ಕುಪ್ಪಳ್ಳಿಯ ತಣ್ಣನೆ ಹವೆಯಲ್ಲಿ ಕಾಲಿಟ್ಟ ನಮಗೆ ಸಂಭ್ರಮದ ಚಿತ್ರೋತ್ಸವದ ಆರಂಭಕ್ಕೇ ಸಿಕ್ಕಿದ್ದು ಬೇಂದ್ರೆ ತಾತನ ಕುರಿತಾದ ಸಾಕ್ಷ್ಯ ಚಿತ್ರ. ಕೆಲವು ಕಡೆಯಂತೂ ಅವರೇ ಎದ್ದು ಬಂದಂತೆ ಭಾಸ.
ನಂತರದ್ದು “ಕಾರಂತಜ್ಜನಿಗೊಂದು ಪತ್ರ” ಸಚ್ಚಿದಾನಂದ ಹೆಗಡೆಯವರ ಕಥೆ, ಜೋಗಿಯವರ ಚಿತ್ರಕಥೆಯಿರುವ ಈ ಸಿನೆಮಾ ನೋಡಿದ್ದು ಕಥೆ ಆಧಾರಿತ ಚಿತ್ರಗಳ ವಿಭಾಗದಲ್ಲಿ. ಭಾರತಿ ಶಂಕರ್ ನಿದರ್ೇಶನ ಬಿಗುವಿಲ್ಲದೆ ಸಾಗಿದಂತೆಯೂ ಮೂವತ್ತು ನಿಮಿಷಗಳಲ್ಲಿ ಮುಗಿಸಬಹುದಾದ ಚಿತ್ರವನ್ನು ಗಂಟೆಗಟ್ಟಲೇ ತೋರಿಸಿದಂತೆಯೂ ನನಗನಿಸಿದ್ದು ಬಹುಶ: ಸೋಜಿಗವೇನಲ್ಲ. ಶಾನುಭೋಗರ ಮಗ ಅಷ್ಟು ಸಣ್ಣ ವಯಸಿನ ರಾಘು ಬಾಯಲ್ಲಿ ಆಡಿಸಿದ ಮಾತುಗಳು ವಯಸಿಗೆ ಮೀರಿದವೇನೋ ಅಂತಲೂ ಅನಿಸಿದ್ದು ಹೌದು. ಕಡಲ ಕೊರೆತದಂಥಾ ವಿಷಯವನ್ನು ನಿರಂತರ ತಲೆ ಕೊರೆವಷ್ಟು ಗಾಢವಾಗಿ ಚಿತ್ರಿಸುವಲ್ಲಿ ಸೋತಿದ್ದಾರೆ. ಕಡಲತೀರದ ಕಥೆಗೆ ಅಲ್ಲಿನದೇ ಭಾಷೆಯ ಟಚ್ ಕೊಟ್ಟಿದ್ದರೆ ಚಿತ್ರಕ್ಕೆ ಮೂವತ್ತು ಮಾರ್ಕು ಹೆಚ್ಚಿಗೆ ಕೊಡಬಹುದಿತ್ತು. ಮೀನುಗಾರ ಅಷ್ಟು ದೊಡ್ಡ ಅಲೆ ಬರುತ್ತೆ ಅಂತ ಹುಡುಗನಿಗೆ ಹೇಳುವಾಗ ತೆರೆಯ ಮೇಲೆ ಕಾಣುವ ಅಲೆ ತೀರಾ ಸಾಮಾನ್ಯ ಗಾತ್ರದ್ದು. ಇನ್ನುಳಿದಂತೆ ಶಾನುಭೋಗರ ಆಡಳಿತ ವ್ಯವಸ್ಥೆಯ ಅಡಿಯಲ್ಲಿರುವ ಊರಿನ ರಾಜಕೀಯಗಳು, ಅಧಿಕಾರಿಗಳ ಉಡಾಫೆ, ಊರಿಗೆ ಊರೇ ಅಳುತ್ತಿದ್ದಾಗಲೂ ನಿರಾಳವಾಗಿ ಕೂರಬಲ್ಲ ತಹಶೀಲ್ದಾರ, ಎಂದೋ ಊರು ಬಿಟ್ಟು ಹೋದ ಮಗನಿಗಾಗಿ ಇನ್ನೂ ಕಾಯುತ್ತಲೇ ಇರುವ ತಾತ, ಮುದ್ದಿನ ಹಸು ಕಪಿಲೆಯನ್ನು ಬಿಟ್ಟು ಹೋಗಲಾರದೆ ಅಳುವ ಶಾನುಭೋಗರ ತಾಯಿಯ ವೇದನೆ ಎಲ್ಲ ಸಹಜ ಸಹಜ.. ನನ್ನ ಮನ ತಟ್ಟಿದ್ದು ಸದಾನಂದ ಮೇಷ್ಟ್ರು ಮಕ್ಕಳನ್ನು ಆವರಿಸಿಕೊಳ್ಳುವ ಪರಿ. ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಅಂಥದ್ದೇ ಅವಿನಾಭಾವ ಸಂಬಂಧ. ಒಂದನೇ ಕ್ಲಾಸಿನ ರುಕ್ಮಯ ಮಾಸ್ತರು, ಎರಡನೇ ಕ್ಲಾಸಿನ ರಮಾನಂದ ಮಾಸ್ತರು, ಪ್ರಮೀಳಾ ಟೀಚರು, ಸುಧಾ, ಶಶಿಕಲಾ ಟೀಚರುಗಳೆಲ್ಲರೂ ನನ್ನ ಮನದಂಗಳದಲ್ಲಿ ಸುಳಿದಾಡಿದ್ದರು. ಮನೆಗಿಂತ ಹೆಚ್ಚು ಹೊತ್ತು ಶಾಲೆಯಲ್ಲಿ ಕಳೆಯುತ್ತಿದ್ದ ನಮಗೆ ಟೀಚರುಗಳೆಂದರೆ ಎಲ್ಲರಿಗಿಂತ ಹೆಚ್ಚು ಶಕ್ತಿವಂತರೆಂಬ ಭಾವ. ಮೂರನೇ ಕ್ಲಾಸಿನಲ್ಲಿದ್ದಾಗ ಶಶಿಕಲಾ ಟೀಚರು ಉಟ್ಟ ಸೀರೆ ನನ್ನಮ್ಮನ ಬಳಿಯೂ ಇತ್ತೆಂಬ ಕಾರಣಕ್ಕೆ ಅದೆಷ್ಟು ಸಂಭ್ರಮವಿತ್ತು ನನಗೆ.. ಮನಸನ್ನು ಪೂರ್ತಿಯಾಗಿ ಬಾಲ್ಯದ ಕಡೆಗೆ ಸೆಳೆದ ಶಾಲೆ ಮತ್ತು ಮಕ್ಕಳ ಚಿತ್ರಣಕ್ಕೆ ವಂದೇ.
ಎಲ್ಲೋ ಓದಿದ ತರಂಗದ ನೆನಪಿನಿಂದ ಮಕ್ಕಳೆಲ್ಲ ಒಟ್ಟಾಗಿ ಕಾರಂತಜ್ಜನಿಗೆ ಪತ್ರ ಬರೆಯುವುದು, ಅವರ ಮಾರುತ್ತರದ ನಿರೀಕ್ಷೆ, ಅವರೊಬ್ಬರು ಜತೆಗಿದ್ದರೆ ಎಲ್ಲಾ ಗೆಲ್ಲಬಲ್ಲೆವೆಂಬ ನಂಬಿಕೆ, ಅವರದೇ ರೀತಿಯಲ್ಲಿ ಮಾಡುವ ಸಂಘಟನೆ, ಕಾರಂತಜ್ಜ ಹೇಳಿದ್ದೇ ಸರಿ ಅವರ ಮಾತಿಗೆ ಎದುರಿಲ್ಲವೆಂಬಂತೆ ಪ್ರತಿರೋಧವಿಲ್ಲದೇ ಮೌನವಾಗಿ ಊರು ಬಿಡುವುದು, ಎಲ್ಲ ಸಹಜವಾಗಿ ಮೂಡಿ ಬಂದಿದೆ. ಈ ಮಕ್ಕಳೆಲ್ಲ ಎಲ್ಲೋ ಒಂದು ಕಡೆ ಭವಿಷ್ಯದ ಬೆಳಕಿನಂತೆ ಕಾಣುವುದು ನಿಜ. ಪರಿಸರ ಸಂರಕ್ಷಣೆ, ಮನುಕುಲ ವಿನಾಶ ತಡೆಯ ನಿಟ್ಟಿನಲ್ಲಿ ಮಾಡಿದ ಈ ಸಿನೆಮಾ ತನ್ನ ಆಶಯವನ್ನು ಪೂರ್ತಿಯಾಗಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಪೂರೈಸುವಲ್ಲಿ ಯಶಸ್ವಿಯಾಗಿದೆ. ಹೈಸ್ಕೂಲು ಮಕ್ಕಳಿಗೆ ತೋರಿಸಿದರೆ ಇನ್ನೂ ಹೆಚ್ಚು ಪರಿಣಾಮಕಾರಿಯಾದೀತು. ಒಟ್ಟಾರೆಯಾಗಿ ನಾನು ಕೊಡಬಹುದಾದ್ದು ಅರವತ್ತು ಮಾರ್ಕು. ಚಿತ್ರದ ಕ್ಲೈಮಾಕ್ಸು ಎಂಬುದನ್ನು ಮೊದಲಿಗೇ ತೋರಿಸುವ ಬದಲು ಕೊನೆಯಲ್ಲಿ ತೋರಿಸಿದ್ದರೆ ಇನ್ನೊಂದೈದು ಜಾಸ್ತಿ ಕೊಡಬಹುದಿತ್ತೇನೋ…
ಇನ್ನುಳಿದ ಚಿತ್ರಗಳ ಬಗ್ಗೆ ನಿಧಾನವಾಗಿ ಬರೆಯುವೆ
(ಚಿತ್ರ ಗೌತಮನ ಅಪ್ಪಣೆಯಿಲ್ಲದೆ ಕದ್ದದ್ದು)