಗುಬ್ಬಚ್ಚೀ.. ನನ್ನ ಬಾಲ್ಯಕ್ಕೂ ನಿಂಗೂ ಬಿಡಿಸಲಾರದ ನಂಟು..

ನಿಂಗೊತ್ತಾ ಹಕ್ಕೀ.. ಅವತ್ತು ನಾವಿದ್ದುದು ಪುಟ್ಟ ಹಳ್ಳೀಲಿ. ಹೆಂಚು, ಆರ್.ಸಿ.ಸಿಗಳ ಹಂಗಿಲ್ಲದ ತೆಂಗು ಅಡಿಕೆಯ ಗರಿಗಳ ಛಾವಣಿ.. ಅದರ ಕೆಳಗೆ ನಮ್ಮ ವಾಸ; ಮೇಲ್ಗಡೆ ನಿನ್ನ ಆವಾಸ. ಈಗ ಟೆರೇಸು ಮನೆ ಕಟ್ಟಿಕೊಂಡು ನಿಂಗೆ ಮನೆಯಿಲ್ಲದಂತೆ ಮಾಡಿದೆವಾ ನಾವು ? ನನ್ನಂತೆಯೇ ಪುಟ್ಟದಾಗಿದ್ದ, ತಮ್ಮನ ತೊದಲು ಮಾತಿನಂತೆ ಚಿಂವ್ ಚಿಂವ್ ಎನ್ನುತ್ತಿದ್ದ ನಿನ್ನ ಕಂಡರೆ ನಂಗೆ ಅದೇನೋ ಅಕ್ಕರೆ. ಎಲ್ಲ ಅಮ್ಮಂದಿರು ಚಂದಮಾಮ ತೋರಿಸಿ ಉಣಿಸುತ್ತಿದ್ದರೆ ನನ್ನಮ್ಮ ನಿನ್ನ ತೋರಿಸಿ ಉಣಿಸುತ್ತಿದ್ದಳು. ಅವತ್ತಿಂದ ಶುರುವಾದ ಈ ಅಪ್ಯಾಯತೆ ಇನ್ನೂ ಹಾಗೇ ಇದೆ.

ಅದ್ಯಾಕೋ ಗೊತ್ತಿಲ್ಲ, “ಗುಬ್ಬಚ್ಚಿ” ಅಂದ್ರೆ ಸಾಕು ಸುಮ್ ಸುಮ್ನೇ ಪ್ರೀತಿ; ಈ ಒರಟನ ಮೇಲಿದೆಯಲ್ಲ ಹಾಗೆ.. ನಿನಗಿಂತ ಚೆಂದದ ಹಕ್ಕಿಗಳು ಅದೆಷ್ಟೋ ಇದ್ದಾವು. ಆದರೆ ನಿನ್ನ ಚಿಲಿಪಿಲಿ, ನಿನಗೇ ಯುನೀಕ್ ಆಗಿರೋ ಪುಟ್ಟ ಆಕಾರ, ನಿನ್ನ ಹಾರಾಟದ ಸೊಗಸು, ಒಂದೊಂದೇ ಕಡ್ಡಿ ಹೆಕ್ಕಿ ತಂದು ನೀ ಗೂಡು ಕಟ್ಟುವ ಪರಿಯ ಚೆಂದವೇ ಬೇರೆ. ನಿನಗಿಂತಲೂ ಪುಟ್ಟ ಕಂದಮ್ಮಗಳಿಗೆ ನೀ ತುತ್ತು ಕೊಡುತ್ತಿದ್ದರೆ ಅದು ಜಗತ್ತಿನ ಅದ್ಭುತ ದೃಶ್ಯ.

ಗುಬ್ಬಚ್ಚಿ ಡಿಯರ್, ಅಜ್ಜಿ ಮನೇಲಿದ್ದು ನಾನು ಅಂಗನವಾಡಿಗೆ ಹೋಗ್ತಿದ್ದೆ ನೋಡು, ಆವಾಗ ಅಡಿಗೆ ಮನೆಯ ಬಲಗಡೆ ಮೂಲೇಲಿ ನಿನ್ನ ಗೂಡಿತ್ತು ನೆನಪಿದೆಯಾ ? ನಾ ಶಾಲೆ ಬಿಟ್ಟ ಕೂಡಲೇ ಓಡುತ್ತ ಮನೆಗೆ ಬರಲು ಇದ್ದ ಸೆಳೆತವೇ ನೀನು ಕಣೋ.. ನಿನ್ನಾಟ ಚಿನ್ನಾಟ ನೋಡುತ್ತಾ ತಿಂತಾ ಇದ್ರೆ ತಟ್ಟೆ ಖಾಲಿ ಆಗಿದ್ದೇ ಗೊತ್ತಾಗ್ತಾ ಇರಲಿಲ್ಲ. ಈಗ ನೋಡು ಮಕ್ಕಳ ಊಟ ತಿಂಡಿಗೆ ಕಾರ್ಟೂನ್ ನೆಟ್ವರ್ಕ್, ವಿಡಿಯೋ ಗೇಮ್ ಬಂದ್ಬಿಟ್ಟಿದೆ. ನಿಂಗೆ ಬೇಜಾರಾಗಲ್ವೇನೋ ?

ಆವಾಗೆಲ್ಲ ಮನೆಗಳು ವಿಶಾಲ. ನಿಂಗೆ ಎಲ್ಲೆಂದರಲ್ಲಿ ಗೂಡು ಕಟ್ಟುವ ಸ್ವಾತಂತ್ರ್ಯ. ಈಗ ನಾವಿರುವ ಮನೆಗಳೇ ಬೆಂಕಿ ಪೆಟ್ಟಿಗೆ. ನಿಂಗೆಲ್ಲಿ ಜಾಗ ಕೊಡೋಣ .. ಅಜ್ಜಿ ಮನೆಯ ಹಜಾರದ ಗೋಡೆಯ ತುಂಬೆಲ್ಲ ಹಾಕಿದ್ದ ಮುತ್ತಜ್ಜ ಅಜ್ಜಿಯರ ಫೋಟೋ ಫ್ರೇಮಿನ ಹಿಂದೆ ನಿನ್ನ ಪರಿವಾರದ ತರಹೇವಾರಿ ಮನೆಗಳು. ನಮ್ಮದು ನಾಗರಿಕರ ಜಗತ್ತು. ಹಿರಿತಲೆಗಳ ಫೋಟೋ ಮನೆಯ ಅಂದ ಕೆಡಿಸುತ್ತವೆ. ಅವುಗಳ ಬದಲು ಯಾವ ಬದಿಯಿಂದ ನೋಡಿದರೂ ಅರ್ಥವೇ ಆಗದ ಫ್ರೇಮಿಲ್ಲದ ಲ್ಯಾಮಿನೇಟೆಡ್ ಪೈಂಟಿಂಗುಗಳು. ಇದಕ್ಕೆ ಇಂಟೀರಿಯರ್ ಡಿಸೈನು ಎಂಬ ಹೆಸರು. ನಿನಗೆ ಜಾಗ ಕೊಡದ ಸ್ವಾರ್ಥಿಗಳು ಅಲ್ವಾ ನಾವು ?

ನೀನು ನಮ್ಮ ಪಾಲಿಗೆ ಹಕ್ಕಿಯಲ್ಲ; ನಮ್ಮ ಮನೆ ಮಂದಿ ಎಂದರೆ ನೀನೂ ಸೇರಿದ್ದೆ. ನಾವು ಮಕ್ಕಳೆಲ್ಲ ಸೇರಿ ನಿನ್ನ ಕುಟುಂಬಕ್ಕೆ ಅಂತ್ಲೇ ಕಾಳು ಸಂಗ್ರಹಿಸುತ್ತಿದ್ದೆವು. ಅಜ್ಜಿಯ ಬೈಗುಳಕ್ಕೆ ಕವಡೆ ಕಿಮ್ಮತ್ತು ಕೊಡದೆ ನಿನಗೆ ಗೂಡು ಕಟ್ಟಲು ಅನುಕೂಲ ಆಗ್ಲಿ ಅಂತ ಒಂದಷ್ಟು ಹುಲ್ಲುಗರಿ ತಂದಿಡ್ತಿದ್ದೆವು. ನೀನು ಬರುತ್ತೀ ಅಂತ ಕಾಯ್ತಿದ್ರೆ ನಮಗೆ ಸುಸ್ತಾಗೋ ವರೆಗೂ ನೀನು ಬರ್ತಿರಲಿಲ್ಲ. ನಾವು ಹೋದ ಎರಡೇ ಕ್ಷಣಕ್ಕೆ ಮೆತ್ತಗೆ ಬಂದು ಮಾಯಾವಿಯಂತೆ ಎತ್ತಿ ಒಯ್ಯುತ್ತಿದ್ದೆ ನೀನು. ನಾವು ನಿಂಗೇನಾದ್ರೂ ತಂದ್ರೆ ಬೈಯುತ್ತಿದ್ದ ಅದೇ ಅಜ್ಜಿ ನಿಂಗೆ ಅಂತ್ಲೇ ಒಂದಷ್ಟು ಧಾನ್ಯಗಳನ್ನು ತೆಂಗಿನ ಚಿಪ್ಪಿಗೆ ಹಾಕಿ ಮಾಳಿಗೆ ಮೆಟ್ಟಿಲ ಮೂಲೇಲಿಡ್ತಾ ಇದ್ರು !!

ಗುಬ್ಬಚ್ಚಿ ಪುಟ್ಟೂ, ಈಗಿವೆಲ್ಲ ಬರೀ ನೆನಪುಗಳು ಕಣೋ.. ನಮ್ಮ ಧಾವಂತದ ಬದುಕಲ್ಲಿ, ಪಕ್ಕದವರಿಗಿಂತ ಮೇಲೇರುವ ಆತುರದಲ್ಲಿ ನಾವು ಬದುಕು ಸವೆಸುತ್ತಿದ್ದೇವೆ; ಸವಿಯಲಾಗುತ್ತಿಲ್ಲ. ಅವತ್ತಿನ ದಿನಗಳಲ್ಲಿ ಈ ಓಟವಿರಲಿಲ್ಲ; ಎಲ್ಲರಿಗೂ ಮೊದಲು ಗುರಿ ಮುಟ್ಟಬೇಕೆಂಬ ಸ್ಪರ್ಧೆ ಇರಲಿಲ್ಲ; ಆದರೆ ಬದುಕಲ್ಲಿ ಖುಷಿಯಿತ್ತು. ಮನೆಯ ಅಂಗಣಕ್ಕೆ ಬಂದ ಪಶು ಪಕ್ಷಿಗಳೆಲ್ಲ ನಮ್ಮವು ಅನಿಸುತ್ತಿತ್ತು; ಆದರೀಗ ಮನೆಯವರೇ ದೂರದವರಾಗುತ್ತಿದ್ದಾರೆ. ಇವನ್ನೆಲ್ಲ ನೋಡಿ ನಿಂಗೂ ರೋಸಿ ಹೋಯ್ತಾ ? ಅದಕ್ಕೇ ನೀನು ಕೂಡ ನೇಪಥ್ಯಕ್ಕೆ ಸರಿದು ಹೋದೆಯಾ ? ಹೋಗುವಾಗ ನಮ್ಮ ಖುಷಿ, ನಗು ಎಲ್ಲವನ್ನು ಜತೆಗೇ ಹೊತ್ತೊಯ್ದೆಯಾ ? ಮಗಳು ಐಶ್ವರ್ಯ ಇದಾಳಲ್ಲ…ಅವಳೂ ಥೇಟ್ ನಿನ್ನ ಹಾಗೇ.. ಮುದ್ದು ಸುರಿವ ಮುಖ.. ಹೊಳೆ ಹೊಳೆವ ಕಣ್ಣು.. ಐಶು ಮರಿ ಚಿಕ್ಕಮ್ಮಾ ಎನ್ನುತ್ತ ಎದುರು ನಿಂತರೆ ನೀನೇ ನೆನಪಾಗಿ ಕಾಡ್ತೀಯ… ನಾನೇ ಬಂದು ನಿನ್ನನ್ನು ನೋಡಿಯೇನು ಎಂದರೆ ಹೋಗುವಾಗ ಅಡ್ರಸ್ ಕೂಡ ಕೊಡಲಿಲ್ಲ ನೀನು.. ಈ ಬಾರಿ ಬಂದಾಗ ಮರೀದೇ ಕೊಟ್ಟು ಹೋಗು…

ಗುಬ್ಬಚ್ಚಿ ನೋಡ್ಬೇಕು ಅಂದ್ರೆ ಕಾಡಿಗೇ ಹೋಗಬೇಕು ಅಂತಾರೆ ಮಂದಿ. ನಾವು ಪುರುಸೊತ್ತಿಲ್ಲದ ಜನ; ಕಾಡಿಗೆ ಹೋಗಲು ಸಮಯವಿಲ್ಲ ನಮ್ ಬಳಿ. ಅಷ್ಟಕ್ಕೂ ಕಾಡೆಲ್ಲಿದೆ ಈಗ ? ಅದನ್ನೂ ನಾವು ಹೀಗೆ ತಿನ್ನುತ್ತಲೇ ಇದ್ರೆ ನಮ್ಮದೇ ವೇಗದಲ್ಲಿ ನೀನು ಅಲ್ಲಿಂದಲೂ ಮರೆಯಾಗ್ತೀಯೇನೋ ಅಲ್ವಾ ? ನೋಡು ಎಷ್ಟೊಂದು ಪ್ರಶ್ನೆಗಳು ನನ್ನವು.. ಇದಕ್ಕೆಲ್ಲ ಉತ್ತರಿಸೋಕೆ ಅಂತಲೇ ಮತ್ತೆ ಬರ್ತೀಯಾ ನನ್ನ ಪುಟ್ಟ ಹಕ್ಕೀ ? ಆ ನೆಪದಿಂದ ನಾ ಮತ್ತೆ ಬಾಲ್ಯಕ್ಕೆ ಜಿಗಿಯಬೇಕು; ನೆನಪುಗಳ ಸಂಭ್ರಮದಲ್ಲಿ ಮೀಯಬೇಕು. ನಾವು ಮನುಷ್ಯರಿಗಿಂತ ಒಳ್ಳೆಯ ಮನಸ್ಸು ನಿಂದು.. ನಂಗೆ ನಿರಾಸೆ ಮಾಡಲ್ಲ ಅಲ್ವಾ ? ಕಾಯುತ್ತಿರುತ್ತೇನೆ… ನೀ ಮೊನ್ನೆ ನನ್ನ ಭೇಟಿಯಾದ ಅದೇ ಜಾಗದಲ್ಲಿ.. ಅದೇ ಸಂಪಿಗೆ ಮರದ ಹಸುರೆಲೆ ಕೆಳಗೆ…