ತಲೆಯೆತ್ತಿ ನೋಡಿದರೆ ಕಪ್ಪು ಆಕಾಶ… ಮಳೆಯನ್ನೂ ಸುರಿಸದೆ ಸುಮ್ಮನಾದ ಮೋಡ… ಮನಸಿನಲ್ಲಿ ಹೆಪ್ಪುಗಟ್ಟಿ ನಿಂತ ದುಖಃದಂತೆ. “ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿದಂತೆ…” ನಿಸಾರರ ಸಾಲುಗಳು ನೆಪಾದವು. ಮೊನ್ನೆ ಗೆಳೆಯ ಹೇಳುತ್ತಿದ್ದ; ನಿನ್ನೊಳಗೇನೋ ಇದೆ ಕಣೇ ಅದನ್ನು ಹೊರ ಹಾಕದ ಹೊರತು ನೀನು ನೀನಾಗುವುದಿಲ್ಲ ಹುಡುಗೀ. ಹೇಳು ಅದೇನು ನಿನ್ನ ಕಾಡುವ ನೋವು ಅಂತ… ಗೊತ್ತಿಲ್ಲ, ಒಮ್ಮೊಮ್ಮೆ ಹೀಗಾಗುತ್ತೆ. ಕಾರಣವೇ ಇಲ್ಲದೆ ಮನ ಮೌನ; ಹೊರಗೆ ಬರಲೊಲ್ಲೆ ಎಂಬಂತೆ ಘನೀಭವಿಸಿ ಒಳಗೆ ಕುಳಿತ ಕಂಬನಿ… ಒಮ್ಮೊಮ್ಮೆ ಚೀರಿ ಹೇಳಬೇಕೆನಿಸುತ್ತದೆ. ಆದರೆ ಬೆಳಕಿನಲ್ಲೇ ಬೆಳೆದ ಸಿದ್ದಾರ್ಥರಿಗದು ಅರ್ಥವಾಗುವುದಿಲ್ಲ. ಕೇಳಬೇಕೆನಿಸುವ ಮನಸೂ ಇಲ್ಲ. ಹಾಗಂತ ಮುನಿಸೇನಿಲ್ಲ. ಸಾಂತ್ವನ ಬೇಕಿನಿಸಿದ ಕ್ಷಣಗಳಲ್ಲಿ ಅನೇಕ ಬಾರಿ ಸಿಕ್ಕಿದ್ದು ಸರಿ ತಪ್ಪುಗಳ ವಿಮರ್ಶೆ. ದಿನವೂ ಬದಲಾಗುತ್ತಿರುವ ಮನುಷ್ಯ ಜಾತಿಯ ಜತೆ ಸಂಬಂಧ ಬೆಸೆದುಕೊಂಡ ನಂತರ ಅರ್ಥ ಮಾಡಿಕೊಳ್ಳುವಿಕೆ ಎಂಬುದು ನನಗರ್ಥವಾಗದ ಮತ್ತು ಬೇಡವಾದ ವಿಚಾರ; ನನ್ನದೇನಿದ್ದರೂ ಒಪ್ಪಿ ಅಪ್ಪುವ ಪ್ರಕ್ರಿಯೆಯಷ್ಟೇ. ಯಾವುದೇ ಉದ್ದೇಶವಿಲ್ಲದೆ ನನ್ನವರೆಂಬ ಸಲಿಗೆಯಿಂದ ಫಿಲ್ಟರ್ ಹಾಕದೆ ಸಹಜವಾಗಿ ಆಡಿದ ಯಾವುದೋ ಮಾತಿಗೆ ನೂರು ವ್ಯಾಖ್ಯಾನ ಟೀಕೆ, ಟಿಪ್ಪಣಿಗಳು, ಮುನಿಸು, ಹಠಗಳ ಪ್ರತಿಕ್ರಿಯೆ. ಎಲ್ಲ ಅವರವರ ಮೂಗಿನ ನೇರಕ್ಕೆ. ಯಾಕೆ ಹಾಗಂದೆ ಏನಾಯ್ತು ನಿನಗೆ ಕೇಳುವ ವ್ಯವಧಾನಕ್ಕಿಂತ ಪಾಠ ಕಲಿಸುವ ತರಾತುರಿ ಹೆಚ್ಚಿನದು. ಆ ಸಂದರ್ಭದಲ್ಲಿ ಹಾಗಲ್ಲ ಹೀಗೆ ಅಂತ ನನ್ನನ್ನೇ ವಿವರಿಸಿಕೊಳ್ಳುವುದು ಸಾಧ್ಯವಾಗದ ಮತ್ತು ಬೇಡವಾದ ವಿಚಾರ. ಬರೆಯ ಹೊರಡುತ್ತೇನೆ ಎಲ್ಲವನ್ನು ಪೂರ್ತಿಗೊಳಿಸಲಾಗದು. ಹಾಗೇ ಅಪೂರ್ಣವಾಗಿ ಉಳಿದವುಗಳು ಹಲವಾರು. ಮತ್ತೆ ಮನ ಮೊಗ್ಗು. ಎಲ್ಲಿ ಹೋದಳು ಶಮಾ ಅಂತ ತಮ್ಮ ಮೆಸೇಜು ಕಳಿಸಿದ್ದಾನೆ… ತಿಂಗಳಿಗೂ ಹೆಚ್ಚಾಯಿತು ಬ್ಲಾಗಿನಂಗಳಕ್ಕೆ ನೀವು ಬರದೆ ಅಂದಿದೆ ಮಾಲತಿಯ ಎಸ್.ಎಂ.ಎಸ್. ನಾ ಹೀಗಾಡ್ತೀನಿ ಅನ್ನೋ ಒಂದೇ ಕಾರಣಕ್ಕೆ ಜೀವದ ಗೆಳೆಯ ಬ್ಲಾಗಿಗೆ ಬರೋದೇ ಬಿಟ್ಟಿದ್ದಾನೆ. ಇನ್ ಬಾಕ್ಸ್ ತೆರೆದು ನೋಡಿದರೆ ಅಲ್ಲೂ ಇದೇ ಪ್ರಶ್ನೆ. ಕೆಲವರಿಗೆ ಬೇಸರ; ಕೆಲವರಿಗೆ ಏನಾಯಿತೆಂಬ ಕಾತರ; ಕೆಲವರಿಗೆ ಕೋಪ. ನನಗರ್ಥವಾಗುತ್ತೆ ಎಲ್ಲವೂ; ಎಲ್ಲರ ಕಾಳಜಿಯೂ… ಆದರೆ ಉತ್ತರಿಸಲಾಗುತ್ತಿಲ್ಲ. ಏನೂ ಬೇಡದ ಭಾವ; ಊಟ ತಿಂಡಿಯೂ, ನಾನು ತುಂಬ ಇಷ್ಟಪಡುವ ರುಮಾಲಿ ರೋಟಿಯೂ ಸೇರುತ್ತಿಲ್ಲ. ಕಾರಣ ಕೇಳಿದರೆ ಗೊತ್ತಿಲ್ಲ ಒಂದೇ ಶಬ್ದ. ಒಟ್ಟಿನಲ್ಲಿ ಮೋಡ ಕವಿದ ವಾತಾವರಣ… ಒಮ್ಮೊಮ್ಮೆ ಹೀಗಾಗುವುದುಂಟು ಕ್ರಮೇಣ ಸರಿ ಹೋಗುತ್ತದೆಯೆಂದ ಗೆಳೆಯನಂಥ ತಮ್ಮ. ನಿಜವಿರಬಹುದು ಆತ ಹೇಳಿದ್ದು… ಅವನಿಗೆ ಇಂಥ ಅನುಭವಗಳು ಹಲವಾರು… (ಲೆಕ್ಕವಿಲ್ಲದಷ್ಟು ಬಾರಿ ನಾನೂ ಆತನನ್ನು ನೋಯಿಸಿ ಬೆನ್ನು ಹಾಕಿ ನಡೆದದ್ದುಂಟಲ್ಲ)
ಈ ಮೌನಕ್ಕೆ ಮುನಿಯಬೇಡಿ; ಕ್ಷಮೆಯಿರಲಿ ಸ್ನೇಹದಲಿ. ನೋಯಿಸುವ ಉದ್ದೇಶ ನಂಗಿಲ್ಲ. Am Sorry… ಗೆಳೆಯರು ನೀವು. ನೀವೆಲ್ಲರೂ ಬೇಕು ನಂಗೆ. ಎಂದಿನಂತೆ ಮತ್ತೆ ಬನ್ನಿ….
%%%%%%%%%%%%%%%%