ಎರಡು ವ್ಯಂಗ್ಯಗಳು

ಎಲ್ಲ ಬಿಟ್ಟು ನಡೆದ
ಸಿದ್ದಾರ್ಥನಿಗೆ
ಮಧ್ಯ ರಾತ್ರಿಯಲ್ಲಿ
ಬೆಳಕು ಕಂಡಿತ್ತು..
ಬೆಳಗಾಗುವಷ್ಟರಲ್ಲಿ
ಮಡದಿ ಯಶೋಧರೆಯ
ಬಾಳು ಕತ್ತಲಾಗಿತ್ತು !!
******

ಬೆಳೆದು ನಿಂತ ಭೀಷ್ಮನ
ಲಾಲಿಸಿದ ಸತ್ಯವತಿ
ಮಹಾತಾಯಿ…
ನಮ್ಮೂರ ಹುಡುಗಿ
ಮದುವೆಯಾದಾತನ
ಚಿಗುರು ಮೀಸೆಯ
ಮಗನೊಡನಿದ್ದರೆ
ಊರ ತುಂಬ
ಗುಸು ಗುಸು..
******

ಕೋರಿಕೆ

ಬೆಳಗು ಇಬ್ಬನಿಯ
ಹನಿಯಂತೆ
ನಿನ್ನ ತುಟಿಯಂಚಿನ
ತುಂಟ ನಗು..
ಹಾಗೇ ಕರಗಿ
ಹೋಗದಿರು ಬದುಕೊಳಗೆ
ನನ್ನೆದೆಯ
ತೆರೆದೊಮ್ಮೆ
ಹಣಕಿ ನೋಡು..

Honey… ಹನಿ..

ಗ್ರಹಣ

ಗ್ರಹಣ


ನನಗೆ ಈ ಬಾರಿ
ಆರು ದಿನಗಳ
ಗ್ರಹಣ..
ಮೊನ್ನೆ ಹೋಗುವಾಗ
ನನ್ನ ಚಂದಿರ
ಹೇಳಿದ್ದಾನೆ
ಇನ್ನು ಸಿಗುವುದು
ವಾರದ ನಂತರ…

ಹಕ್ಕೀ ನಿನ್ನ ಅಡ್ರಸ್ ಹೇಳು..

ಗುಬ್ಬಚ್ಚೀ...

ಗುಬ್ಬಚ್ಚೀ...

ಮೈ ಡಿಯರ್ ಗುಬ್ಬಚ್ಚೀ,
ವರ್ಷಗಳ ನಂತರ ಇವತ್ತು ನಿನ್ನನ್ನು ನೋಡಿದೆನಲ್ಲ ಆ ಸಂತೋಷಕ್ಕೆ ಈ ಪತ್ರ. ನಿನ್ನನ್ನು ನೋಡ್ತಿದ್ದಂತೆ ನಾನು ಛಕ್ಕಂತ ಚಿಕ್ಕೋಳಾಗ್ಬಿಟ್ಟೆ. ಬಾಲ್ಯದ ಖುಷ್ ಖುಷಿಯ ದಿನಗಳ ಚಿತ್ರ ಕಣ್ಣ ಮುಂದೆ. ಹೌದು ಗುಬ್ಬಚ್ಚೀ.. ನನ್ನ ಬಾಲ್ಯಕ್ಕೂ ನಿಂಗೂ ಬಿಡಿಸಲಾರದ ನಂಟು..

ನಿಂಗೊತ್ತಾ ಹಕ್ಕೀ.. ಅವತ್ತು ನಾವಿದ್ದುದು ಪುಟ್ಟ ಹಳ್ಳೀಲಿ. ಹೆಂಚು, ಆರ್.ಸಿ.ಸಿಗಳ ಹಂಗಿಲ್ಲದ ತೆಂಗು ಅಡಿಕೆಯ ಗರಿಗಳ ಛಾವಣಿ.. ಅದರ ಕೆಳಗೆ ನಮ್ಮ ವಾಸ; ಮೇಲ್ಗಡೆ ನಿನ್ನ ಆವಾಸ. ಈಗ ಟೆರೇಸು ಮನೆ ಕಟ್ಟಿಕೊಂಡು ನಿಂಗೆ ಮನೆಯಿಲ್ಲದಂತೆ ಮಾಡಿದೆವಾ ನಾವು ? ನನ್ನಂತೆಯೇ ಪುಟ್ಟದಾಗಿದ್ದ, ತಮ್ಮನ ತೊದಲು ಮಾತಿನಂತೆ ಚಿಂವ್ ಚಿಂವ್ ಎನ್ನುತ್ತಿದ್ದ ನಿನ್ನ ಕಂಡರೆ ನಂಗೆ ಅದೇನೋ ಅಕ್ಕರೆ. ಎಲ್ಲ ಅಮ್ಮಂದಿರು ಚಂದಮಾಮ ತೋರಿಸಿ ಉಣಿಸುತ್ತಿದ್ದರೆ ನನ್ನಮ್ಮ ನಿನ್ನ ತೋರಿಸಿ ಉಣಿಸುತ್ತಿದ್ದಳು. ಅವತ್ತಿಂದ ಶುರುವಾದ ಈ ಅಪ್ಯಾಯತೆ ಇನ್ನೂ ಹಾಗೇ ಇದೆ.

ಅದ್ಯಾಕೋ ಗೊತ್ತಿಲ್ಲ, “ಗುಬ್ಬಚ್ಚಿ” ಅಂದ್ರೆ ಸಾಕು ಸುಮ್ ಸುಮ್ನೇ ಪ್ರೀತಿ; ಈ ಒರಟನ ಮೇಲಿದೆಯಲ್ಲ ಹಾಗೆ.. ನಿನಗಿಂತ ಚೆಂದದ ಹಕ್ಕಿಗಳು ಅದೆಷ್ಟೋ ಇದ್ದಾವು. ಆದರೆ ನಿನ್ನ ಚಿಲಿಪಿಲಿ, ನಿನಗೇ ಯುನೀಕ್ ಆಗಿರೋ ಪುಟ್ಟ ಆಕಾರ, ನಿನ್ನ ಹಾರಾಟದ ಸೊಗಸು, ಒಂದೊಂದೇ ಕಡ್ಡಿ ಹೆಕ್ಕಿ ತಂದು ನೀ ಗೂಡು ಕಟ್ಟುವ ಪರಿಯ ಚೆಂದವೇ ಬೇರೆ. ನಿನಗಿಂತಲೂ ಪುಟ್ಟ ಕಂದಮ್ಮಗಳಿಗೆ ನೀ ತುತ್ತು ಕೊಡುತ್ತಿದ್ದರೆ ಅದು ಜಗತ್ತಿನ ಅದ್ಭುತ ದೃಶ್ಯ.

ಗುಬ್ಬಚ್ಚಿ ಡಿಯರ್, ಅಜ್ಜಿ ಮನೇಲಿದ್ದು ನಾನು ಅಂಗನವಾಡಿಗೆ ಹೋಗ್ತಿದ್ದೆ ನೋಡು, ಆವಾಗ ಅಡಿಗೆ ಮನೆಯ ಬಲಗಡೆ ಮೂಲೇಲಿ ನಿನ್ನ ಗೂಡಿತ್ತು ನೆನಪಿದೆಯಾ ? ನಾ ಶಾಲೆ ಬಿಟ್ಟ ಕೂಡಲೇ ಓಡುತ್ತ ಮನೆಗೆ ಬರಲು ಇದ್ದ ಸೆಳೆತವೇ ನೀನು ಕಣೋ.. ನಿನ್ನಾಟ ಚಿನ್ನಾಟ ನೋಡುತ್ತಾ ತಿಂತಾ ಇದ್ರೆ ತಟ್ಟೆ ಖಾಲಿ ಆಗಿದ್ದೇ ಗೊತ್ತಾಗ್ತಾ ಇರಲಿಲ್ಲ. ಈಗ ನೋಡು ಮಕ್ಕಳ ಊಟ ತಿಂಡಿಗೆ ಕಾರ್ಟೂನ್ ನೆಟ್ವರ್ಕ್, ವಿಡಿಯೋ ಗೇಮ್ ಬಂದ್ಬಿಟ್ಟಿದೆ. ನಿಂಗೆ ಬೇಜಾರಾಗಲ್ವೇನೋ ?

ಆವಾಗೆಲ್ಲ ಮನೆಗಳು ವಿಶಾಲ. ನಿಂಗೆ ಎಲ್ಲೆಂದರಲ್ಲಿ ಗೂಡು ಕಟ್ಟುವ ಸ್ವಾತಂತ್ರ್ಯ. ಈಗ ನಾವಿರುವ ಮನೆಗಳೇ ಬೆಂಕಿ ಪೆಟ್ಟಿಗೆ. ನಿಂಗೆಲ್ಲಿ ಜಾಗ ಕೊಡೋಣ .. ಅಜ್ಜಿ ಮನೆಯ ಹಜಾರದ ಗೋಡೆಯ ತುಂಬೆಲ್ಲ ಹಾಕಿದ್ದ ಮುತ್ತಜ್ಜ ಅಜ್ಜಿಯರ ಫೋಟೋ ಫ್ರೇಮಿನ ಹಿಂದೆ ನಿನ್ನ ಪರಿವಾರದ ತರಹೇವಾರಿ ಮನೆಗಳು. ನಮ್ಮದು ನಾಗರಿಕರ ಜಗತ್ತು. ಹಿರಿತಲೆಗಳ ಫೋಟೋ ಮನೆಯ ಅಂದ ಕೆಡಿಸುತ್ತವೆ. ಅವುಗಳ ಬದಲು ಯಾವ ಬದಿಯಿಂದ ನೋಡಿದರೂ ಅರ್ಥವೇ ಆಗದ ಫ್ರೇಮಿಲ್ಲದ ಲ್ಯಾಮಿನೇಟೆಡ್ ಪೈಂಟಿಂಗುಗಳು. ಇದಕ್ಕೆ ಇಂಟೀರಿಯರ್ ಡಿಸೈನು ಎಂಬ ಹೆಸರು. ನಿನಗೆ ಜಾಗ ಕೊಡದ ಸ್ವಾರ್ಥಿಗಳು ಅಲ್ವಾ ನಾವು ?

ನೀನು ನಮ್ಮ ಪಾಲಿಗೆ ಹಕ್ಕಿಯಲ್ಲ; ನಮ್ಮ ಮನೆ ಮಂದಿ ಎಂದರೆ ನೀನೂ ಸೇರಿದ್ದೆ. ನಾವು ಮಕ್ಕಳೆಲ್ಲ ಸೇರಿ ನಿನ್ನ ಕುಟುಂಬಕ್ಕೆ ಅಂತ್ಲೇ ಕಾಳು ಸಂಗ್ರಹಿಸುತ್ತಿದ್ದೆವು. ಅಜ್ಜಿಯ ಬೈಗುಳಕ್ಕೆ ಕವಡೆ ಕಿಮ್ಮತ್ತು ಕೊಡದೆ ನಿನಗೆ ಗೂಡು ಕಟ್ಟಲು ಅನುಕೂಲ ಆಗ್ಲಿ ಅಂತ ಒಂದಷ್ಟು ಹುಲ್ಲುಗರಿ ತಂದಿಡ್ತಿದ್ದೆವು. ನೀನು ಬರುತ್ತೀ ಅಂತ ಕಾಯ್ತಿದ್ರೆ ನಮಗೆ ಸುಸ್ತಾಗೋ ವರೆಗೂ ನೀನು ಬರ್ತಿರಲಿಲ್ಲ. ನಾವು ಹೋದ ಎರಡೇ ಕ್ಷಣಕ್ಕೆ ಮೆತ್ತಗೆ ಬಂದು ಮಾಯಾವಿಯಂತೆ ಎತ್ತಿ ಒಯ್ಯುತ್ತಿದ್ದೆ ನೀನು. ನಾವು ನಿಂಗೇನಾದ್ರೂ ತಂದ್ರೆ ಬೈಯುತ್ತಿದ್ದ ಅದೇ ಅಜ್ಜಿ ನಿಂಗೆ ಅಂತ್ಲೇ ಒಂದಷ್ಟು ಧಾನ್ಯಗಳನ್ನು ತೆಂಗಿನ ಚಿಪ್ಪಿಗೆ ಹಾಕಿ ಮಾಳಿಗೆ ಮೆಟ್ಟಿಲ ಮೂಲೇಲಿಡ್ತಾ ಇದ್ರು !!

ಗುಬ್ಬಚ್ಚಿ ಪುಟ್ಟೂ, ಈಗಿವೆಲ್ಲ ಬರೀ ನೆನಪುಗಳು ಕಣೋ.. ನಮ್ಮ ಧಾವಂತದ ಬದುಕಲ್ಲಿ, ಪಕ್ಕದವರಿಗಿಂತ ಮೇಲೇರುವ ಆತುರದಲ್ಲಿ ನಾವು ಬದುಕು ಸವೆಸುತ್ತಿದ್ದೇವೆ; ಸವಿಯಲಾಗುತ್ತಿಲ್ಲ. ಅವತ್ತಿನ ದಿನಗಳಲ್ಲಿ ಈ ಓಟವಿರಲಿಲ್ಲ; ಎಲ್ಲರಿಗೂ ಮೊದಲು ಗುರಿ ಮುಟ್ಟಬೇಕೆಂಬ ಸ್ಪರ್ಧೆ ಇರಲಿಲ್ಲ; ಆದರೆ ಬದುಕಲ್ಲಿ ಖುಷಿಯಿತ್ತು. ಮನೆಯ ಅಂಗಣಕ್ಕೆ ಬಂದ ಪಶು ಪಕ್ಷಿಗಳೆಲ್ಲ ನಮ್ಮವು ಅನಿಸುತ್ತಿತ್ತು; ಆದರೀಗ ಮನೆಯವರೇ ದೂರದವರಾಗುತ್ತಿದ್ದಾರೆ. ಇವನ್ನೆಲ್ಲ ನೋಡಿ ನಿಂಗೂ ರೋಸಿ ಹೋಯ್ತಾ ? ಅದಕ್ಕೇ ನೀನು ಕೂಡ ನೇಪಥ್ಯಕ್ಕೆ ಸರಿದು ಹೋದೆಯಾ ? ಹೋಗುವಾಗ ನಮ್ಮ ಖುಷಿ, ನಗು ಎಲ್ಲವನ್ನು ಜತೆಗೇ ಹೊತ್ತೊಯ್ದೆಯಾ ? ಮಗಳು ಐಶ್ವರ್ಯ ಇದಾಳಲ್ಲ…ಅವಳೂ ಥೇಟ್ ನಿನ್ನ ಹಾಗೇ.. ಮುದ್ದು ಸುರಿವ ಮುಖ.. ಹೊಳೆ ಹೊಳೆವ ಕಣ್ಣು.. ಐಶು ಮರಿ ಚಿಕ್ಕಮ್ಮಾ ಎನ್ನುತ್ತ ಎದುರು ನಿಂತರೆ ನೀನೇ ನೆನಪಾಗಿ ಕಾಡ್ತೀಯ… ನಾನೇ ಬಂದು ನಿನ್ನನ್ನು ನೋಡಿಯೇನು ಎಂದರೆ ಹೋಗುವಾಗ ಅಡ್ರಸ್ ಕೂಡ ಕೊಡಲಿಲ್ಲ ನೀನು.. ಈ ಬಾರಿ ಬಂದಾಗ ಮರೀದೇ ಕೊಟ್ಟು ಹೋಗು…

ಗುಬ್ಬಚ್ಚಿ ನೋಡ್ಬೇಕು ಅಂದ್ರೆ ಕಾಡಿಗೇ ಹೋಗಬೇಕು ಅಂತಾರೆ ಮಂದಿ. ನಾವು ಪುರುಸೊತ್ತಿಲ್ಲದ ಜನ; ಕಾಡಿಗೆ ಹೋಗಲು ಸಮಯವಿಲ್ಲ ನಮ್ ಬಳಿ. ಅಷ್ಟಕ್ಕೂ ಕಾಡೆಲ್ಲಿದೆ ಈಗ ? ಅದನ್ನೂ ನಾವು ಹೀಗೆ ತಿನ್ನುತ್ತಲೇ ಇದ್ರೆ ನಮ್ಮದೇ ವೇಗದಲ್ಲಿ ನೀನು ಅಲ್ಲಿಂದಲೂ ಮರೆಯಾಗ್ತೀಯೇನೋ ಅಲ್ವಾ ? ನೋಡು ಎಷ್ಟೊಂದು ಪ್ರಶ್ನೆಗಳು ನನ್ನವು.. ಇದಕ್ಕೆಲ್ಲ ಉತ್ತರಿಸೋಕೆ ಅಂತಲೇ ಮತ್ತೆ ಬರ್ತೀಯಾ ನನ್ನ ಪುಟ್ಟ ಹಕ್ಕೀ ? ಆ ನೆಪದಿಂದ ನಾ ಮತ್ತೆ ಬಾಲ್ಯಕ್ಕೆ ಜಿಗಿಯಬೇಕು; ನೆನಪುಗಳ ಸಂಭ್ರಮದಲ್ಲಿ ಮೀಯಬೇಕು. ನಾವು ಮನುಷ್ಯರಿಗಿಂತ ಒಳ್ಳೆಯ ಮನಸ್ಸು ನಿಂದು.. ನಂಗೆ ನಿರಾಸೆ ಮಾಡಲ್ಲ ಅಲ್ವಾ ? ಕಾಯುತ್ತಿರುತ್ತೇನೆ… ನೀ ಮೊನ್ನೆ ನನ್ನ ಭೇಟಿಯಾದ ಅದೇ ಜಾಗದಲ್ಲಿ.. ಅದೇ ಸಂಪಿಗೆ ಮರದ ಹಸುರೆಲೆ ಕೆಳಗೆ…

ಹನಿಗಳ ತುಂತುರು..

ಹೊರಗೆ ಸುರಿವ
ಮಳೆಯ ಧಾರೆ
ಇಳೆಯ
ತಣ್ಣಗಾಗಿಸುತಿದೆ…
ನನ್ನೆದೆಗೆ ಸುರಿವ
ನಿನ್ನೊಲವ ಧಾರೆ
ನನ್ನ
ಬೆಚ್ಚಗಾಗಿಸುತಿದೆ..

******

ರಾತ್ರಿ ರಾಣಿ
ಮೆಲ್ಲ ಮೆಲ್ಲನೆ
ತನ್ನ ಚಾದರ ಹಾಸಿ
ಜಗ ಕತ್ತಲಾಗುವಾಗ
ನಿನ್ನ ನೆನಪು
ನನ್ನ ಮನದಲಿ
ಹಣತೆ ಹಚ್ಚುತ್ತದೆ..

ಬದುಕಿನಾ ಬೊಗಸೆಯಲಿ ನೆನಪುಗಳ ಮೆರವಣಿಗೆ…

ಹೂ ಹನಿಯೇ...

ಹೂ ಹನಿಯೇ...


ಮೊದಲ ಪ್ರೇಮದ ನೆನಪಿನಂತೆ ಸುರಿವ ಮಳೆಗೆ ಮುಖವೊಡ್ಡಿ ಬೊಗಸೆ ತುಂಬ ಮಳೆ ನೀರು ತುಂಬಿಕೊಂಡು ಈ ಕ್ಷಣ ಅವನಿದ್ದಿದ್ದರೆ…. ಅಂದುಕೊಳ್ಳುತ್ತಿದ್ದ ಹಾಗೇ ಪಕ್ಕದಲ್ಲಿದ್ದ ಮೊಬೈಲ್ ಚಿಂವ್ ಚಿಂವ್ ಅಂದಿತ್ತು. ತೆರೆದು ನೋಡಿದರೆ ಮನದ ಮಾತು ಓದಿದೆ ಕಣೇ ಅಂತ ಮೆಸೇಜು ಕಳಿಸಿದ್ದ….. ಅರರೇ ಇವನಿಗೆ ಹ್ಯಾಗೆ ಗೊತ್ತಾಯ್ತು ಅನ್ನುತ್ತ ಕಣ್ ಕಣ್ ಬಿಟ್ಟೆ ಮರುಕ್ಷಣ ಹೊಳೀತು ಮೊನ್ನೆ ಸುಧಾ ಮೂರ್ತಿ ಬರೆದ “ಮನದ ಮಾತು” ಓದುತ್ತಿದ್ದ… ಅದರ ಬಗ್ಗೆ ಹೇಳುತಿದ್ದಾನೆ ಅಂತ. ಹೇಗೂ ಚುಮು ಚುಮು ಚಳಿ.. ಸ್ವಲ್ಪ ರೋಮಾನ್ಸ್ ಮಾಡೋಣ ಅಂತ ಫೋನ್ ಮಾಡಿದರೆ ಪಾಪಿ ಪುಸ್ತಕದ ಬಗೆ ಹೇಳುತ್ತಲೇ ಹೋದ.. ಒಂದಷ್ಟು ಮಾತಾಡಿ ಫೋನಿಟ್ಟ ನಂತರ ಮನಸು ಹಿಂದಕ್ಕೋಡಿತ್ತು.. ಪಿಯುಸಿಯ ದಿನಗಳವು.. ಆವಾಗೆಲ್ಲ ಓದು ಅಂದರೆ ಕೇವಲ ನಲ್ಗಾದಂಬರಿಗಳು. ಸಾಯಿಸುತೆ, ಉಷಾನವರತ್ನರಾಮ್, ಅಶ್ವಿನಿ ಮುಂತಾದ ಒಂದಷ್ಟು ಹೆಸರು ಬಿಟ್ಟರೆ ಬೇರೆ ಯಾರು ಬೇಡ. ಅಂದು ಕ್ಲಾಸಿಗೆ ಚಕ್ಕರ್ ಹೊಡೆದು ತಲೆನೋವು, ಹೊಟ್ಟೆನೋವು (ಇವೆರಡೇ ಕಾರಣ ಯಾಕೆಂದರೆ ಎರಡೂ ಲೆಕ್ಚರರ್ ಕಣ್ಣಿಗೆ ಕಾಣದವು) ಕಾರಣ ಹೇಳ ಕ್ಲಾಸಿನಿಂದ ಹೊರ ಬಂದು ಲೈಬ್ರರಿಗೆ ಹೋಗಿ ಅವುಗಳನ್ನೋದುತ್ತಿದ್ದೆ. ಈಗವುಗಳನ್ನು ಫ್ರೀಯಾಗಿ ಕೊಟ್ಟರು ಬೇಡವೆನಿಸುತ್ತೆ. ಎಷ್ಟು ಬದಲಾಗಿದ್ದೀನಲ್ವಾ ಅನ್ನಿಸಲು ಶುರುವಾಯ್ತು…
ಬಟ್ಟೆ ನೆನೆಸಲು ಸೋಪು ನೀರು ಕದಡಿ ಟಬ್ ನಲ್ಲಿಟ್ಟರೆ ಅದರೊಳಗೆ ಕೂತು ಚಪ್ಪಾಳೆ ಬಡಿಯುತ್ತ ಆಟವಾಡುತ್ತಿದ್ದ ನಾನು.. ಸ್ವಲ್ಪ ದೊಡ್ಡವಳಾಗಿ ಬೆಕ್ಕಿನ ಮರಿಯಂತೆ ಮನೆ ಮಂದಿಯ ಹಿಂದೆಯೇ ಸುಳಿದಾಡುತ್ತಿದ್ದ ನಾನು.. ಎಸ್.ಎಸ್.ಎಲ್.ಸಿ.ಕಳೆದ ನಂತರವೂ ಕ್ಲಾಸಲ್ಲಿ ಉಳಿದೆಲ್ಲರಿಗಿಂತ ಪೆದ್ದಿಯೇ ಆಗಿದ್ದ ನಾನು ಹೀಗಾದ್ದು ಯಾವಾಗ ? ಪ್ರಶ್ನೆಗೆ ಉತ್ತರವಿಲ್ಲ, ಬದುಕೆಂಬ ಕಲೆಗಾರನ ಕೈಚಳಕವೇ ಹೀಗೆ ದಾರಿ ಹೋಕನ ಕಾಲಡಿಯಲಿದ್ದ ಕಲ್ಲು ಶಿಲ್ಪವಾಗಿ ಬದಲಾಗಿದ್ದು ಗೊತ್ತೇ ಆಗದು. ಹೇಗೆ ನೆನಪಿಸಿಕೊಳ್ಳಲೆತ್ನಿಸಿದರೂ ನಾ ಬದಲಾದ ಘಳಿಗೆ ನೆನಪಿಗೆ ಬರಲೊಲ್ಲದು. ಬದುಕಿನ ಒಂದೊಂದೇ ವರುಷಗಳು ಸರಿದಂತೆಲ್ಲ ನಾವೆಷ್ಟು ಬದಲಾಗುತ್ತೇವಲ್ಲಾ….. ತಿರುಗಿ ನೋಡಿದರೆ ಮೂವತ್ತು ವಸಂತಗಳು.. ಕೈ ಬೆರಳ ಸಂದಿಯಿಂದ ಜಾರಿ ಹೋಗುತ್ತಿರುವ ಮಳೆ ಹನಿಯ ಹಾಗೇ ನುಸುಳಿ ಹೋಗಿವೆ…
ನನ್ನ ಸುತ್ತ ನೋಡಿದರೆ ನನ್ನ ಪ್ರಪಂಚ ತುಂಬ ಬದಲಾಗಿದೆ. ಒಂದು ಎರಡನೇ ತರಗತಿಯಲ್ಲ ಬೆಸ್ಟ್ ಫ್ರೆಂಡ್ ಆಗಿದ್ದ ಶ್ರೀಲತಾ, ನಾಲ್ಕರಿಂದ ಆರನೇ ಕ್ಲಾಸ್ವರೆಗೆ ಮೊದಲ ರ್ಯಾಂಕ್ಗೆ ನಂಜತೆ ಫೈಟ್ ಮಾಡುತ್ತಿದ್ದ ಪೋಸ್ಟ್ ಮಾಸ್ಟರ ಮಗಳು ನಮೃತಾ, ಕಾಂಪೌಂಡರ್ ಚಂದ್ರಣ್ಣನ ಮಗಳು ನನ್ನ ಜೀವದ ಗೆಳತಿ ಚಂದ್ರಿಕಾ ಯಾರ ಮುಖವೂ ನೆನಪಾಗುತ್ತಿಲ್ಲ. ಏಳನೇ ಕ್ಲಾಸಿನಲ್ಲಿ ನನ್ನ ಪಕ್ಕದಲ್ಲೇ ಕೂರುತ್ತಿದ್ದ ಪ್ರಕಾಶ, ಮುಖೇಶ, ಮಾವಿನ ಕಾಯಿ ತಂದು ಟೀಚರ ಕಣ್ಣು ತಪ್ಪಿಸಿ ಉಪ್ಪು ಖಾರ ಹಾಕಿ ತಿನ್ನುತ್ತಿದ್ದ ನಮ್ಮ ನೊಟೋರಿಯಸ್ ಗ್ಯಾಂಗಿನ ಪುಟ್ಟ ಹುಡುಗಿ ಗ್ರೇಸಿ.. ಎಲ್ಲರು ಮರೆತು ಹೋಗಿದ್ದು ಯಾವಾಗ ? ಹಳೆಯ ಆಲ್ಬಂ ತೆರೆದು ನೋಡಿದರೆ ಉದ್ದಲಂಗ ಹಾಕಿ ನನ್ನ ಪಕ್ಕ ಕೂತವಳ ಹೆಸರು ರಾಧಾ ಅಂತಲೋ ರಂಜಿನಿ ಅಂತಲೋ ಸ್ಪಷ್ಟವಾಗ್ತಿಲ್ಲ. ಎಲ್ಲ ಅಸ್ಪಷ್ಟ.. ಯಾವುದೋ ಕನಸು ಬಿದ್ದು ಫಕ್ಕನೆ ಎಚ್ಚರಾದಾಗಿನ ಅಲವರಿಕೆಯಂತೆ.. ಅವರೇ ಏನು ಕಾಲೇಜಿನ ಗೆಳತಿ ಗೆಳೆಯರೂ ಇಂದು ನನ್ನ ಬದುಕಿನ ಭಾಗವಾಗಿ ಉಳಿದಿಲ್ಲ.. ಫಸ್ಟ್ ಪಿಯುಸಿಯಲ್ಲಿದ್ದಾಗ ಕಿಟಕಿ ಬದಿಗೆ ಬಂದು ಟಾಟಾ ಮಾಡುತ್ತಿದ್ದ ಮೊದಲ ಹುಡುಗನ ಹೆಸರು ಕೂಡ ಇಂದು ಮನಸಿಗೆ ಬರುತ್ತಿಲ್ಲ.. ನನ್ನ ಭಾವಕೋಶದ ಎಳೆಗಳು ತುಂಬ ಬದಲಾಗಿವೆ.. ಆದರೆ ನನ್ನನ್ನದು ಕಾಡುತ್ತಿಲ್ಲವೇಕೆ ಎಂಬ ತಣ್ಣನೆಯ ಪ್ರಶ್ನೆಯ ಸಣ್ಣ ಗಿರಕಿ ಮನದಲ್ಲಿ..
ಜನರು ಮಾತ್ರವಲ್ಲ ಹೇಗೆ ಬದಲಾಗುತ್ತವೆ ಬದುಕಿನ ಆದ್ಯತೆಗಳೂ ಕೂಡ.. ಒಂದನೇ ಕ್ಲಾಸಿನಲ್ಲಿದ್ದಾಗ ಮಾವನ ಹಾಗೆ ಬಜಾಜ್ ಚೇತಕ್ ಓಡಿಸಿದರೆ ಸಾಕು ಎಂಬಾಸೆ, ಆರು ಏಳಕ್ಕೆ ಬಂದಾಗ ಅಜ್ಜಿ ಮನೆಗೆ ಸುಯ್ಯನೆ ಹೋಗುತ್ತಿದ್ದ ಅಂಬಿಕಾ ಬಸ್ ಡ್ರೈವರ್ ಆಗುವಾಸೆ, ಕಾಲೇಜು ಮೆಟ್ಟಲಿನಲ್ಲಿ ನಿಂತ ಕ್ಷಣ ಪೈಲಟ್ ಆಗಿ ಹಾರುವ ಕನಸು, ಡಿಗ್ರಿಯ ದಿನಗಳಲ್ಲಿ ಮಿಲಿಟರಿಗೆ ಸೇರಲು ಅಪ್ಲಿಕೇಷನ್, (ನನ್ನಂಥ ಕುಳ್ಳಿ ಮಿಲಿಟರಿಗೆ ಲಾಯಕ್ಕಿಲ್ಲ ಅಂತ ಗೊತ್ತಾಗಿದ್ದು ಆಮೇಲೆ) ಓದಿದ್ದು ಸಾಹಿತ್ಯ, ಪತ್ರಿಕೋದ್ಯಮ.. ಮಾಡ್ತಿರೋದು ಉದ್ಯಮ.. ಎಷ್ಟು ಬದಲಾಗಿದೆ ಎಲ್ಲವೂ..
ಹಾಗಂತ ಏನೂ ನೆನಪಿಲ್ಲವೇನೇ ಅಂತ ಮನಸನ್ನು ಕೇಳಿದರೆ ಇನ್ನೊಂದಷ್ಟು ನೆನಪುಗಳ ತಣ್ಣನೆ ಮೆರವಣಿಗೆ.. ಮಳೆಗಾಲದ ಸಂಜೆಗಳಲ್ಲಿ ಹದವಾಗಿ ಸುಟ್ಟು ಎಣ್ಣೆ ಸವರಿ ಅಜ್ಜಿಯ ಮಡಿಲಲ್ಲಿ ಕೂತು ಮೆಲ್ಲುತ್ತಿದ್ದ ಹಲಸಿನ ಹಪ್ಪಳದ ರುಚಿ, ದೊಡ್ಡಮ್ಮ ಹಾಲು ಕರೆಯಲು ಕೂಡುವಾಗ ಗಂಗೆ ಹಸುವಿನ ಕೆಚ್ಚಲಿಗೆ ಹಚ್ಚುತ್ತಿದ್ದ ಬೆಣ್ಣೆಯ ನುಣುಪು, ಬಟ್ಟೆ ಜಗಿಯುವ ಅಭ್ಯಾಸವಿದ್ದ ಪುಟ್ಟ ಕರು ಸುಭದ್ರೆ ತಿಂದು ಹಾಕಿದ ನನ್ನ ಸಿಂಡ್ರೆಲ್ಲಾ ಫ್ರಾಕಿನ ಫ್ರಿಲ್ಲು, ನಾನೆಟ್ಟ ಗಿಡದಲ್ಲರಳಿದ ಮೊದಲ ಪಾರಿಜಾತದ ಸೌರಭ, ಈಶ್ವರ ಮಾವನ ಜತೆ ಹೋಗಿ ನೋಡಿದ ಯಕ್ಷಗಾನದ ದೇವಿ ಕೂತಿದ್ದ ಬೆಳ್ಳಿಯ ಜೋಕಾಲಿಯ ಫಳ ಫಳ, ಅಪ್ಪನ ಹೆಗಲ ಮೇಲೆ ಕೂತು ನೋಡಿದ ಕಟೀಲು ಜಾತ್ರೆಯ ತೇರು.. ಉಹುಂ.. ಒಂಚೂರು ಮರೆತಿಲ್ಲ.. ಕೆಲವೊಂದು ಅಮೃತ ಘಳಿಗೆಗಳು ಯಾವತ್ತಿಗೂ ಬದಲಾಗುವುದೇ ಇಲ್ಲವೇನೋ.. ಮೊದಲ ಮಳೆಗೆ ಇಳೆ ಸೂಸುವ ಗಂಧದ ಹಾಗೆ… ಎಷ್ಟೋ ವರ್ಷಗಳಿಂದ ಜತೆಗಿದ್ದರೂ ಮದ್ಯಾಹ್ನವಾಗುತ್ತಿದ್ದಂತೆ ಫೋನ್ ಮಾಡಿ ಎಷ್ಟೊತ್ತಿಗೆ ಬರ್ತೀಯೇ ಎನ್ನುತ್ತ ಬಂದೊಡನೆ ಬರಸೆಳೆದು ಕಚಗುಳಿಯಿಟ್ಟು ತೆಕ್ಕೆಗೆಳೆದುಕೊಂಡು ಮುತ್ತಿನ ಮಳೆ ಸುರಿಸಿ “ನೀ ಅವತ್ತು ಹೇಗಿದ್ದೆಯೋ ಇವತ್ತೂ ಹಾಗೇ ಇದ್ದೀ ಮುದ್ದೂ… ಮಧ್ಯಾಹ್ನದ ಮೇಲೆ ಆಫೀಸಿಗೆ ರಜಾ ಹಾಕೇ..” ಎನ್ನುವ ಇವನ ಹಾಗೇ…

ಗುಟ್ಟು

ನಿನ್ನೆ ನಿನ್ನ ಮಡಿಲಲ್ಲಿ
ತಲೆಯಿಯಿಟ್ಟು
ವಿರಮಿಸಿದಾಗ
ನಾ ಕಳೆದುಕೊಂಡ
ನನ್ನವ್ವ ನೆನಪಾದಳು..

ಪ್ರಶ್ನೆ

ಏನ ಬರೆಯಲಿ ಹೇಳು
ಬರಿದಾಗಿದೆ ಭಾವ
ಉಲಿಯುವೆನೆಂದರೆ ಸಖಾ
ಬತ್ತಿ ಹೋಗಿದೆ ಜೀವ
ಎದೆಯ ತುಂಬೆಲ್ಲ
ಶಿಥಿಲ ಅವಶೇಷ
ಹುಡುಕಿ ಹುಡುಕಿ ಸೋತೆ
ಬೆಳಕು ಲವಲೇಶ
ಒಡೆದ ಹಡಗಿನ ತುಂಬ
ಕಣ್ಣೀರ ಸವಾರಿ
ಕಣ್ಣಳತೆಯಲಿದೆ ತೀರ
ಸಿಗುತಿಲ್ಲ ಗುರಿ
ಕೆಳೆಯ ಸುಧೆಯಿಂದ
ಸಾಂತ್ವನದ ಸಿಂಚನ
ಆದರೂ ಕಳೆಯಿಲ್ಲ
ಬಿಳುಪೇರಿದೆ ವದನ
ಮನದ ಹಾಳೆಯ ತುಂಬ
ಪ್ರಶ್ನೆಗಳ ಚಿತ್ತಾರ
ನೀಡುವೆಯಾ ಗೆಳೆಯಾ
ನಿನ್ನೆದೆಯ ಉತ್ತರ ?

ಹನಿಗಳು

ಎಚ್ಚರಿಕೆ

ನಿನ್ನ ಮನವನ್ನು
ಚಿಂತೆಯ ಅಗ್ನಿಕುಂಡಕ್ಕೆ
ಅಪರ್ಿಸುವಾಗ
ಅದರೊಳಗಿನ ನಾನೂ
ಕರಕಾಗುವೆ
ಎಂಬ ನೆನಪು
ನಿನಗಿರಲಿ..

%%%%%

ಅಕಟಕಟಾ

ಮನಸು ಚುಕ್ಕಿಯಿಟ್ಟಿತು
ಹೃದಯ ಚಿತ್ರ ಬಿಡಿಸಿತು
ಕನಸು ಬಣ್ಣ ತುಂಬಿತು
ವಿಧಿ ಅಳಿಸಿ ಹಾಕಿತು

%%%%%

ಪರಿಣಾಮ

ನಿನ್ನ ನಿಟ್ಟುಸಿರ ಬಿಸಿಗೆ
ನನ್ನ ಕನಸಿನ ಹೂಗಳು
ಒಣಗಿ ಹೋದವು..

ನಿನ್ನ ಕಣ್ಣೀರ ಹನಿಗೆ
ಮನದ ರಂಗೋಲಿಗಳು
ಕದಡಿ ರಾಡಿಯಾದವು..

ನಿನ್ನ ನಡಿಗೆಯ ಭಾರಕ್ಕೆ
ನನ್ನ ಉತ್ಸಾಹದ ಬುಗ್ಗೆಗಳು
ಒಡೆದು ಮರೆಯಾದವು..

ನಿನ್ನ ದುಗುಡದ ಪರಿಗೆ
ನನ್ನ ನಿರೀಕ್ಷೆ ಹಕ್ಕಿಗಳು
ರೆಕ್ಕೆ ಮುರಿದು ನರಳಿದವು..

ನಿನ್ನ ನೋವಿನ ದನಿಗೆ
ನನ್ನ ಮಧುರಾಲಾಪಗಳು
ಕೊರಳಲ್ಲೇ ಇಂಗಿಹೋದವು..

Previous Older Entries