•October 1, 2009 •
4 Comments
ಅವು ಪಿಯುಸಿಯ ದಿನಗಳು. ರೂಲ್ಸು ರೆಗ್ಯುಲೇಷನ್ ತುಂಬಿದ್ದ ಹೈಸ್ಕೂಲು ಮುಗಿಯಿತೆಂದರೆ ಅದೇನೋ ಸಂಭ್ರಮ. ಸ್ವತಂತ್ರವಾಗುವ ಭಾವ. ಅಡಾಲಸೆನ್ಸ್ ದಿನಗಳೇ ಹಾಗೆ.. ಮನದಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ.. ಆಸೆ, ಗುರಿ, ಕನಸು ಯಾವುದೂ ನನಗಾವಾಗ ಸ್ಪಷ್ಟವಿರಲಿಲ್ಲ. ಅಸಲಿಗೆ ಅವುಗಳ ನಡುವಿನ ವ್ಯತ್ಯಾಸ ಕೂಡ ಗೊತ್ತಿರಲಿಲ್ಲ. ಅಂಥ ದಿನಗಳಲ್ಲಿ ಕವನಗಳನ್ನು ಬರೆಯದವರು ಬಹುಶಃ ಯಾರೂ ಇರಲಿಕ್ಕಿಲ್ಲ. ನಾನೂ ಮನ ಬಂದಂತೆ ಗೀಚಿದ್ದು ಆವಾಗಲೇ. ನಮ್ಮ ಎಸ್.ಡಿ.ಎಂ ಕಾಲೇಜು ಪಠ್ಯೇತರ ಚಟುವಟಿಕೆಗಳಿಗೆಲ್ಲ ತುಂಬ ಪ್ರೋತ್ಸಾಹ ಕೊಡುತ್ತಿದ್ದ ಕಾರಣ ನಮ್ಮ ಬರಹಗಳು ಕಾಲೇಜಿನ ಪ್ರಾಯೋಗಿಕ ಪತ್ರಿಕೆಗಳಲ್ಲಿ, “ಚಿಗುರು” ಮುಂತಾದವುಗಳಲ್ಲಿ ಪ್ರಕಟವಾಗುತ್ತಿತ್ತು. ನನಗಂತೂ ಹಿಮಾಲಯ ಗೆದ್ದಂಥ ಖುಷಿ ಕೊಡುವ ಸಂಗತಿಯದು. ಪಿಯುಸಿಯಲ್ಲಿ ನನ್ನ ಬೆಂಚಿನಲ್ಲಿ ಕೂಡುತ್ತಿದ್ದ ಒಂದಿಬ್ಬರು “ತುಳು ಭಾಷೇಲಿ ಬರಿ ನೋಡೋಣ” ಅಂತ ಚಾಲೆಂಜ್ ಥರಾ (?) ಹೇಳಿದ್ದರ ಫಲ ಈ ಕವನ. ತುಳು ನನ್ನ ಮಾತೃ ಭಾಷೆ ಅಲ್ಲದಿದ್ದರೂ ಅಷ್ಟೇ ಅತ್ಮೀಯವಾದ ಹೃದಯದ ಭಾಷೆ; ತುಳು ಮಾತು ಕೇಳಿದರೆ ಸಾಕು ಕಿವಿ ನೆಟ್ಟಗಾಗುತ್ತದೆ. ನಮ್ಮೂರ ಮಂದಿಗೆ ಯುನೀಕ್ ಆದ ಐಡೆಂಟಿಟಿ ಕೊಡುವುದು ಇದೇ ಭಾಷೆ. ಅಂದು ಬರೆದ (ಬಹುಶಃ 1994ರಲ್ಲಿರಬೇಕು) ಈ ಪುಟ್ಟ ಕವನದಂಥದ್ದು (?) ಇಲ್ಲಿದೆ ಓದಿಕೊಳ್ಳಿ.
ಆಸೆ
ಪೊರ್ಲುದ ಪ್ರಕೃತಿಡ್ ತೆಲಿಪುನ
ಪಜಿ ಇರೆತ ಮಿತ್ತ್…
ಕಮ್ಮೆನ ಕೊರ್ದು ನಲಿಪುನ
ಪೂತ ರಾಸಿದ ಮಿತ್ತ್…
ಪುಣ್ಣಮೆದ ಚಂದ್ರನ ಮಿತ್ತ್…
ಬಾಲೆ ಕಂಜಿದ ಬಿಮ್ಮದ ಮಿತ್ತ್…
ಸಮುದ್ರದ ನೀರ್ದ ಮಿತ್ತ್…
ನೀಲಿ ಬಾನದ ಮಿತ್ತ್…
ಮಾಲೆ ಕಟ್ಟಿನ ಮೋಡದ ಮಿತ್ತ್…
ಎನ್ನ ಮನಸ್ದ ಗೋಡೆದ ಮಿತ್ತ್…
ಕಣ್ಣ ಬೊಂಬೆದ ಮಿತ್ತ್…
ಮನಸ್ ದಿಂಜಿದ್ ಬರೆಪುನ ಆಸೆ
ನಿನ್ನ ಮೋಕೆದ ಪುದರ್ನ್ …
%%%%%%%%%%
ತುಳು ಬರದವರು ಜಗಳಕ್ಕೆ ಬೀಳುವುದು ಬೇಡವೆಂಬ ಭಯಕ್ಕೆ ಅದರ ಕನ್ನಡ ರೂಪವೂ ಇದೆ ನೋಡಿ.
(ಇದು ಅಕ್ಷರಕ್ಷರ ಅನುವಾದವಲ್ಲ; ಭಾವಾನುವಾದ)
ಆಸೆ
ಸೃಷ್ಟಿಯ ಮಡಿಲಲ್ಲರಳಿದ
ಚಿಗುರೆಲೆಗಳ ಮೇಲೆ…
ಘಮಘಮಿಸಿ ನಗುವ
ಸುಮ ರಾಶಿಯ ಮೇಲೆ…
ಹುಣ್ಣಿಮೆ ಚಂದ್ರನ ಮೇಲೆ…
ಎಳೆಗರುವಿನ ತುಟಿಗಳ ಮೇಲೆ…
ಸಪ್ತ ಸಾಗರದ ನೀಲ ನೀರಿನ ಮೇಲೆ…
ಬಾನ ವಿಸ್ತಾರದ ಮೇಲೆ…
ಮೇಘ ಮಾಲೆಗಳ ಮೇಲೆ…
ಮಿನುಗುವ ಚಿಕ್ಕಿಗಳಿಂದಲೇ ಬರೆವಾಸೆ
ನಿನ್ನ ಮೋಹಕ ಹೆಸರನು…
%%%%%%%%%
Posted in ಎಸ್.ಡಿ.ಎಂ ಕಾಲೇಜು, ಕವನ
Tags: ತುಳು, ಭಾಷೆ
•September 17, 2009 •
Leave a Comment

ನಮ್ ನಮಸ್ಕಾರ ನಿಮಗ ...
ಪುಟ್ಟದಾಗಿ ಬ್ಲಾಗಿನಲ್ಲಿ ಪ್ರಕಟಿಸಿ ವಿಷಯ ತಿಳಿಸಿದ್ದಷ್ಟೇ ನಾವು. ವಿಶ್ವಾಸವಿಟ್ಟು ಕಾರ್ಯಕ್ರಮ ನೋಡಿದ್ದೀರಿ. ಅಭಿಪ್ರಾಯ ತಿಳಿಸಿದ್ದೀರಿ. ಆಯುರ್ವೇದಕ್ಕೆ ನೀವು ನೀಡಿದ ಪ್ರೋತ್ಸಾಹಕ್ಕೆ ಕೃತಜ್ಞರು ನಾವು. ಹೀಗೆ ಜತೆಗಿರೋಣ. ನಮ್ಮ ದೇಶದ ವೈದ್ಯ ಪದ್ಧತಿ ಜಗತ್ತಿನ ಮಾದರಿ ಪದ್ಧತಿಯಾಗಲಿ ಎಂಬಾಸೆ ನನ್ನದು. ಈ ಆಶಯಕ್ಕೆ ಕೈಗೂಡಿಸಿದ ನಿಮಗೆಲ್ಲ ಮತ್ತೊಮ್ಮೆ ವಂದನೆ.
ನಲ್ಮೆಯಿಂದ,
ಸುಕೃತಂ ಆಯುರ್ವೇದ
Posted in ಸುಕೃತಂ ಆಯುರ್ವೇದ
Tags: ಧನ್ಯವಾದ
•September 15, 2009 •
2 Comments
ಚಿಕ್ಕದೊಂದು ಕರೆಕ್ಷನ್ :
ಟಿವಿ 9 ನಲ್ಲಿ ಇವತ್ತಿಗಿದ್ದ ಕಾರ್ಯಕ್ರಮದ ಪ್ರಸಾರ ನಾಳೆಗೆ ಪೋಸ್ಟ್ ಪೋನ್ ಆಗಿದೆ. ತೊಂದರೆಗೆ ಕ್ಷಮೆಯಿರಲಿ. ಸಮಯದಲ್ಲಿ ಏನೂ ಬದಲಾವಣೆ ಇಲ್ಲ. ಟಿವಿ 9 ನಲ್ಲಿ ಮಧ್ಯಾಹ್ಣ 1:30ಕ್ಕೆ ಮತ್ತು ಸಂಜೆ 5:30ಕ್ಕೆ ಮರು ಪ್ರಸಾರ. ನೋಡಿ
Posted in ಆಯುರ್ವೇದ
Tags: ಕ್ಷಮೆಯಿರಲಿ
•September 14, 2009 •
6 Comments

ನಮ್ಮ ಸುಕೃತಂ ಆಯುರ್ವೆದಾಲಯ

ನಸ್ಯ ಕರ್ಮ ಚಿಕಿತ್ಸಾ ನಿರತ ವೈದ್ಯರು
ನನ್ನ ಬಾಳ ಗೆಳೆಯ ಡಾ. ಗಿರಿಧರ ಟೀವಿಯಲ್ಲಿ ಬರ್ತಿರೋ ಸಂತೋಷ ನಂಗೆ. ನೀವುಗಳು ಜತೇಲಿರೋ ಮಿತ್ರರು. ನಿಮ್ಮೊಂದಿಗೆ ಹಂಚಿಕೊಳ್ಳದ ಹೊರತು ಖುಷಿ ಪರಿಪೂರ್ಣ ಅನಿಸೋಲ್ಲ. ನನ್ ಹುಡುಗ ಟೀವೀಲಿ ಬರ್ತಿರೋದನ್ನ ಎಲ್ಲರಲ್ಲೂ ಹೇಳೋವರೆಗೂ ನಂಗೆ ಸಮಾಧಾನ ಆಗೋಲ್ಲ. ಅವರ ಮಾತು ಸನಾತನ ವೇದ ಆಯುರ್ವೇದ ಮತ್ತು ಕೇರಳೀಯ ಪಂಚಕರ್ಮದ ಬಗ್ಗೆ. ಒಂದಷ್ಟು ಚಿಕಿತ್ಸೆಗಳ ವಿವರಗಳೂ ಇರ್ತಾವೆ. ನಮ್ಮ ಹಾಸ್ಪಿಟಲ್ “ಸುಕೃತಂ ಆಯುರ್ವೇದ”ದಲ್ಲೇ ಮಾಡಿದ ಶೂಟಿಂಗ್. ನೀವೆಲ್ಲ ನೋಡಿ ಚೆನ್ನಾಗನಿಸಿದ್ದನ್ನು ಹೇಳಬೇಕು. ಚನ್ನಾಗಿಲ್ಲ ಅನಿಸಿದ್ದನ್ನು ಕಡ್ಡಾಯವಾಗಿ ಹೇಳಬೇಕು. ಅದರಿಂದ ನಮ್ಮ ಬೆಳವಣಿಗೆ ಸುಲಭ.
ನಾಳೆ (ಮಂಗಳವಾರ) ಟಿವಿ 9 ನಲ್ಲಿ ಮಧ್ಯಾಹ್ಣ 1:30ಕ್ಕೆ “ಲೇಡೀಸ್ ಕ್ಲಬ್”ನಲ್ಲಿ ಕಾರ್ಯಕ್ರಮ ಪ್ರಸಾರ ಮಾಡ್ತಾರೆ. ಸಂಜೆ 5:30ಕ್ಕೆ ಮರು ಪ್ರಸಾರ. ನೋಡಿ, ನಮ್ಮ ಖುಷಿಗೆ ಮೆರುಗು ನೀಡಿ.
ಹೆಚ್ಚೇನಾದ್ರೂ ವಿವರಗಳು ಬೇಕಾದ್ರೆ : www.sukruthamayurveda.com
Posted in ಆಯುರ್ವೇದ, ನನ್ ಹುಡುಗ
Tags: ಕೇರಳೀಯ ಪಂಚಕರ್ಮ
•September 9, 2009 •
24 Comments

ಮಗೂ,
ಇವತ್ತಿನಷ್ಟೇ ಅವತ್ತೂ ನೀನು ಬೇಕಾಗಿದ್ದೆ ನಮಗೆ. ಆದರೆ ಅವತ್ತು ಇವತ್ತಿನಷ್ಟು ಧೈರ್ಯವಿರಲಿಲ್ಲ. ನನ್ನೆಲ್ಲ ಕನಸುಗಳ ತುಂಬ ನೀನಿದ್ದೆ ಮತ್ತು ಬಹುಪಾಲು ನೀನು ಮಾತ್ರ ಇದ್ದೆ. ಅವು ಬರೀ ಕನಸು ಮಾತ್ರ ಕಾಣಬಹುದಾಗಿದ್ದ ದಿನಗಳು ಕಂದಾ. ನೀನು ಮೊಳಕೆಯೊಡೆದಾಗಷ್ಟೇ ನಾವು ವಾಸ್ತವದ ಕಡೆ ತಿರುಗಿದ್ದು; ಅಧೀರರಾಗಿದ್ದು. ನಿಜ ಹೇಳಲಾ ನಿನ್ನ ಇರುವಿಕೆಗಿಂತ ನೀ ಭೂಮಿಗೆ ಬಂದ ನಂತರದ ದಿನಗಳಿಗೆ ಹೆಚ್ಚು ಹೆದರಿದ್ದು. ಕಷ್ಟಗಳ ಕಣಿವೆಯಲ್ಲಿ ನಡೆಯುತ್ತಿದ್ದ ದಿನಗಳವು. ನಮಗೇ ಅದನ್ನೆದುರಿಸುವುದಾಗದೆ ತತ್ತರಿಸಿದಾಗ ನೀ ಬಂದು ನೀನೂ ಆ ನೊವಿನಲ್ಲಿ ಬೇಯುವುದು ಬೇಡವಾಗಿತ್ತು ಮಗೂ. ನಮ್ಮ ಬಾಲ್ಯದ ನಿರಾಸೆ, ಅವಮಾನಗಳು ನಿನ್ನ ಬಾಲ್ಯದ ವರೆಗೂ ಮುಂದುವರಿಯುವುದು ಇಷ್ಟವಿರಲಿಲ್ಲ. ಸುತ್ತೆಲ್ಲಿ ಕಣ್ಣು ಹಾಯಿಸಿದರೂ ಕಾಣುತ್ತಿದ್ದುದು ನಾವೇರಲಾರದ ಶಿಖರಗಳು…ಕಣ್ಣು ಮುಚ್ಚಿದ್ದರೂ ಏನೋ ಭೀತಿ, ಆತಂಕ.
ಆಗಿನ್ನೂ ಮೊಳಕೆಯೊಡೆದಿದ್ದರೂ ನೀನು ನಿನ್ನ ಇರುವುಕೆಯನ್ನು ನಾನಾ ರೀತಿಯಲ್ಲಿ ತೋರಿಸಿದ್ದೆ. ಆ ದಿನಗಳಲ್ಲಿ ನನ್ನ ಭಾವಲೋಕದ ಬಾಗಿಲಲ್ಲಿ ಸಪ್ತವರ್ಣದ ಕಾಮನಬಿಲ್ಲು. ಮುಸ್ಸಂಜೆ ಸುಮ್ಮನೇ ಮೆಟ್ಟಿಲ ಬಳಿ ಬಂದು ಕೂತರೆ ಛಕ್ಕನೆ ನೀ ಬಂದು “ಅಮ್ಮಾ” ಅಂದಂತೆ ಭಾಸ.. ಎದ್ದು ನೋಡಿದರೆ ನೀನಿಲ್ಲ ಆದರೂ ಪುಳಕ. ಅದುವರೆಗೂ ಸಾಮಾನ್ಯವೆನಿಸುತ್ತಿದ್ದ ಎಲ್ಲವೂ ನೀನಿದ್ದಾಗ ಬೆರಗು ಮೂಡಿಸುತ್ತಿತ್ತು. ಮಳೆಬಿಲ್ಲು, ನಕ್ಷತ್ರ, ನರ್ಸರಿ ಮಕ್ಕಳ ಹಾಡು, ಆಗಸದಲ್ಲಿ ಮೋಡ ಬರೆದ ಚಿತ್ರ, ಮಳೆ ಹನಿಯ ತುಂತುರು, ಮನೆಯೆದುರಿನ ಪಾರ್ಕಿಗೆ ವಾಕಿಂಗ್ ಬರುವ ಅಜ್ಜ ಅಜ್ಜಿ ಎಲ್ಲದರಲ್ಲೂ ಹೊಸತನ ದಕ್ಕಿದ್ದು ನಿನ್ನಿಂದ ಕಂದಾ. ಇಂಥದ್ದೊಂದು ಅದ್ಭುತ ಮಾಯಾಲೋಕದ ಸೃಷ್ಟಿಗೆ ಕಾರಣವಾದ ನಿನ್ನನ್ನೇ ನಾವು ಬೇಡವೆಂದೆವು. ಕ್ಷಮಿಸುವೆಯಾ ?
ತುಂಬಾ ಕನಸು ಕಂಡಿದ್ದೆ ನಾನು. ನಿನ್ನ ಪುಟಾಣಿ ಗುಲಾಬಿ ಪಾದಗಳಿಗೆ ಮುತ್ತಿಡುತ್ತಲೇ ಇರಬೇಕು, ಚಿಗುರು ಬೆರಳು ಹಿಡಿದು ತುಂಗೆಯ ತೀರದುದ್ದಕ್ಕೂ ಅಲೆದಾಡಬೇಕು, ನಾವಿಬ್ಬರೂ ಜತೆಯಾಗಿ ನೀರಿನಲ್ಲಿ ಕಾಲು ಇಳಿಬಿಟ್ಟು ಮೀನುಗಳ ಆಟ ನೊಡುತ್ತಾ ಮೈ ಮರೆಯಬೇಕು, ಮರಕೋತಿ ಆಟ ಆಡಬೇಕು, ಕನ್ನಡಿಯಷ್ಟು ನುಣುಪಾದ ನಿನ್ನ ಕೆನ್ನೆಯಲ್ಲಿ ನಗು ತುಂಬಿದಾಗ ನಾನದರ ಚಿತ್ರ ಬರೆಯಬೇಕು, ಪ್ರಕೃತಿಯ ಎಲ್ಲಾ ವಿಸ್ಮಯಗಳಿಗೆ ತೆರೆದುಕೊಳ್ಳುವಂತೆ ನೀನು ರೂಪುಗೊಳ್ಳಬೇಕು.. ಮುಂದೊಂದು ದಿನ ಜಗತ್ತೇ ಮೆಚ್ಚುವ ವಿಜ್ಞಾನಿ ನೀನಾಗಬೇಕು.. “ಹಿಂದೂಸ್ಥಾನವು ಎಂದೂ ಮರೆಯದ….” ಮತ್ತು ಇವೆಲ್ಲಕ್ಕೂ ಮೊದಲು ನಿಂಗೆ ನಿನ್ನಪ್ಪನಷ್ಟೇ ಒಳ್ಳೆಯ ಮನಸಿರಬೇಕು… ಪುಟ್ಟೂ, ನೀನು ಹೆಣ್ಣೇ ಆಗಿರುತ್ತೀ ಎಂಬ ದೊಡ್ಡ ನಂಬಿಕೆಯಿಂದ ನಿಂಗೆ “ಪ್ರಣತಿ” ಅಂತ ಹೆಸರಿಟ್ಟಿದ್ದೆ; ಒಂದು ವೇಳೆ ಅಲ್ಲದೇ ಹೋದರೆ “ಪ್ರಣೀತ್”.. ಹೀಗೇ ಕೋಟಿ ಕನಸುಗಳಿದ್ದವು. ಆದರೆ ವಿಧಿ ಅವನ್ನೆಲ್ಲ ಅಳಿಸಿ ಹಾಕಿತ್ತು. ಈಗ ಅನ್ನಿಸುತ್ತಿದೆ ಪರಿಸ್ಥಿತಿಯಲ್ಲ ಕಂದಾ, ಅದನ್ನೆದುರಿಸಲಾರದ ನಮ್ಮ ಹೇಡಿತನ ನಿನ್ನನ್ನು ಜಗತ್ತಿಗೆ ಬರಲಾರದಂತೆ ಮಾಡಿದ್ದು.
ಯಾವ ಭರವಸೆಯೂ ಇಲ್ಲದ ಆ ದಿನಗಳಲ್ಲಿ ನಮ್ಮನ್ನು ಜೀವಂತವಾಗಿರಿಸಿದ್ದು ಪ್ರೀತಿ..ಪ್ರೀತಿ ಮತ್ತು ಪ್ರೀತಿ. ಅದೊಂದು ನಮ್ಮ ದಾಂಪತ್ಯದಲ್ಲಿ ಹೊಳೆಯಾಗಿ ಹರಿಯುತ್ತಿತ್ತು. ಅಂಥದ್ದೇ ಯಾವುದೋ ಒಂದು ಘಳಿಗೆಯಲ್ಲಿ ಬಹುಶಃ ನೀ ಕುಡಿಯೊಡೆದಿದ್ದೆ. ನಾವು ಅಷ್ಟೇ ಪ್ರೀತಿಯಿಂದ ರಾಜಕುಮಾರಿಯಂತೆ ಬರಮಾಡಿಕೊಳ್ಳಬಹುದೆಂಬ ಆಸೆಯಿಂದ ನೀನೂ ಬಂದಿರಬೇಕು ಅಲ್ವಾ ? ಅಂಥಾ ನಿಂಗೆ ತುಂಬಾ ನೋವು ಮಾಡಿದೆ ನಾನು ಅಲ್ವಾ ? ಸಾರಿ ಕಂದಾ..
ಅವತ್ತು ನೀ ಬೇಡವೆಂದು ನಿರ್ಧಾರ ಮಾಡಿದ ದಿನವೂ ಕೂಡ ಎಂದಿನಂತಿರಲು ಪ್ರಯತ್ನ ಮಾಡಿದೆ. ಆಫೀಸಿಗೂ ಹೋಗಿ ಬಂದೆ. ಆದ್ರೆ ರಾತ್ರಿ ರಾಣಿ ತನ್ನ ಕತ್ತಲ ಚಾದರ ಹಾಸುತ್ತಿದ್ದಂತೆ ಯಾಕೋ ದುಖಃ ತಡೆಯಲಾಗಲಿಲ್ಲ. ನಾನೊಂದು ಕಡೆ, ಅವನೊಂದು ಕಡೆ ಕೂತು ಕಂಬನಿಯ ಕುಯಿಲು… ನಂತರದ ದಿನಗಳಲ್ಲಿ ಅರ್ಥವಾಯಿತು ಕಂದಾ, ಕಷ್ಟಗಳಿಗೆ ಹೆದರಿ ನಿನ್ನನ್ನು ಬೇಡವೆಂದಿದ್ದೇ ಬದುಕಿನ ಅತಿ ದೊಡ್ಡ ತಪ್ಪಾಯಿತು. ನಿನ್ನನ್ನು ಕಳಕೊಂಡ ಯಾತನೆಯಿಂದ ಹೊರಬರಲಾರದೇ ಹೋದೆ. ತಪ್ಪಿತಸ್ಥ ಭಾವ ನನ್ನ ದಿನವೂ ಕೊಲ್ಲುತ್ತಿತ್ತು. ಬದುಕಲ್ಲಿ ಮೊತ್ತ ಮೊದಲ ಬಾರಿಗೆ ಸೋಲಿನ ಅನುಭವವಾಯ್ತು. ಸುತ್ತಲಿನವರ ಮಾತು ಒತ್ತಟ್ಟಿಗಿರಲಿ, ನನ್ನೊಳಗಿನ ಪ್ರಶ್ನೆಗಳಿಗೇ ನನ್ನಲ್ಲಿ ಉತ್ತರವಿರಲಿಲ್ಲ. ಪೂರ್ತಿಯಾಗಿ ಸೋತಿದ್ದೆ ನಾನು. ನಂತರ ನನಗೆ ನಿನ್ನ ಹೊರತಾಗಿ ಬೇರೇನೂ ಬೇಡವೆನಿಸಿತ್ತು. ಕುಡಿಯಲು ಕಣ್ಣೀರು, ಉಣ್ಣಲು ಬೇಸರ, ಮಲಗಲು ಸಂಕಟದ ಹಾಸಿಗೆ, ಸೋಲಿನ ಹೊದಿಕೆ, ನಿರಾಸೆಯ ದಾರಿ…. ನನ್ನನ್ನೇ ನಾನು ಕ್ಷಮಿಸಲಾಗಿಲ್ಲ ಕಣೋ… ಬೆಳದಿಂಗಳಾಗಿ ಬರಬಹುದಾಗಿದ್ದ ಜೀವ ನೀನು; ಆದರೆ ನನಗೇ ಅದೃಷ್ಟವಿರಲಿಲ್ಲ. ನಿನ್ನಂಥ ಬೆಳಕಿನ ಕುಡಿಯನ್ನು ಮನೆಯೊಳಗಿರಿಸಿಕೊಳ್ಳಲಾರದೇ ಹೋದೆ. ಕತ್ತಲಲ್ಲಿ ಹೊಳೆದ ಬೆಳ್ಳಿ ಮಿಂಚನ್ನು ಗುರುತಿಸಲಾರದ ಮೂರ್ಖಳಾಗಿಬಿಟ್ಟೆ. ನಾ ಅವತ್ತು ಕಳಕೊಂಡಿದ್ದು ಕೇವಲ ನಿನ್ನನ್ನಲ್ಲ; ಬಾಳಿನುದ್ದಕ್ಕೂ ಜತೆಗಿರಬಹುದಾಗಿದ್ದ ಸಂಭ್ರಮವನ್ನು ಕೂಡ. ಅವತ್ತು ಬೇಡವಾಗಿದ್ದ ನೀನು ಇವತ್ತು ಮನೆಯ ಮಂದಾರವೆನಿಸುತ್ತಿದ್ದೀ. ಇದಲ್ಲವೇ ದುರಂತ ಅಥವಾ ಸ್ವಯಂಕೃತಾಪರಾಧ ?
ಕಂದಾ, ಈ ಮನೆಯಲ್ಲೀಗ ಕಷ್ಟಗಳಿಲ್ಲ. ನಾವಿಬ್ಬರಿದ್ದರೂ ಇದ್ದರೂ ಯಾರಿಲ್ಲ ಅನಿಸಹತ್ತಿದೆ. ನೀ ಬಿಟ್ಟು ಹೋದ ನೆನಪುಗಳು ಪದೇ ಪದೇ ಕೈ ಹಿಡಿದು ಜಗ್ಗುತ್ತಿವೆ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು; ಕನಸಿಲ್ಲದ ದಾರಿಯಲ್ಲಿ ನಡೆಯಲಾಗದು ಕಂದಾ, ಅರ್ಥವಾಗಿದೆ. ಒಡ್ಡಿಲ್ಲದ ಅಣೆಕಟ್ಟಿನಂತೆ ಯಾತನೆಯ ಧಾರೆ. ಅವ್ಯಕ್ತ ವೇದನೆಯೊಂದು ಹಿಂಡುತ್ತಿದೆ. ಎಲ್ಲಿದ್ದೀ ಹುಡುಗಾ ಅಂದರೆ “ಯಾಕೆ” ಎಂಬೊಂದು ಮೆಸೇಜು ಕಳುಹಿಸಿದ ನೋಡು ಆ ಕ್ಷಣ ನೀನು ನೆನಪಾದೆ. ಇಷ್ಟು ದಿನ ಸುಡುತ್ತಿದ್ದ ಎಲ್ಲ ಬೆಂಕಿಯನ್ನು ನಿನ್ನೆದುರು ಹೊರ ಚೆಲ್ಲಿರುವೆ. ಬಹುಶಃ ಈ ನೋವುಗಳೆಲ್ಲ ನಿನ್ನ ಕಂಬನಿಯ ಶಾಪ. ಬೇಡ ಕಂದಾ ಭರಿಸಲಾರೆ ಈ ಯಾತನೆ. ಬೇಸರದ ಬಿಸಿ ಬದುಕು ಸಾಕಾಗಿದೆ ನನಗೆ; ಕ್ಷಮಿಸಿದ್ದೇನೆ ಅಂತೊಮ್ಮೆ ಅಲ್ಲಿಂದಲೇ ಅಂದು ಬಿಡು. ಮನದಲ್ಲಿ ಮನೆಯಲ್ಲಿ ತಂಗಾಳಿ ಹರಡಲಿ. ಇನ್ನು ನನ್ನ ಕಾಡಬೇಡ ಪ್ಲೀಸ್…
“ದೀಪವು ನಿನ್ನದೇ ಗಾಳಿಯು ನಿನ್ನದೇ…
ಆರದಿರಲಿ ಬೆಳಕು… ಮುಳುಗದಿರಲಿ ಬದುಕು…”
(ಬರಹ ಕಾಲ್ಪನಿಕ, ಚಿತ್ರ ಮಾತ್ರ ನಿಜಾ ನಿಜ…)
Posted in ನೋವು, ಪರಿತಾಪ
Tags: ಕ್ಷಮೆಯಿರಲಿ, ಪಶ್ಚಾತ್ತಾಪ
•August 31, 2009 •
8 Comments

ಬೆಂಗಳೂರಿಂದಾಚೆ ಹೋಗುವುದು ಮೂರೇ ದಿನಗಳ ಮಟ್ಟಿಗೆ…
ಬಂದ ಮೇಲೆ ಸುಧಾರಿಸಿಕೊಳ್ಳಲು ಅಂತ ಒಂದು ದಿನ…
ಎಲ್ಲಾ ಸೇರಿ ನಾಲ್ಕು ದಿನದ ರಜೆ… ಅಷ್ಟು ದಿನ ಬ್ಲಾಗ್ ಕಡೆ ಬರಲಾಗದು
ಹಿಂತಿರುಗುವ ಹೊತ್ತಿಗೆ ಒಂದಷ್ಟು ಚೆಂದದ ಚಿತ್ರಗಳನ್ನು ತರುತ್ತೇನೆ. ಪ್ರಾಮಿಸ್…
ಬರಲಾ….
Posted in ಪ್ರವಾಸ
Tags: ರಜಾ ಅರ್ಜಿ
•August 31, 2009 •
14 Comments

ಬದುಕೆಂಬ ಭಾವ ಲೋಕದ ಮಹಾನ್ ಅಚ್ಚರಿಯಿವನು. ಇಂಥವ ಇನ್ನೊಬ್ಬನಿರಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಹುಟ್ಟಿಸಿದವನು. ವರ್ಷಗಳಿಂದ ಕಾಡುತ್ತಿದ್ದ ಒಗಟುಗಳಿಗೆ ಉತ್ತರವೆನಿಸುತ್ತಲೇ ಎಂಥ ಒರಟು ಒಗಟಿವನೆಂಬ ಪ್ರಶ್ನೆ ಹುಟ್ಟಿಸಬಲ್ಲ ತಾಕತ್ತಿನವನು. ಉತ್ತರ ಸಿಗದೇ ತಡಕಾಡುತ್ತಿದ್ದರೆ ಮೀಸೆಯಂಚಿನಲಿ ನಗುತ್ತ ಮಡಿಲಿಗೇ ಬಂದು ಪ್ರಶ್ನೆ ಮರೆಸುವ. ಘಟ್ಟದ ಮೇಲಿಂದ ಇಳಿದು ಬಂದು ಅದಾವ ಮಾಯೆಯಲ್ಲೋ ಬಯಲಿನ ಹುಡುಗಿಯನ್ನು ಹೊತ್ತೊಯ್ದ ಹುಡುಗ. ಉತ್ತರದಲ್ಲೇ ಪ್ರಶ್ನೆ ಹುಟ್ಟಿಸಿ ಕಣ್ಣು ಮಿಟುಕಿಸಬಲ್ಲ ಹುಡುಗಿಯನ್ನು ಮರುಳಾಗಿಸಿ ಸುಮ್ಮನೇ ಮೌನದ ಜೋಕಾಲಿಯಲ್ಲಿಟ್ಟು ತೂಗಿದ ಮಾಧವ.
ಲೋಕ ವಿನಾಶವಾದೀತೆಂಬುದು ಸ್ಪಷ್ಟವಿದ್ದರೂ ಗಂಗೆಯ ಬಿಟ್ಟ ಮಹದೇವನೋ, ವಿನಾಶ ತಡೆಯಲು ಆಪೋಶನಗೈದ ಭಗೀರಥನೋ ಎಂಬ ಭ್ರಮೆ ಹುಟ್ಟಿಸಬಲ್ಲ ಧೀರ. ತನ್ನ ಹರಿವಿನುದ್ದಕ್ಕೂ ಹಸಿರ ಸೆರಗು ಮೂಡಿಸಿದ ಗಂಗೆಯೂ ಇವನೇನಾ ? ಇವನ ಮೌನ ಸಹಿಸಿಕೊಳ್ಳುವ ಶಕ್ತಿಯಿಲ್ಲ; ಮೌನದ ಕೋಟೆ ಕೆಡಹುವ ಯುಕ್ತಿಯಿಲ್ಲ. ಪ್ರಿಯನಾ, ಗಂಡನಾ, ಒಲಿದು ಬಂದ ದೇವನಾ, ಎಲ್ಲವೂ ಮೇಳೈಸಿದ ಗೆಳೆಯನಾ… ಉಹುಂ.. ಅರ್ಥಗಳ ಸೂತ್ರಕ್ಕೆ ನಿಲುಕದವನಿವನು. ಹಿಂದೆ ಮುಂದಿನವುಗಳಲಿ ನಂಬಿಕೆಯಿಲ್ಲದಾಗಲೂ ಜನ್ಮಾಂತರದ ಸಾಥಿ ಎನಿಸುತ್ತ ಒಮ್ಮೊಮ್ಮೆ ಮಗುವಿನಂತೆ, ಇನ್ನೊಮ್ಮೆ ನಗುವಿನಂತೆ ಆವರಿಸುವ.. ಸಿಟ್ಟು, ಸೆಡವು, ಮುನಿಸು, ಕೊರಗು, ಬೆರಗು ಎಲ್ಲ ಮುಖದ ಮೇಲಿನ ಮೊಡವೆಯಷ್ಟು ಸಹಜ. ಅಷ್ಟೇ ಹತ್ತಿರಿರುವ ಎಂದು ಕೈ ಚಾಚಿದರೆ ಎಲ್ಲೋ ಬಾನೆತ್ತರದ ನಕ್ಷತ್ರ.
ಬೇಕಾದ್ದನ್ನು ಪಡೆದೇ ತೀರುವ ಛಲದ ಬಳ್ಳಿ ಹುಟ್ಟಿದ್ದು ಇವನೆದೆಯಲ್ಲೇ; ಬೇಡಾದ್ದನ್ನು ನಿರಾಕರಿಸುವ ಜಾಣ್ಮೆ ಕೂಡ. ಜೀವವಿತ್ತ ತನ್ನ ಹಳ್ಳಿಯ ಅಷ್ಟೂ ವಿಸ್ಮಯಗಳು, ನಿರಾಡಂಬರತೆಯನ್ನು ತನ್ನಲ್ಲಿಟ್ಟುಕೊಂಡೇ ಜೀವನವಿತ್ತ ನಗರದ ನಾವೀನ್ಯತೆಯನ್ನು, ಸಾವಿರ ಝಲಕ್ ಗಳನ್ನು ದಿವ್ಯ ನಿರಾಳತೆಯ ಜತೆಗೇ ಮುಟಿಗೆಯಲ್ಲಿಟ್ಟುಕೊಂಡವ.
ಸದ್ದಿಲ್ಲದೇ ಸುಗ್ಗಿಯಲ್ಲರಳುವ ಮೊಗ್ಗಿನಂತೆ ನನ್ನಂಗಳಕೆ ಬಂದು ಪೂರ ಕಲರವದ ಚಪ್ಪರ ಬೆಳೆದವನು. ನಕ್ಷತ್ರಗಳ ತೋರಣ ಕಟ್ಟಿ ಚಂದಿರನ ದೀಪವಾಗಿಸಿದವನು. ಮಿಂಚಂತೆ ಬಂದು ನಕ್ಷತ್ರದ ಐಸಿರಿಯ ಮಡಿಲಲಿಟ್ಟವನು. ನಾ ಕಾಣದೇ ಇದ್ದ ಬದುಕಿನೆಳೆಗಳ ನಿರ್ಭಿಡೆಯಿಂದ ನನ್ನೆದುರು ಹರಡಿ ಜುಮ್ಮೆನಿಸಿದವನು. ನನಗೆ ನೀನೇ ದಿಕ್ಕು, ನೀನೇ ಗಮ್ಯವೆಂದಿದ್ದು ಕೇಳಿಸಲೇ ಇಲ್ಲವೇನೋ ಎಂಬಂತೆ ತನ್ನ ಪಾಡಿಗೆ ತಾನು ನಡೆವ ಮುಸಾಫಿರ್ ಇವನು. ಕಾದು ಕಾದು ಸಾಕಾಗಿ ಇನ್ನು ಈತ ಬರಲೊಲ್ಲವೆಂದು ನಿದ್ರಿಸಿದರೆ ಮಧ್ಯರಾತ್ರಿ ಕನಸಿನಂತೆ ಬಂದು ಎದೆಯ ಕದ ತಟ್ಟುವವನು. ವಿರಹದೆಲ್ಲ ಮುನಿಸನ್ನು ಕ್ಷಣ ಮಾತ್ರದಲ್ಲಿ ತುಟಿಕಚ್ಚಿ ಕರಗಿಸಿ ಬಿಡುವವನು. ನಿನ್ನೆ ರಾತ್ರಿ ನೋಯಿಸಿದ್ದು ನೆನಪೇ ಇಲ್ಲವೆಂಬ ತೆರದಲಿ ಮತ್ತೆ ಆವರಿಸಿ ಒಡಲಲ್ಲಿ ಒಲುಮೆಯ ಅಮೃತಬಳ್ಳಿ ಹಬ್ಬಿಸುವವನು. ಭಾರ ಬದುಕಿನ ದೂರ ದಾರಿಯ ಹಗುರಾಗಿಸಿ ನಮ್ಮ ಪ್ರೀತಿ ಪೊರೆಯುವವನು…
Posted in ಇವನಿರೋದೆ ಹೀಗೆ..., ಕನವರಿಕೆ
Tags: ಪ್ರೀತಿ
•August 21, 2009 •
2 Comments
ನಿನ್ನಾಣೆ ಗೆಳತೀ
ನಿನ್ನ ಸ್ಪರ್ಷದ
ಕರೆಂಟ್ ಬೇಕಾಗಿದೆ…
ಆಣೆ ಭಾಷೆ ಬೇಕಿಲ್ಲ
ಗೆಳೆಯಾ ಕಣ್ಣು
ನೂರಾಸೆ ಹೇಳಿದೆ…
*****
Posted in Honeyಗಳು
Tags: ಪ್ರೇಮ
•August 12, 2009 •
8 Comments

ಪರಿಸರದೆಡೆಗೆ ಸಾಂಗತ್ಯದ ನಡಿಗೆ
ಕುಪ್ಪಳ್ಳಿಯ ತಣ್ಣನೆ ಹವೆಯಲ್ಲಿ ಕಾಲಿಟ್ಟ ನಮಗೆ ಸಂಭ್ರಮದ ಚಿತ್ರೋತ್ಸವದ ಆರಂಭಕ್ಕೇ ಸಿಕ್ಕಿದ್ದು ಬೇಂದ್ರೆ ತಾತನ ಕುರಿತಾದ ಸಾಕ್ಷ್ಯ ಚಿತ್ರ. ಕೆಲವು ಕಡೆಯಂತೂ ಅವರೇ ಎದ್ದು ಬಂದಂತೆ ಭಾಸ.
ನಂತರದ್ದು “ಕಾರಂತಜ್ಜನಿಗೊಂದು ಪತ್ರ” ಸಚ್ಚಿದಾನಂದ ಹೆಗಡೆಯವರ ಕಥೆ, ಜೋಗಿಯವರ ಚಿತ್ರಕಥೆಯಿರುವ ಈ ಸಿನೆಮಾ ನೋಡಿದ್ದು ಕಥೆ ಆಧಾರಿತ ಚಿತ್ರಗಳ ವಿಭಾಗದಲ್ಲಿ. ಭಾರತಿ ಶಂಕರ್ ನಿದರ್ೇಶನ ಬಿಗುವಿಲ್ಲದೆ ಸಾಗಿದಂತೆಯೂ ಮೂವತ್ತು ನಿಮಿಷಗಳಲ್ಲಿ ಮುಗಿಸಬಹುದಾದ ಚಿತ್ರವನ್ನು ಗಂಟೆಗಟ್ಟಲೇ ತೋರಿಸಿದಂತೆಯೂ ನನಗನಿಸಿದ್ದು ಬಹುಶ: ಸೋಜಿಗವೇನಲ್ಲ. ಶಾನುಭೋಗರ ಮಗ ಅಷ್ಟು ಸಣ್ಣ ವಯಸಿನ ರಾಘು ಬಾಯಲ್ಲಿ ಆಡಿಸಿದ ಮಾತುಗಳು ವಯಸಿಗೆ ಮೀರಿದವೇನೋ ಅಂತಲೂ ಅನಿಸಿದ್ದು ಹೌದು. ಕಡಲ ಕೊರೆತದಂಥಾ ವಿಷಯವನ್ನು ನಿರಂತರ ತಲೆ ಕೊರೆವಷ್ಟು ಗಾಢವಾಗಿ ಚಿತ್ರಿಸುವಲ್ಲಿ ಸೋತಿದ್ದಾರೆ. ಕಡಲತೀರದ ಕಥೆಗೆ ಅಲ್ಲಿನದೇ ಭಾಷೆಯ ಟಚ್ ಕೊಟ್ಟಿದ್ದರೆ ಚಿತ್ರಕ್ಕೆ ಮೂವತ್ತು ಮಾರ್ಕು ಹೆಚ್ಚಿಗೆ ಕೊಡಬಹುದಿತ್ತು. ಮೀನುಗಾರ ಅಷ್ಟು ದೊಡ್ಡ ಅಲೆ ಬರುತ್ತೆ ಅಂತ ಹುಡುಗನಿಗೆ ಹೇಳುವಾಗ ತೆರೆಯ ಮೇಲೆ ಕಾಣುವ ಅಲೆ ತೀರಾ ಸಾಮಾನ್ಯ ಗಾತ್ರದ್ದು. ಇನ್ನುಳಿದಂತೆ ಶಾನುಭೋಗರ ಆಡಳಿತ ವ್ಯವಸ್ಥೆಯ ಅಡಿಯಲ್ಲಿರುವ ಊರಿನ ರಾಜಕೀಯಗಳು, ಅಧಿಕಾರಿಗಳ ಉಡಾಫೆ, ಊರಿಗೆ ಊರೇ ಅಳುತ್ತಿದ್ದಾಗಲೂ ನಿರಾಳವಾಗಿ ಕೂರಬಲ್ಲ ತಹಶೀಲ್ದಾರ, ಎಂದೋ ಊರು ಬಿಟ್ಟು ಹೋದ ಮಗನಿಗಾಗಿ ಇನ್ನೂ ಕಾಯುತ್ತಲೇ ಇರುವ ತಾತ, ಮುದ್ದಿನ ಹಸು ಕಪಿಲೆಯನ್ನು ಬಿಟ್ಟು ಹೋಗಲಾರದೆ ಅಳುವ ಶಾನುಭೋಗರ ತಾಯಿಯ ವೇದನೆ ಎಲ್ಲ ಸಹಜ ಸಹಜ.. ನನ್ನ ಮನ ತಟ್ಟಿದ್ದು ಸದಾನಂದ ಮೇಷ್ಟ್ರು ಮಕ್ಕಳನ್ನು ಆವರಿಸಿಕೊಳ್ಳುವ ಪರಿ. ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಅಂಥದ್ದೇ ಅವಿನಾಭಾವ ಸಂಬಂಧ. ಒಂದನೇ ಕ್ಲಾಸಿನ ರುಕ್ಮಯ ಮಾಸ್ತರು, ಎರಡನೇ ಕ್ಲಾಸಿನ ರಮಾನಂದ ಮಾಸ್ತರು, ಪ್ರಮೀಳಾ ಟೀಚರು, ಸುಧಾ, ಶಶಿಕಲಾ ಟೀಚರುಗಳೆಲ್ಲರೂ ನನ್ನ ಮನದಂಗಳದಲ್ಲಿ ಸುಳಿದಾಡಿದ್ದರು. ಮನೆಗಿಂತ ಹೆಚ್ಚು ಹೊತ್ತು ಶಾಲೆಯಲ್ಲಿ ಕಳೆಯುತ್ತಿದ್ದ ನಮಗೆ ಟೀಚರುಗಳೆಂದರೆ ಎಲ್ಲರಿಗಿಂತ ಹೆಚ್ಚು ಶಕ್ತಿವಂತರೆಂಬ ಭಾವ. ಮೂರನೇ ಕ್ಲಾಸಿನಲ್ಲಿದ್ದಾಗ ಶಶಿಕಲಾ ಟೀಚರು ಉಟ್ಟ ಸೀರೆ ನನ್ನಮ್ಮನ ಬಳಿಯೂ ಇತ್ತೆಂಬ ಕಾರಣಕ್ಕೆ ಅದೆಷ್ಟು ಸಂಭ್ರಮವಿತ್ತು ನನಗೆ.. ಮನಸನ್ನು ಪೂರ್ತಿಯಾಗಿ ಬಾಲ್ಯದ ಕಡೆಗೆ ಸೆಳೆದ ಶಾಲೆ ಮತ್ತು ಮಕ್ಕಳ ಚಿತ್ರಣಕ್ಕೆ ವಂದೇ.
ಎಲ್ಲೋ ಓದಿದ ತರಂಗದ ನೆನಪಿನಿಂದ ಮಕ್ಕಳೆಲ್ಲ ಒಟ್ಟಾಗಿ ಕಾರಂತಜ್ಜನಿಗೆ ಪತ್ರ ಬರೆಯುವುದು, ಅವರ ಮಾರುತ್ತರದ ನಿರೀಕ್ಷೆ, ಅವರೊಬ್ಬರು ಜತೆಗಿದ್ದರೆ ಎಲ್ಲಾ ಗೆಲ್ಲಬಲ್ಲೆವೆಂಬ ನಂಬಿಕೆ, ಅವರದೇ ರೀತಿಯಲ್ಲಿ ಮಾಡುವ ಸಂಘಟನೆ, ಕಾರಂತಜ್ಜ ಹೇಳಿದ್ದೇ ಸರಿ ಅವರ ಮಾತಿಗೆ ಎದುರಿಲ್ಲವೆಂಬಂತೆ ಪ್ರತಿರೋಧವಿಲ್ಲದೇ ಮೌನವಾಗಿ ಊರು ಬಿಡುವುದು, ಎಲ್ಲ ಸಹಜವಾಗಿ ಮೂಡಿ ಬಂದಿದೆ. ಈ ಮಕ್ಕಳೆಲ್ಲ ಎಲ್ಲೋ ಒಂದು ಕಡೆ ಭವಿಷ್ಯದ ಬೆಳಕಿನಂತೆ ಕಾಣುವುದು ನಿಜ. ಪರಿಸರ ಸಂರಕ್ಷಣೆ, ಮನುಕುಲ ವಿನಾಶ ತಡೆಯ ನಿಟ್ಟಿನಲ್ಲಿ ಮಾಡಿದ ಈ ಸಿನೆಮಾ ತನ್ನ ಆಶಯವನ್ನು ಪೂರ್ತಿಯಾಗಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಪೂರೈಸುವಲ್ಲಿ ಯಶಸ್ವಿಯಾಗಿದೆ. ಹೈಸ್ಕೂಲು ಮಕ್ಕಳಿಗೆ ತೋರಿಸಿದರೆ ಇನ್ನೂ ಹೆಚ್ಚು ಪರಿಣಾಮಕಾರಿಯಾದೀತು. ಒಟ್ಟಾರೆಯಾಗಿ ನಾನು ಕೊಡಬಹುದಾದ್ದು ಅರವತ್ತು ಮಾರ್ಕು. ಚಿತ್ರದ ಕ್ಲೈಮಾಕ್ಸು ಎಂಬುದನ್ನು ಮೊದಲಿಗೇ ತೋರಿಸುವ ಬದಲು ಕೊನೆಯಲ್ಲಿ ತೋರಿಸಿದ್ದರೆ ಇನ್ನೊಂದೈದು ಜಾಸ್ತಿ ಕೊಡಬಹುದಿತ್ತೇನೋ…
ಇನ್ನುಳಿದ ಚಿತ್ರಗಳ ಬಗ್ಗೆ ನಿಧಾನವಾಗಿ ಬರೆಯುವೆ
(ಚಿತ್ರ ಗೌತಮನ ಅಪ್ಪಣೆಯಿಲ್ಲದೆ ಕದ್ದದ್ದು)
Posted in ಕಾರಂತಜ್ಜನಿಗೊಂದು ಪತ್ರ, ಚಿಂತನೆ, ಚಿತ್ರೋತ್ಸವ, ಸಿನೆಮಾ
Tags: ಸಾಂಗತ್ಯ
•August 11, 2009 •
16 Comments
ಕಳೆದ ಎರಡು ದಿನಗಳ ಚಿಕ್ಕ ಝಲಕ್ …
ನನ್ನ ಕ್ಯಾಮರಾಗೆ ಸಣ್ಣ ಜ್ವರ ಬಂದ ಕಾರಣ ಅದು ಎಂದಿನಂತಿರಲಿಲ್ಲ…
ಎಲ್ಲಾ ಚಿತ್ರಗಳು ಸ್ಪಷ್ಟವಿಲ್ಲ; ಅದಕ್ಕಾಗಿ ಕೆಲವು ಚಿತ್ರಗಳನ್ನು ಮಾತ್ರ ಹಾಕಿರುವೆ. ಮನ್ನಿಸಬೇಕು..
ಜ್ವರ ವಾಸಿಯಾದ ನಂತರ ಮೊದಲಿನಂತೆ ಕ್ರಿಸ್ಟಲ್ ಕ್ಲಿಯರ್..

ಪರಮೇಶ್ವರ ಗುರುಸ್ವಾಮಿಯವರಿಂದ ಉದ್ಘಾಟನೆ

ಹೀಗಿದೆ ನೋಡಿ ನಮ್ಮ ತಂಡ

ನಿರ್ದೇಶಕರಾದ ಗುರುಪ್ರಸಾದ್ ಜತೆ ಚರ್ಚೆ

ಎಲ್ಲಾರೂ ಇಷ್ಟು ಶಿಸ್ತಾಗಿ ಕೂತು ಬರೀತಿರೋದೇನು ?

ಏನಿದು ಸೊಗಸು... ಎಷ್ಟೊಳ್ಳೆ ಪೋಸು... (ದೀಪಾ, ಶಿಶಿರ್, ನಿರಂಜನ್, ಸದಾನಂದ್)

ಗುರುಪ್ರಸಾದ್ ಮಾತಲ್ಲಿ ಕಳೆದು ಹೋದ ಕನಸುಗಾರರು.

ಪ್ರಮಾಣ ಪತ್ರ ತೊಗೊಳಿ ಸುಧೀರ್

ಗುರುಪ್ರಸಾದ್ ಜತೆ ಉಭಯ ಕುಶಲೋಪರಿ

ವಿಶ್ವಮಾನವನ ಜತೆ ಸಂದೇಶ ಸಾರಿದ ಕವಿ
Posted in ಚಿತ್ರೋತ್ಸವ, ಸಾಂಗತ್ಯ
Tags: ಸಾಂಗತ್ಯ
Recent Comments