ಮನಸಿನೊಳಗಿನ ಕುಸುಕುಸು…..

ಒಂದು ಮನಸು ನೂರು ಕನಸು

ಬ್ರಾಹ್ಮಿ ಆಯುರ್ವೇದ ಚಿಕಿತ್ಸಾಲಯ ಉದ್ಘಾಟನೆಯ ಕರೆಯೋಲೆ

ನಮಸ್ತೆ….

ನಾಲ್ಕು ವರ್ಷದ ಹಿಂದೆ ವಿಜಯನಗರದಲ್ಲಿ  ಸುಕೃತಂ ಆಯುರ್ವೇದ ಆರಂಭವಾದಾಗ ನಾಲ್ಕು ವರ್ಷ ತುಂಬುವ ಮೊದಲೇ ಹೀಗೆ ಒಂದಷ್ಟು ಚಿಕಿತ್ಸಾಲಯಗಳನ್ನು ತೆರೆಯಬೇಕು ಎಂಬ ಕನಸಿತ್ತು. ಈಗದು ಸಾಕಾರ ಆಗಿದೆ. ಬನ್ನೇರುಘಟ್ಟ ರಸ್ತೆ ಅರಕೆರೆ ಬಳಿ ಬ್ರಾಹ್ಮಿ ಆಯುರ್ವೇದ ಚಿಕಿತ್ಸಾಲಯ ಪ್ರಾರಂಭ ಆಗುತ್ತಿದೆ. ಮಿತ್ರರಾದ ಮಧುರೇಶ್ ಜತೆ ಸೇರಿ ಆರಂಭಿಸುತ್ತಿದ್ದೇವೆ. ಉದ್ಘಾಟನೆಯ  ಕರೆಯೋಲೆ ಇದರೊಂದಿಗಿದೆ… ಬೆಳಗ್ಗೆ ಹತ್ತು ಘಂಟೆಯಿಂದ ಸಂಜೆ ಐದು ಘಂಟೆಯೊಳಗೆ ನಿಮಗೆ ಅನುಕೂಲವಾಗುವ ಯಾವುದೇ ಸಮಯದಲ್ಲಿ ಬರಬಹುದು… ದಯವಿಟ್ಟು ಬನ್ನಿ ….. ಖುಷಿಗೆ ಸಾಥ್ ಕೊಡಿ….
ಏನೇನಿದೆ : ಖಾಯಿಲೆಗಳಿಗೆ ಔಷಧಗಳು ಮಾತ್ರವಲ್ಲ….ಆರೋಗ್ಯ ಸಂಬಂಧಿ ತೊಂದರೆಗಳಿದ್ದಲ್ಲಿ ಪ್ರತಿ ದಿನ ವೈದ್ಯರು ಇರುತ್ತಾರೆ…
ನಮ್ಮ ಬೈಕು, ಕಾರುಗಳನ್ನು ಸಮಯಕ್ಕೆ ಸರಿಯಾಗಿ ಸರ್ವಿಸ್ ಮಾಡಿಸುತ್ತೇವಲ್ಲ, ಹಾಗೆ ನಮಗಾಗಿ ಗೆಯ್ಮೆ ಮಾಡುವ ದೇಹಕ್ಕೆ ಏನೂ ಬೇಡವೇ …. ಅದಕ್ಕಾಗಿಯೇ ತೈಲಾಭ್ಯಂಗ (Body Massage), ಶಿರೋಧಾರಾ ಮುಂತಾದ rejuvination ಸೌಲಭ್ಯಗಳಿವೆ.. ಇವುಗಳನ್ನು ಆರೋಗ್ಯವಾಗಿ ಇರುವವರೂ ಮಾಡಿಸಿಕೊಳ್ಳಬಹು … ಸುಮ್ಮನೆ ಬೋರ್ ಅನ್ನಿಸಿದಾಗಲೂ ಬರಬಹುದು… ಖುಷಿ ಅನಿಸಿದಾಗಲೂ ಬರಬಹುದು…
ಈ ಮಾತುಗಳೆಲ್ಲ ಹಾಗಿರಲಿ.. ನಾಡಿದ್ದು ಭಾನುವಾರ (11-12-2011) ರಂದು ಉದ್ಘಾಟನೆಗೆ ತಪ್ಪದೆ ಬಂದು ಹೋಗಿ… ಬೆಳಗ್ಗೆ ಹತ್ತರಿಂದ ಸಂಜೆ ಐದು ಘಂಟೆಯೊಳಗೆ ನಿಮ್ಮ ಅನುಕೂಲದ ಸಮಯದಲ್ಲಿ ಬನ್ನಿ.. ಇವೆಲ್ಲ ಭೇಟಿಗೊಂದು ನೆಪಗಳು… ಖಂಡಿತ ಬನ್ನಿ..

ಬ್ರಾಹ್ಮಿ ಆಯುರ್ವೇದ ಚಿಕಿತ್ಸಾಲಯ ಉದ್ಘಾಟನೆಯ ಕರೆಯೋಲೆ

December 6, 2011 Posted by | ಆಯುರ್ವೇದ | , | Leave a Comment

Fact that surprised me…

SMS sent by my friend : Why is “Live” backwards “Evil” & “Lived” backwards “Devil” ?? 

November 17, 2011 Posted by | ಹೀಗೇ ಸುಮ್ಮನೆ | , | Leave a Comment

ಜೋಗಿಮನೆಯಿಂದ…

ಒಂದೆಡೆ ಚಂದದ ಜೋಗಿ ಕಥೆ, ಇನ್ನೊಂದೆಡೆ ಕಾವ್ಯದ ಹಣತೆ… ಅಮ್ಮನ ಕೈಲಿರೋ ಜಿಲೇಬಿ, ಅಪ್ಪನ ಜೇಬಲ್ಲಿರೋ ಚಾಕಲೇಟು ಎರಡೂ ಬೇಕು ಅನ್ನೋ ಮಗುವಿನ ಹಾಗೆ… ಪ್ರಕಾಶ್ ರೈ ನೋಡದೆ ಇರಲಾರೆ; ಜಿ.ಎಸ್.ಎಸ್ ಬಿಡಲಾರೆ ಎಂಬ ಸಂಕಷ್ಟಕ್ಕೆ ಸಿಲುಕಿ ಹೇಗೋ ತಿಪ್ಪರಲಾಗ ಹಾಕಿ ಇಬ್ಬರನ್ನೂ ಮಾತಾಡಿಸಿ ಬಂದ ಖುಷಿಗೆ ಎಣೆಯಿಲ್ಲ. ಜಿ.ಎಸ್.ಎಸ್ ಚಿತ್ರಗಳು ಈಗಾಗಲೇ ಸುಮಾರು ಬಂದಿರುವ ಕಾರಣ ನನ್ನ ಕ್ಯಾಮರಾಗೆ ಸಿಕ್ಕಿದ ಜೋಗಿ ಕಾರ್ಯಕ್ರಮದ ಒಂದಷ್ಟು ಚಿತ್ರಗಳನ್ನು ಹಾಕಿದ್ದೇನೆ.

ಗೆಳೆಯರ ಬಳಗ

ಅವಧಾನಿಗಳ ಆಚೀಚೆ

ಅಮ್ಮ ನಿನ್ನ ಪದತಲದಲ್ಲಿ ಇನ್ನೂ ಹಸುಳೆ ನಾನು..

ಇಷ್ಟೊಂದಿವೆಯಲ್ಲಾ ಯಾವುದು ಕೊಳ್ಳಲಿ ?

ಚಿತ್ರ ಮತ್ತು ಸಾಹಿತ್ಯ ಲೋಕದ ದೊರೆಗಳು

ಮಕ್ಕಳುಂ ನಾನುಂ....

ಅಪೂರ್ವ ಅಥಿತಿ - ಜೋಗಿಯವರ ತಾಯಿ ಸೊಸೆ ಜ್ಯೋತಿಯವರ ಜತೆಯಲ್ಲಿ

ಕುಂಟಿನಿಯವರ ತೆಕ್ಕೆಯೊಳಗೆ

ಉಭಯ ಕುಶಲೋಪರಿ ಸಾಂಪ್ರತ

December 28, 2009 Posted by | ಪುಸ್ತಕ ಬಿಡುಗಡೆ | | 16 Comments

ಮಗು ಹುಟ್ಟುವ ಮೊದಲು ಅಮ್ಮ ಹುಟ್ಟುತ್ತಾಳಂತೆ !!!!

ಮಗು

ಮನದ ಮಂದಾರವೇ,
ನಿನ್ನ ಬರುವಿಕೆಯಿಂದ ಸಂಭ್ರಮ, ಪುಳಕ, ಜಗತ್ತನ್ನೇ ಗೆದ್ದಂಥ ಹೆಮ್ಮೆ, ಖುಷಿ, ಜತೆಗೊಂದು ಹಿಡಿ ಆತಂಕ ಎಲ್ಲ ಕೊಡಮಾಡಿದ ನಿಂಜತೆ ತುಂಬಾ ಮಾತಾಡಬೇಕು ಅನಿಸಿತು ನೋಡು ಕಂದಾ… ಮನದಲ್ಲಿ ಮಲ್ಲಿಗೆ ಅರಳಿದೆ. ಮನೆ ತುಂಬ ಅದರ ಘಮ. ತಿಂಗಳುಗಳ ನಂತರ ಬರುವ ನಿನಗೆ ಇವತ್ತೇ ಕಾಲ್ಗೆಜ್ಜೆ ತಂದಿಟ್ಟೆ. ನೀನು ಝಲ್ಲೆನಿಸಿಕೊಂಡು ಅಂಬೆಗಾಲಿಕ್ಕುವ ಚಿತ್ರ ನನ್ನೆದುರು. ನೀನು ನಮ್ಮ ಬಹುದಿನಗಳ ನಿರೀಕ್ಷೆ ಮಗೂ. ಅದನ್ನು ಪೂರೈಸಲು ಇಷ್ಟು ದಿನಗಳು ಬೇಕಾಯಿತಾ ನಿನಗೆ…
ಪುಟ್ಟೂ ನಿಜ ಹೇಳಲಾ ? ನಿನ್ನನ್ನು ಹೇಗೆ ಬರಮಾಡಿಕೊಳ್ಳುವುದೋ ಗೊತ್ತಾಗ್ತಾ ಇಲ್ಲ. ಕಾರ್ಗತ್ತಲಲ್ಲಿ ಬೆಳ್ಳಿ ಮಿಂಚೊಂದು ಹೊಳೆದರೆ ಥಟ್ಟನೆ ಕಣ್ಣಿಗೆ ಏನೂ ಕಾಣಿಸುವುದಿಲ್ಲ ನೋಡು ಅಂಥಾ ಅನುಭವ. ಎಲ್ಲ ಅಯೋಮಯ. ಅದರ ನಡುವಲ್ಲೂ ಎಷ್ಟೊಂದು ಕನಸುಗಳು ಚಿಗುರಿವೆ ಗೊತ್ತಾ ? ನೀನು ಬಂದ ಕ್ಷಣದಿಂದ ನಮ್ಮ ಮನೆ ತುಂಬುವ ಸಡಗರ ಇಲ್ಲೇ ಠಿಕಾಣಿ ಹೂಡುತ್ತದೆ. ಆಮೇಲೆ ಬೇಸರವೆಂಬುದು ಇರೋದೇ ಇಲ್ಲ. ಬೇಸರದ ಬೇಸಿಗೆಗೆ ಬಾಯಾರಿ ಹೋದಾಗ ತುಂಬಿ ಬಂದ ಅಮೃತ ವಾಹಿನಿ ನೀನು. ಸ್ನೇಹ ಸೆಲೆ; ಪ್ರೇಮ ನೆಲೆ ನೀನು. ಮನೆ ತುಂಬ ಅಚ್ಚಾಗುವ ನಿನ್ನ ಪುಟ್ಟ ಪಾದಗಳ ಗುರುತು ಅಡಿಗಡಿಗೆ ಭರವಸೆಯ ಐಸಿರಿ; ಬದುಕಿಡೀ ಪಸರಿಸುವ ನಿನ್ನುಸಿರ ಸೌಗಂಧ ಹಬ್ಬಿದಂತೆ ಶ್ರೀ ಗಂಧದ ವಲ್ಲರಿ. ಅರ್ಜಂಟ್ ಅನ್ನೋ ನಾವು ಹಾರಾಡುವ ಜೆಟ್ ವೇಗದಲ್ಲಿ ಸಾಗುತ್ತಿದ್ದ ಧಾವಂತದ ದಿನಗಳಲ್ಲಿ ಮೆಲ್ಲನೆ ಅಡಿಯಿಟ್ಟ ನೀನು ಬದುಕಿನ ಮೆಗಾ ಧಾರಾವಾಹಿಯಲ್ಲಿ ಸವಿಯಾದೊಂದು ಇಮೋಷನಲ್ ಬ್ರೇಕ್ ! ಮರೀ, ನೀನು ಹೆಣ್ಣೇ ಆಗಿರುತ್ತೀ ಎಂಬ ದೊಡ್ಡ ನಂಬಿಕೆಯಿಂದ ನಿಂಗೆ “ಪ್ರಣತಿ” ಅಂತ ಹೆಸರಿಟ್ಟಿದೀನಿ; ಒಂದು ವೇಳೆ ಅಲ್ಲದೇ ಹೋದರೆ “ಪ್ರಣೀತ್”.. ಹೆಸರು ಚಂದ ಇದೆ ಅಲ್ವಾ ? ನಿಂಗಿಷ್ಟ ಆಗ್ಲಿಲ್ಲ ಅನ್ಸಿದ್ರೆ ಹೇಳು ನೂರಾರು ಹೆಸರುಗಳ ಪಟ್ಟಿನೇ ಇದೆ.

ಈಗಿನ್ನೂ ಕುಡಿಯೊಡೆದಿದ್ದರೂ ಅದೆಷ್ಟು ಪರಿಯಲ್ಲಿ ನಿನ್ನ ಇರುವಿಕೆಯನ್ನು ತೋರಿಸುತ್ತಿದ್ದೀ ಬಂಗಾರ… ಮಳೆಬಿಲ್ಲು, ನಕ್ಷತ್ರ, ನರ್ಸರಿ ಮಕ್ಕಳ ಹಾಡು, ಆಗಸದಲ್ಲಿ ಚಿತ್ತಾರ ಬರೆವ ಮೋಡ, ಮಳೆ ಹನಿಯ ತುಂತುರು, ಮನೆಯೆದುರಿನ ಪಾಕರ್ಿಗೆ ವಾಕಿಂಗ್ ಬರುವ ಅಜ್ಜ ಅಜ್ಜಿ, ಅಷ್ಟೆಲ್ಲ ಗೌಜು ಗದ್ದಲದ ನಡುವೆಯೂ ಸ್ಯಾಂಕಿ ಕೆರೆಯಲ್ಲಿ ತನ್ನ ಪಾಡಿಗೆ ತಾನು ಈಜಾಡುವ ಬಾತುಕೋಳಿಯ ತನ್ಮಯತೆ ಎಲ್ಲದರಲ್ಲೂ ಹೊಸತನ ದಕ್ಕಿದ್ದು ನಿನ್ನಿಂದ ಕಂದಾ. ಇಂಥದ್ದೊಂದು ಅದ್ಭುತ ಮಾಯಾಲೋಕದ ಸೃಷ್ಟಿಯ ಹಿಂದಿನ ಶಿಲ್ಪಿ ನೀನು. ಯಾವತ್ತೂ ಇಷ್ಟವಾಗದಿದ್ದ ಕಾಟನ್ ಕ್ಯಾಂಡಿ ಈಗ ಬೇಕು ಅನ್ನಿಸ್ತಾ ಇದೆ. ಗೊಂಬೆಗಳೆಂದರೆ ಮಾರು ದೂರ ಸರಿಯುತ್ತಿದ್ದೆ. ಈಗ ಬಂದರೆ ಇಡೀ ಮನೆಯೇ ಬೊಂಬೆಮನೆ ! ನನ್ನೊಳಗೇ ಇದ್ದು ನನ್ನನ್ನು ಕುಣಿಸುತ್ತಿರುವ ಮಾಯಾವಿ ಗೊಂಬೆಯೇ ಯಾವಾಗ ಬರುತ್ತೀ ಮಡಿಲಿಗೆ ?

ಇವತ್ತು ಸಿಕ್ಕಿದ ಡಾಕ್ಟ್ರು ಒಂದಷ್ಟು ಏನೇನೋ ಹೇಳಿದ್ರು. ಮೈ ಮನಗಳೆಲ್ಲ ಬದಲಾಗುವ ಬದುಕಿನೊಂದು ವಿಶೇಷ ಕಾಲಘಟ್ಟ ಇದು. ಪ್ರಾಜೆಸ್ಟಿರಾನ್ ಮತ್ತು ಈಸ್ಟ್ರೋಜೆನ್ ಎಂಬೆರಡು ಹಾಮರ್ೋನುಗಳಿದಾವೆ; ಅವುಗಳಲ್ಲಿ ವ್ಯತ್ಯಯಗಳಾಗುತ್ವೆ. ದೈಹಿಕ ಬದಲಾವಣೆಗಳಿಂದ ಹಿಂಡಿದಂತಾದ ಎಲ್ಲಾ ಮಸಲ್ಸ್ಗಳನ್ನ ಈ ಹಾಮರ್ೋನು ರಿಲ್ಯಾಕ್ಸ್ ಮಾಡುತ್ತೆ. ಈ ಪ್ರಕ್ರಿಯೆ ನಿರಂತರ ನಡೆಯುತ್ತಿರೋ ಕಾರಣ ವಾಂತಿ, ಹೊಟ್ಟೆ ತೊಳಸುವಿಕೆಗಳೆಲ್ಲಾ ಬರುತ್ತೆ. ಇನ್ನು ಮುಖದಲ್ಲಿ ಕಪ್ಪು ಉಂಗುರಗಳು ಬಂದರೂ ಬರಬಹುದು ನೋಡಿ; ಅವೆಲ್ಲವೂ ದೇಹದಲ್ಲಿನ ಬೇರೆ ಬೇರೆ ಹಾಮರ್ೋನುಗಳ ಕಿತಾಪತಿ. ಮಗುವಾದ ಮೇಲೆ ಅವೆಲ್ಲ ಸರಿಹೋಗತ್ತೆ. ಹೊಟ್ಟೆಯ ಸ್ನಾಯುಗಳ ಗಾತ್ರ ಹಿರಿದಾಗೋದರಿಂದ ಸ್ಟ್ರೆಚ್ ಮಾಕರ್್ ಅಂತೀವಲ್ಲ ಅದೂ ಬರುತ್ತೆ. ಸಾಮಾನ್ಯವಾಗಿ ದೇಹದ ‘ಗ್ರಾವಿಟಿ ಸೆಂಟರ್’ ಅಂತ ಕರೆಯಲ್ಪಡೋದು ಬೆನ್ನು ಮೂಳೆ. ಆದರೆ ಹೊಟ್ಟೆ ಎನ್ಲಾಜರ್್ ಆಗೋ ಕಾರಣ ಈ ಸೆಂಟರ್ ಆಫ್ ಗ್ರಾವಿಟಿನಲ್ಲಿ ಸಣ್ಣ ಬದಲಾವಣೆ ಆಗುತ್ತೆ. ಇದರಿಂದಾಗಿ ಬೆನ್ನು ನೋವು ಕೂಡ ಬರೋ ಸಾಧ್ಯತೆಗಳು ಇರ್ತಾವೆ. ಸ್ನಾಯುಗಳ ಗಾತ್ರ ಹಿಗ್ಗುವ ಕಾರಣ ಒಮ್ಮೊಮ್ಮೆ ರಕ್ತನಾಳಗಳಲ್ಲಿ ದೈನಂದಿನ ರಕ್ತ ಸಂಚಾರದ ರೀತಿಗೆ ಅಲ್ಪ ಮಟ್ಟದ ತೊಂದರೆಗಳು ಬಂದ್ರೆ ಕಾಲಲ್ಲಿ ನೀರು ಸೇರುವುದೂ ಇದೆ ಅಂತೆಲ್ಲ ಉದ್ದಕ್ಕೊಂದು ಪಟ್ಟಿನೇ ಕೊಟ್ರು. ಜತೆಗೇ ಇವೆಲ್ಲ ಗರ್ಭಧಾರಣೆಯ ಸಹಜವಾದ ಪ್ರಕ್ರಿಯೆಗಳು. ಇವೆಲ್ಲವೂ ಆಗೇ ಆಗುತ್ತೆ ಅಂತೇನಿಲ್ಲ; ಅವರವರ ದೇಹ ಪ್ರಕೃತಿಯ ಮೇಲೇ ಅವಲಂಬಿಸಿದೆ ಅನ್ನೋದೊಂದು ಮಾತು ಹೇಳಿದ್ರು ನೋಡು; ದೊಡ್ಡದೊಂದು ಸಮಾಧಾನ.

ಈಗ ನೀನು ಬರ್ತಿದ್ದೀ ಅನ್ನೋ ಒಂದೇ ಕಾರಣಕ್ಕೆ ಮನೇಲಿ ನಂಗೆ ರಾಯಲ್ ಟ್ರೀಟ್ಮೆಂಟ್. ಎಂದೂ ಇಲ್ಲದ ಉಪಚಾರ. ನಿಂತ್ರೆ ಕೂತ್ರೆ ನೋಡ್ಕೋತಾನೇ ಇರ್ತಾರೆ ಎಲ್ಲರೂ. ಕಬ್ಬಿಣದಂಶ, ಫೋಲಿಕ್ ಆಸಿಡ್ ಇರೋ ಸೊಪ್ಪು, ತರಕಾರಿ, ಬೆಣ್ಣೆ, ಹಣ್ಣುಗಳನ್ನೇ ಹೆಚ್ಚು ತಿನ್ನಬೇಕು, ತೀರ ಉಷ್ಣ ಪದಾರ್ಥಗಳ ಕಡೆ ಕಡೆಗಣ್ಣಿಂದಲೂ ನೋಡಕೂಡದು. ಎಲ್ಲೇ ಕೂತರೂ ನೇರ ಭಂಗಿ, ಭಾರ ಎತ್ತಬಾದರ್ು. ಸದಾ ಜಿಗಿಯುತ್ತಲೇ ಇರುತ್ತಿದ್ದ ನಂಗೀಗ ಆಟ, ಓಟ ಎರಡೂ ನಿಷಿದ್ಧ. ತಿನ್ನೋದು ಅಂದ್ರೆ ಬಾರೀ ಕಷ್ಟ ಪಡುತ್ತಿದ್ದ ನಾನು ಎರಡು ಗಂಟೆಗೊಮ್ಮೆ ಕ್ವಾಲಿಟಿ ಆಹಾರವನ್ನ ಕ್ವಾಂಟಿಟಿ ಲೆಕ್ಕ ಹಾಕಿ ತಿನ್ನಬೇಕೆಂಬ ಅಪ್ಪಣೆ. ಜೀವಮಾನದಲ್ಲಿ ಮೊತ್ತ ಮೊದಲ ಬಾರಿಗೆಂಬಂತೆ ಶಿಸ್ತು ಪಾಲಿಸ್ತಾ ಇದೀನಿ ಅಂದ್ರೆ ಅದು ನಿನ್ನ ಕಾರಣಕ್ಕೆ. ಅಂದ ಹಾಗೆ ಇನ್ನೊಂದ್ವಿಷ್ಯ ಹೇಳೋದು ಮರ್ತೆ ನೋಡು. ಐದನೇ ತಿಂಗಳಲ್ಲೊಮ್ಮೆ, ಅದಾಗಿ ಒಂದು ತಿಂಗಳು ಕಳೆದ ಮೇಲೊಮ್ಮೆ ಅದೆಂಥದೋ ಟಿ.ಟಿ ಇಂಜೆಕ್ಷನ್ ತೊಗೋಳೋದು ಕಡ್ಡಾಯ ಅಂತೆ. ಅದೇ ಭಯ ನಂಗೆ. ಇಂಜೆಕ್ಷನ್ ಅಂದ್ರೆ ಮೈಲಿ ದೂರ ಹೋಗೋಳು ನಾನು. ಆದ್ರೆ ನಿನಗಾಗಿ ಅಂತಂದ್ಮೇಲೆ ಎಲ್ಲಾದಕ್ಕೂ ಸೈ ಸೈ. ಇವೆಲ್ಲಾ ಮಾಡಿದ್ಕೆ ನೀನು ನಂಗೆ ದಿನಾ ನೂರು ಪಪ್ಪಿ ಕೊಡ್ಬೇಕು ಮತ್ತೆ… ದಿನದ ಮೊದಲ ಮುತ್ತು ನಂಗೇ ಸಲ್ಲಬೇಕು ಸರೀನಾ.. ಇಲ್ಲಾ ಅಂದ್ರೆ ಟೂ… ಟೂ… ಟೂ…

ನಿನ್ನೆ ಮನೆಗೆ ಬಂದ ಗೆಳತಿ ಸೌಮನಸ್ಯಂ ಗರ್ಭಧಾರಣಂ ಅಂತಂದ್ಲು. ಮರ್ಕಟದಂತೆ ಬದಲಾಗುವ ಹುಚ್ಚು ಹೊಳೆಯಂಥ ಮನಸನ್ನು ಯಾವಾಗ್ಲೂ ಖುಷಿಯಾಗಿ ಶಾಂತವಾಗಿಡೋದಿಕ್ಕೆ ಏನೇನು ಬೇಕೋ ಎಲ್ಲಾ ಮಾಡ್ತಿದೀನಿ ಬಂಗಾರ. ನೀನು ಭೂಮಿಗೆ ಬರೋ ವರೆಗೂ ಯಾವತ್ತೂ ನಿಂಗೆ ನೋವಾಗಬಾರದು. ಕೋಪ ತಾಪಗಳು ನಿನಗೆ ಅಭ್ಯಾಸವಾಗಬಾದರ್ು. ನಿನ್ನ ಬದುಕು ಭವಿಷ್ಯಗಳ ಬಗ್ಗೆ ಸಾವಿರ ಕನಸಿದೆ ನಂಗೆ. ನೀನು ನಮ್ಮೊಡನಿದ್ದೂ ನಮ್ಮಂತಾಗದೆ ಬೆಳೆಯಬೇಕು. IQ & EQಗಳು ಹದವಾಗಿ ಮಿಳಿತವಾದ ಧೀಶಕ್ತಿ ನೀನಾಗಬೇಕು. ಮನುಷ್ಯನ ವಿಕೃತಿಯನ್ನು ಮೀರಿ ಭೂರಮೆ ಪ್ರಕೃತಿಯಲ್ಲಿನ ವಿಸ್ಮಯಗಳಿಗೆ ತೆರೆದುಕೊಳ್ಳುವಂತೆ ನೀನು ರೂಪುಗೊಳ್ಳಬೇಕು… ಭೂ ಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗಿ “ಹಿಂದೂಸ್ಥಾನವು ಎಂದೂ ಮರೆಯದ….” ಮತ್ತು ಮುಂದೊಂದು ದಿನ ಜಗತ್ತೇ ಮೆಚ್ಚುವ ವಿಜ್ಞಾನಿ ನೀನಾಗಬೇಕು… ಡಾಕ್ಟರು ಇಂಜಿನಿಯರು ಆಗಬೇಕೆಂಬ ಹಂಬಲವಿಲ್ಲ. ಮನೆಗೆ ಮಲ್ಲಿಗೆಯಾಗು, ದೀನ ದುರ್ಬಲರಿಗೆ ಬೆಲ್ಲ ಸಕ್ಕರೆಯಾಗು ಸಾಕು…. ನಾವೇರಲಾರದೆಲ್ಲ ಶಿಖರಗಳನ್ನು ನೀನೇರಬೇಕು. ಅದಕ್ಕಾಗೇ ಕ್ಷಣ ಬಿಡುವು ಸಿಕ್ಕರೂ ಅಂಥದ್ದೇ ಪುಸ್ತಕಗಳನ್ನ ಓದ್ತಿದೀನಿ. ಎಲ್ಲಾ ಹೊತ್ತಿನಲ್ಲೂ ಸುಮಧುರ ಸಂಗೀತ. ನೋಡೋದಿದ್ದರೆ ಕಾಮಿಡಿ ಫಿಲ್ಮ್ ಮಾತ್ರ. ಸುತ್ತೆಲ್ಲರೂ ಈ ಬದಲಾವಣೆಯನ್ನ ಪಿಳಿಪಿಳಿ ಕಣ್ ಬಿಟ್ಕೊಂಡು ಸುಮ್ಮನೇ ನೋಡ್ತಿದಾರೆ. ನನ್ನಂಥ Tomboy ಹೀಗಾಗಿದ್ದು ಅಚ್ಚರಿ ಅವರಿಗೆಲ್ಲ.

ಯಾವ ಭರವಸೆಯೂ ಇಲ್ಲದೇ ಬದುಕು ಬರೀ ಯಾತನೆಯ ಗೂಡಾಗಿದ್ದ ದಿನಗಳಲ್ಲಿ ಕೂಡ ನಮ್ಮನ್ನು ಜೀವಂತವಾಗಿರಿಸಿದ್ದು ಪ್ರೀತಿ..ಪ್ರೀತಿ ಮತ್ತು ಪ್ರೀತಿ. ಅದೊಂದು ನಮ್ಮ ದಾಂಪತ್ಯದಲ್ಲಿ ಹೊಳೆಯಾಗಿ ಹರಿಯುತ್ತಿತ್ತು. ಅಂಥದ್ದೇ ಯಾವುದೋ ಒಂದು ಅಮೃತ ಘಳಿಗೆಯಲ್ಲಿ ಕುಡಿಯೊಡೆದ ನೀನು ಬದುಕನ್ನೂ ಅಷ್ಟೇ ಪ್ರೀತಿಸಬೇಕು. ಎಂದಿಗೂ ಬತ್ತದ ಜೀವನ್ಮುಖಿ ಕಾರಂಜಿಯಾಗಬೇಕು ಕಂದಾ.. ನಿನ್ನ ಪ್ರತಿ ಹೆಜ್ಜೆಗೂ ಅಪ್ಪ ಅಮ್ಮನ ಒಲವಿನ ಸಾಥ್ ಇದೆ, ಇರುತ್ತದೆ. ಸೋಲನ್ನು ಸೋಲಿಸುವ ದಿಟ್ಟತನ ಹುಟ್ಟಬೇಕು ನಿನ್ನಲ್ಲಿ. ನಿಂಗೊತ್ತಾ ಮಗೂ ನಿನ್ನ ಹುಟ್ಟೇ ನಿನ್ನ ಮೊದಲ ಗೆಲುವು. ಜತೆಗಿದ್ದ ಸಾವಿರಾರು ಜೀವ ಕಣಗಳನ್ನ ಹಿಂದಿಕ್ಕಿ ನೀನೇ ಫಲಿಸಿದ್ದೀ ನೋಡು ಅದು ನಿನ್ನ ವಿಜಯದ ದಾರಿಯಲ್ಲಿನ ಪ್ರಥಮ ಹೆಜ್ಜೆ. ಉಳಿದ ಹೆಜ್ಜೆಗಳಿಗೆ ಬದುಕಿಡೀ ಸಮಯವಿದೆ ಬಿಡು.

ಇವೆಲ್ಲ ಸಂಭ್ರಮದ ನಡುವೆಯೂ ಭಯ ಕಾಡುತ್ತದೆ. ಏನೋ ಒಂದು ಆತಂಕ, ತಳಮಳ ಎಲ್ಲ ನನ್ನನ್ನು ಸುತ್ತುಗಟ್ಟಿದ್ದಿದೆ. ಹೆರಿಗೆಯೆಂದರೆ ಮರುಹುಟ್ಟು ಅಂತಾರೆ. ಜೀವ ಒತ್ತೆಯಿಡಬೇಕು ಅಂತಾರೆ. ಹಾಗೇನಾದ್ರೂ ಆದ್ರೆ ? ನಾನಿಲ್ಲದೇ ನೀನು ಅಪ್ಪ ಇಬ್ಬರೇ ಇರೋಕಾಗತ್ತಾ ? ಅಷ್ಟಕ್ಕೂ ಆ ಪರಿಯ ವೇದನೆ ಸಹಿಸುವ ಶಕ್ತಿ ಇದೆಯಾ ನಂಗೆ ? ನನ್ನ ಒಳ್ಳೆ ಮುದ್ದು ನೀನು ನಂಗೆ ಹೆಚ್ಚು ನೋವು ಕೊಡಲ್ಲ ಅಲ್ವಾ ? ನೀ ಬಂದ ಮೇಲೆ ನಿನ್ನನ್ನು ಮುಚ್ಚಟೆಯಿಂದ ಸಾಕುವ ಬಗೆ ಹೇಗೆ ? ಕೆಲಸ ಮನೆ ಎರಡನ್ನೂ ನಿಭಾಯಿಸುವ ಧಾವಂತದಲ್ಲಿ ನಿನಗೆ ಅಮ್ಮ ಪೂತರ್ಿಯಾಗಿ ಸಿಗುವಂತೆ ಮರು ವ್ಯವಸ್ಥೆ ಮಾಡಿಕೋ ಬೇಕು. ಅದು ನನ್ನಿಂದಾಗುತ್ತಾ ? ನಿನ್ನಂಥ ಬೆಳಕಿನ ಪುಂಜವನ್ನು ಹೇಗೆ ಕಾಪಾಡಿಕೊಳ್ಳಲಿ ? ನಿನಗೆ ಏನೇನು ಕಲಿಸಬೇಕು ? ಹೇಗೆ ಕಲಿಸಬೇಕು ? ನನಗೆ ಅಮರಕೋಶ ಓದಿಸೋಕೆ ಅಜ್ಜಿ ಇದ್ರು. ನಿನಗೆ ಯಾರು ಓದಿಸ್ತಾರೆ ? ಮಹಾಭಾರತ, ರಾಮಾಯಣಗಳು ನಂಗೇ ಪೂತರ್ಿ ಗೊತ್ತಿಲ್ಲ. ಇನ್ನು ನಿನಗೆ ಹೇಗೆ ಹೇಳಲಿ ? ಅವನ್ನೆಲ್ಲ ನಿನಗೆ ಪ್ರೀತಿಯಿಂದ ಹೇಳೋಕೆ ಯಾರನ್ನು ಕರೆತರಲಿ ? ರಾಮ ಕೃಷ್ಣರ ಜತೆಗೇ ಸುಭಾಸ, ಭಗತರೂ, ಚೆನ್ನಮ್ಮ ಹೊನ್ನಮ್ಮರೂ ನಿನ್ನೆದೆಗೆ ಇಳಿಯಬೇಕು. ಇವಕ್ಕೆಲ್ಲ ಸಮಯ ಹೊಂದಿಸುವ ಬಗೆಯೇನು ? ನನ್ನ ಕಂದನ ಜತೆಗಿರಲು ನನಗೊಂದಷ್ಟು ಘಂಟೆಗಳನ್ನು ಹೆಚ್ಚು ಕೊಡು ಅಂತ ಬದುಕಿಗೊಂದು ಮನವಿ ಬರೆದು ಹಾಕಲಾ ? ಹೇಳು ಮಗೂ… ಇದೆಲ್ಲ ಕೇಳಿಸಿಕೊಂಡು ಒಳಗೊಳಗೇ ನಗುತ್ತಿದೀಯಾ ನನ್ನ ಕಳ್ಳ ಪುಟ್ಟೂ ? ಬೇಗ ಬಾ ನೀನು… ಇಲ್ಲೊಂದು ತಂಗಾಳಿ ಹರಡಲಿ. ಇನ್ನು ನನ್ನ ಕಾಡಬೇಡ ಪ್ಲೀಸ್… ಕಾದಿದೆ ಮನೆ, ಮನಸು, ಬದುಕು ನಿನಗಾಗಿ…

ಈ ಬಾರಿಯ ಕನ್ನಡ ಪ್ರಭದ ಸಖಿ (ಡಿಸೆಂಬರ್ 1-15)ರಲ್ಲಿ ಪ್ರಕಟವಾದ ಬರಹದ ಮೂಲ ಪ್ರತಿ.

December 11, 2009 Posted by | ಅಮ್ಮ, ಕನವರಿಕೆ | , , | 6 Comments

ತಪ್ಪೊಪ್ಪಿಗೆಯೊಂದಿದೆ…

ತಲೆಯೆತ್ತಿ ನೋಡಿದರೆ ಕಪ್ಪು ಆಕಾಶ… ಮಳೆಯನ್ನೂ ಸುರಿಸದೆ ಸುಮ್ಮನಾದ ಮೋಡ… ಮನಸಿನಲ್ಲಿ ಹೆಪ್ಪುಗಟ್ಟಿ ನಿಂತ ದುಖಃದಂತೆ. “ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿದಂತೆ…” ನಿಸಾರರ ಸಾಲುಗಳು ನೆಪಾದವು. ಮೊನ್ನೆ ಗೆಳೆಯ ಹೇಳುತ್ತಿದ್ದ; ನಿನ್ನೊಳಗೇನೋ ಇದೆ ಕಣೇ ಅದನ್ನು ಹೊರ ಹಾಕದ ಹೊರತು ನೀನು ನೀನಾಗುವುದಿಲ್ಲ ಹುಡುಗೀ. ಹೇಳು ಅದೇನು ನಿನ್ನ ಕಾಡುವ ನೋವು ಅಂತ… ಗೊತ್ತಿಲ್ಲ, ಒಮ್ಮೊಮ್ಮೆ ಹೀಗಾಗುತ್ತೆ. ಕಾರಣವೇ ಇಲ್ಲದೆ ಮನ ಮೌನ; ಹೊರಗೆ ಬರಲೊಲ್ಲೆ ಎಂಬಂತೆ ಘನೀಭವಿಸಿ ಒಳಗೆ ಕುಳಿತ ಕಂಬನಿ… ಒಮ್ಮೊಮ್ಮೆ ಚೀರಿ ಹೇಳಬೇಕೆನಿಸುತ್ತದೆ. ಆದರೆ ಬೆಳಕಿನಲ್ಲೇ ಬೆಳೆದ ಸಿದ್ದಾರ್ಥರಿಗದು ಅರ್ಥವಾಗುವುದಿಲ್ಲ. ಕೇಳಬೇಕೆನಿಸುವ ಮನಸೂ ಇಲ್ಲ. ಹಾಗಂತ ಮುನಿಸೇನಿಲ್ಲ. ಸಾಂತ್ವನ ಬೇಕಿನಿಸಿದ ಕ್ಷಣಗಳಲ್ಲಿ ಅನೇಕ ಬಾರಿ ಸಿಕ್ಕಿದ್ದು ಸರಿ ತಪ್ಪುಗಳ ವಿಮರ್ಶೆ. ದಿನವೂ ಬದಲಾಗುತ್ತಿರುವ ಮನುಷ್ಯ ಜಾತಿಯ ಜತೆ ಸಂಬಂಧ ಬೆಸೆದುಕೊಂಡ ನಂತರ ಅರ್ಥ ಮಾಡಿಕೊಳ್ಳುವಿಕೆ ಎಂಬುದು ನನಗರ್ಥವಾಗದ ಮತ್ತು ಬೇಡವಾದ ವಿಚಾರ; ನನ್ನದೇನಿದ್ದರೂ ಒಪ್ಪಿ ಅಪ್ಪುವ ಪ್ರಕ್ರಿಯೆಯಷ್ಟೇ. ಯಾವುದೇ ಉದ್ದೇಶವಿಲ್ಲದೆ ನನ್ನವರೆಂಬ ಸಲಿಗೆಯಿಂದ ಫಿಲ್ಟರ್ ಹಾಕದೆ ಸಹಜವಾಗಿ ಆಡಿದ ಯಾವುದೋ ಮಾತಿಗೆ ನೂರು ವ್ಯಾಖ್ಯಾನ ಟೀಕೆ, ಟಿಪ್ಪಣಿಗಳು, ಮುನಿಸು, ಹಠಗಳ ಪ್ರತಿಕ್ರಿಯೆ. ಎಲ್ಲ ಅವರವರ ಮೂಗಿನ ನೇರಕ್ಕೆ. ಯಾಕೆ ಹಾಗಂದೆ ಏನಾಯ್ತು ನಿನಗೆ ಕೇಳುವ ವ್ಯವಧಾನಕ್ಕಿಂತ ಪಾಠ ಕಲಿಸುವ ತರಾತುರಿ ಹೆಚ್ಚಿನದು. ಆ ಸಂದರ್ಭದಲ್ಲಿ ಹಾಗಲ್ಲ ಹೀಗೆ ಅಂತ ನನ್ನನ್ನೇ ವಿವರಿಸಿಕೊಳ್ಳುವುದು ಸಾಧ್ಯವಾಗದ ಮತ್ತು ಬೇಡವಾದ ವಿಚಾರ. ಬರೆಯ ಹೊರಡುತ್ತೇನೆ ಎಲ್ಲವನ್ನು ಪೂರ್ತಿಗೊಳಿಸಲಾಗದು. ಹಾಗೇ ಅಪೂರ್ಣವಾಗಿ ಉಳಿದವುಗಳು ಹಲವಾರು. ಮತ್ತೆ ಮನ ಮೊಗ್ಗು. ಎಲ್ಲಿ ಹೋದಳು ಶಮಾ ಅಂತ ತಮ್ಮ ಮೆಸೇಜು ಕಳಿಸಿದ್ದಾನೆ… ತಿಂಗಳಿಗೂ ಹೆಚ್ಚಾಯಿತು ಬ್ಲಾಗಿನಂಗಳಕ್ಕೆ ನೀವು ಬರದೆ ಅಂದಿದೆ ಮಾಲತಿಯ ಎಸ್.ಎಂ.ಎಸ್. ನಾ ಹೀಗಾಡ್ತೀನಿ ಅನ್ನೋ ಒಂದೇ ಕಾರಣಕ್ಕೆ ಜೀವದ ಗೆಳೆಯ ಬ್ಲಾಗಿಗೆ ಬರೋದೇ ಬಿಟ್ಟಿದ್ದಾನೆ. ಇನ್ ಬಾಕ್ಸ್ ತೆರೆದು ನೋಡಿದರೆ ಅಲ್ಲೂ ಇದೇ ಪ್ರಶ್ನೆ. ಕೆಲವರಿಗೆ ಬೇಸರ; ಕೆಲವರಿಗೆ ಏನಾಯಿತೆಂಬ ಕಾತರ; ಕೆಲವರಿಗೆ ಕೋಪ. ನನಗರ್ಥವಾಗುತ್ತೆ ಎಲ್ಲವೂ; ಎಲ್ಲರ ಕಾಳಜಿಯೂ… ಆದರೆ ಉತ್ತರಿಸಲಾಗುತ್ತಿಲ್ಲ. ಏನೂ ಬೇಡದ ಭಾವ; ಊಟ ತಿಂಡಿಯೂ, ನಾನು ತುಂಬ ಇಷ್ಟಪಡುವ ರುಮಾಲಿ ರೋಟಿಯೂ ಸೇರುತ್ತಿಲ್ಲ. ಕಾರಣ ಕೇಳಿದರೆ ಗೊತ್ತಿಲ್ಲ ಒಂದೇ ಶಬ್ದ. ಒಟ್ಟಿನಲ್ಲಿ ಮೋಡ ಕವಿದ ವಾತಾವರಣ… ಒಮ್ಮೊಮ್ಮೆ ಹೀಗಾಗುವುದುಂಟು ಕ್ರಮೇಣ ಸರಿ ಹೋಗುತ್ತದೆಯೆಂದ ಗೆಳೆಯನಂಥ ತಮ್ಮ. ನಿಜವಿರಬಹುದು ಆತ ಹೇಳಿದ್ದು… ಅವನಿಗೆ ಇಂಥ ಅನುಭವಗಳು ಹಲವಾರು… (ಲೆಕ್ಕವಿಲ್ಲದಷ್ಟು ಬಾರಿ ನಾನೂ ಆತನನ್ನು ನೋಯಿಸಿ ಬೆನ್ನು ಹಾಕಿ ನಡೆದದ್ದುಂಟಲ್ಲ)

ಈ ಮೌನಕ್ಕೆ ಮುನಿಯಬೇಡಿ; ಕ್ಷಮೆಯಿರಲಿ ಸ್ನೇಹದಲಿ. ನೋಯಿಸುವ ಉದ್ದೇಶ ನಂಗಿಲ್ಲ. Am Sorry… ಗೆಳೆಯರು ನೀವು. ನೀವೆಲ್ಲರೂ ಬೇಕು ನಂಗೆ. ಎಂದಿನಂತೆ ಮತ್ತೆ ಬನ್ನಿ….
%%%%%%%%%%%%%%%%

December 11, 2009 Posted by | ಕನವರಿಕೆ, ನಾನೇನೂ ಬರೆಯಲಿಲ್ಲ ಯಾಕೆ ಗೊತ್ತಾ, ನೋವು | , | Leave a Comment

ಆಸೆ

ಅವು ಪಿಯುಸಿಯ ದಿನಗಳು. ರೂಲ್ಸು ರೆಗ್ಯುಲೇಷನ್ ತುಂಬಿದ್ದ ಹೈಸ್ಕೂಲು ಮುಗಿಯಿತೆಂದರೆ ಅದೇನೋ ಸಂಭ್ರಮ. ಸ್ವತಂತ್ರವಾಗುವ ಭಾವ. ಅಡಾಲಸೆನ್ಸ್ ದಿನಗಳೇ ಹಾಗೆ.. ಮನದಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ.. ಆಸೆ, ಗುರಿ, ಕನಸು ಯಾವುದೂ ನನಗಾವಾಗ ಸ್ಪಷ್ಟವಿರಲಿಲ್ಲ. ಅಸಲಿಗೆ ಅವುಗಳ ನಡುವಿನ ವ್ಯತ್ಯಾಸ ಕೂಡ ಗೊತ್ತಿರಲಿಲ್ಲ. ಅಂಥ ದಿನಗಳಲ್ಲಿ ಕವನಗಳನ್ನು ಬರೆಯದವರು ಬಹುಶಃ ಯಾರೂ ಇರಲಿಕ್ಕಿಲ್ಲ. ನಾನೂ ಮನ ಬಂದಂತೆ ಗೀಚಿದ್ದು ಆವಾಗಲೇ. ನಮ್ಮ ಎಸ್.ಡಿ.ಎಂ ಕಾಲೇಜು ಪಠ್ಯೇತರ ಚಟುವಟಿಕೆಗಳಿಗೆಲ್ಲ ತುಂಬ ಪ್ರೋತ್ಸಾಹ ಕೊಡುತ್ತಿದ್ದ ಕಾರಣ ನಮ್ಮ ಬರಹಗಳು ಕಾಲೇಜಿನ ಪ್ರಾಯೋಗಿಕ ಪತ್ರಿಕೆಗಳಲ್ಲಿ, “ಚಿಗುರು” ಮುಂತಾದವುಗಳಲ್ಲಿ ಪ್ರಕಟವಾಗುತ್ತಿತ್ತು. ನನಗಂತೂ ಹಿಮಾಲಯ ಗೆದ್ದಂಥ ಖುಷಿ ಕೊಡುವ ಸಂಗತಿಯದು. ಪಿಯುಸಿಯಲ್ಲಿ ನನ್ನ ಬೆಂಚಿನಲ್ಲಿ ಕೂಡುತ್ತಿದ್ದ ಒಂದಿಬ್ಬರು “ತುಳು ಭಾಷೇಲಿ ಬರಿ ನೋಡೋಣ” ಅಂತ ಚಾಲೆಂಜ್ ಥರಾ (?) ಹೇಳಿದ್ದರ ಫಲ ಈ ಕವನ. ತುಳು ನನ್ನ ಮಾತೃ ಭಾಷೆ ಅಲ್ಲದಿದ್ದರೂ ಅಷ್ಟೇ ಅತ್ಮೀಯವಾದ ಹೃದಯದ ಭಾಷೆ; ತುಳು ಮಾತು ಕೇಳಿದರೆ ಸಾಕು ಕಿವಿ ನೆಟ್ಟಗಾಗುತ್ತದೆ. ನಮ್ಮೂರ ಮಂದಿಗೆ ಯುನೀಕ್ ಆದ ಐಡೆಂಟಿಟಿ ಕೊಡುವುದು ಇದೇ ಭಾಷೆ. ಅಂದು ಬರೆದ (ಬಹುಶಃ 1994ರಲ್ಲಿರಬೇಕು) ಈ ಪುಟ್ಟ ಕವನದಂಥದ್ದು (?) ಇಲ್ಲಿದೆ ಓದಿಕೊಳ್ಳಿ.

ಆಸೆ

ಪೊರ್ಲುದ ಪ್ರಕೃತಿಡ್ ತೆಲಿಪುನ
ಪಜಿ ಇರೆತ ಮಿತ್ತ್…
ಕಮ್ಮೆನ ಕೊರ್ದು ನಲಿಪುನ
ಪೂತ ರಾಸಿದ ಮಿತ್ತ್…
ಪುಣ್ಣಮೆದ ಚಂದ್ರನ ಮಿತ್ತ್…
ಬಾಲೆ ಕಂಜಿದ ಬಿಮ್ಮದ ಮಿತ್ತ್…
ಸಮುದ್ರದ ನೀರ್ದ ಮಿತ್ತ್…
ನೀಲಿ ಬಾನದ ಮಿತ್ತ್…
ಮಾಲೆ ಕಟ್ಟಿನ ಮೋಡದ ಮಿತ್ತ್…
ಎನ್ನ ಮನಸ್ದ ಗೋಡೆದ ಮಿತ್ತ್…
ಕಣ್ಣ ಬೊಂಬೆದ ಮಿತ್ತ್…
ಮನಸ್ ದಿಂಜಿದ್ ಬರೆಪುನ ಆಸೆ
ನಿನ್ನ ಮೋಕೆದ ಪುದರ್ನ್ …

%%%%%%%%%%

ತುಳು ಬರದವರು ಜಗಳಕ್ಕೆ ಬೀಳುವುದು ಬೇಡವೆಂಬ ಭಯಕ್ಕೆ ಅದರ ಕನ್ನಡ ರೂಪವೂ ಇದೆ ನೋಡಿ.
(ಇದು ಅಕ್ಷರಕ್ಷರ ಅನುವಾದವಲ್ಲ; ಭಾವಾನುವಾದ)

ಆಸೆ

ಸೃಷ್ಟಿಯ ಮಡಿಲಲ್ಲರಳಿದ
ಚಿಗುರೆಲೆಗಳ ಮೇಲೆ…
ಘಮಘಮಿಸಿ ನಗುವ
ಸುಮ ರಾಶಿಯ ಮೇಲೆ…
ಹುಣ್ಣಿಮೆ ಚಂದ್ರನ ಮೇಲೆ…
ಎಳೆಗರುವಿನ ತುಟಿಗಳ ಮೇಲೆ…
ಸಪ್ತ ಸಾಗರದ ನೀಲ ನೀರಿನ ಮೇಲೆ…
ಬಾನ ವಿಸ್ತಾರದ ಮೇಲೆ…
ಮೇಘ ಮಾಲೆಗಳ ಮೇಲೆ…
ಮಿನುಗುವ ಚಿಕ್ಕಿಗಳಿಂದಲೇ ಬರೆವಾಸೆ
ನಿನ್ನ ಮೋಹಕ ಹೆಸರನು…

%%%%%%%%%

October 1, 2009 Posted by | ಎಸ್.ಡಿ.ಎಂ ಕಾಲೇಜು, ಕವನ | , | 18 Comments

ಧನ್ಯವಾದ ಸಮರ್ಪಣೆ

ನಮ್ ನಮಸ್ಕಾರ ನಿಮಗ ...

ನಮ್ ನಮಸ್ಕಾರ ನಿಮಗ ...

ಪುಟ್ಟದಾಗಿ ಬ್ಲಾಗಿನಲ್ಲಿ ಪ್ರಕಟಿಸಿ ವಿಷಯ ತಿಳಿಸಿದ್ದಷ್ಟೇ ನಾವು. ವಿಶ್ವಾಸವಿಟ್ಟು ಕಾರ್ಯಕ್ರಮ ನೋಡಿದ್ದೀರಿ. ಅಭಿಪ್ರಾಯ ತಿಳಿಸಿದ್ದೀರಿ. ಆಯುರ್ವೇದಕ್ಕೆ ನೀವು ನೀಡಿದ ಪ್ರೋತ್ಸಾಹಕ್ಕೆ ಕೃತಜ್ಞರು ನಾವು. ಹೀಗೆ ಜತೆಗಿರೋಣ. ನಮ್ಮ ದೇಶದ ವೈದ್ಯ ಪದ್ಧತಿ ಜಗತ್ತಿನ ಮಾದರಿ ಪದ್ಧತಿಯಾಗಲಿ ಎಂಬಾಸೆ ನನ್ನದು. ಈ ಆಶಯಕ್ಕೆ ಕೈಗೂಡಿಸಿದ ನಿಮಗೆಲ್ಲ ಮತ್ತೊಮ್ಮೆ ವಂದನೆ.

ನಲ್ಮೆಯಿಂದ,
ಸುಕೃತಂ ಆಯುರ್ವೇದ

September 17, 2009 Posted by | ಸುಕೃತಂ ಆಯುರ್ವೇದ | | Leave a Comment

ಬದಲಾವಣೆಯೊಂದಿದೆ ಗಮನಿಸಿ

ಚಿಕ್ಕದೊಂದು ಕರೆಕ್ಷನ್ :

ಟಿವಿ 9 ನಲ್ಲಿ ಇವತ್ತಿಗಿದ್ದ ಕಾರ್ಯಕ್ರಮದ ಪ್ರಸಾರ ನಾಳೆಗೆ ಪೋಸ್ಟ್ ಪೋನ್ ಆಗಿದೆ. ತೊಂದರೆಗೆ ಕ್ಷಮೆಯಿರಲಿ. ಸಮಯದಲ್ಲಿ ಏನೂ ಬದಲಾವಣೆ ಇಲ್ಲ. ಟಿವಿ 9 ನಲ್ಲಿ ಮಧ್ಯಾಹ್ಣ 1:30ಕ್ಕೆ ಮತ್ತು ಸಂಜೆ 5:30ಕ್ಕೆ ಮರು ಪ್ರಸಾರ. ನೋಡಿ

September 15, 2009 Posted by | ಆಯುರ್ವೇದ | | 2 Comments

ನಮ್ಮೆಜಮಾನ್ರು ಟೀವೀಲಿ ಬರ್ತಾರೆ

ನಮ್ಮ ಸುಕೃತಂ ಆಯುರ್ವೆದಾಲಯ

ನಮ್ಮ ಸುಕೃತಂ ಆಯುರ್ವೆದಾಲಯ


ನಸ್ಯ ಕರ್ಮ ಚಿಕಿತ್ಸಾ ನಿರತ ವೈದ್ಯರು

ನಸ್ಯ ಕರ್ಮ ಚಿಕಿತ್ಸಾ ನಿರತ ವೈದ್ಯರು

ನನ್ನ ಬಾಳ ಗೆಳೆಯ ಡಾ. ಗಿರಿಧರ ಟೀವಿಯಲ್ಲಿ ಬರ್ತಿರೋ ಸಂತೋಷ ನಂಗೆ. ನೀವುಗಳು ಜತೇಲಿರೋ ಮಿತ್ರರು. ನಿಮ್ಮೊಂದಿಗೆ ಹಂಚಿಕೊಳ್ಳದ ಹೊರತು ಖುಷಿ ಪರಿಪೂರ್ಣ ಅನಿಸೋಲ್ಲ. ನನ್ ಹುಡುಗ ಟೀವೀಲಿ ಬರ್ತಿರೋದನ್ನ ಎಲ್ಲರಲ್ಲೂ ಹೇಳೋವರೆಗೂ ನಂಗೆ ಸಮಾಧಾನ ಆಗೋಲ್ಲ. ಅವರ ಮಾತು ಸನಾತನ ವೇದ ಆಯುರ್ವೇದ ಮತ್ತು ಕೇರಳೀಯ ಪಂಚಕರ್ಮದ ಬಗ್ಗೆ. ಒಂದಷ್ಟು ಚಿಕಿತ್ಸೆಗಳ ವಿವರಗಳೂ ಇರ್ತಾವೆ. ನಮ್ಮ ಹಾಸ್ಪಿಟಲ್ “ಸುಕೃತಂ ಆಯುರ್ವೇದ”ದಲ್ಲೇ ಮಾಡಿದ ಶೂಟಿಂಗ್. ನೀವೆಲ್ಲ ನೋಡಿ ಚೆನ್ನಾಗನಿಸಿದ್ದನ್ನು ಹೇಳಬೇಕು. ಚನ್ನಾಗಿಲ್ಲ ಅನಿಸಿದ್ದನ್ನು ಕಡ್ಡಾಯವಾಗಿ ಹೇಳಬೇಕು. ಅದರಿಂದ ನಮ್ಮ ಬೆಳವಣಿಗೆ ಸುಲಭ.

ನಾಳೆ (ಮಂಗಳವಾರ) ಟಿವಿ 9 ನಲ್ಲಿ ಮಧ್ಯಾಹ್ಣ 1:30ಕ್ಕೆ “ಲೇಡೀಸ್ ಕ್ಲಬ್”ನಲ್ಲಿ ಕಾರ್ಯಕ್ರಮ ಪ್ರಸಾರ ಮಾಡ್ತಾರೆ. ಸಂಜೆ 5:30ಕ್ಕೆ ಮರು ಪ್ರಸಾರ. ನೋಡಿ, ನಮ್ಮ ಖುಷಿಗೆ ಮೆರುಗು ನೀಡಿ.

ಹೆಚ್ಚೇನಾದ್ರೂ ವಿವರಗಳು ಬೇಕಾದ್ರೆ : www.sukruthamayurveda.com

September 14, 2009 Posted by | ಆಯುರ್ವೇದ, ನನ್ ಹುಡುಗ | | 6 Comments

ಎಂದೂ ಬಾರದ ಕಂದನಿಗೆ

Withered Flower
ಮಗೂ,
ಇವತ್ತಿನಷ್ಟೇ ಅವತ್ತೂ ನೀನು ಬೇಕಾಗಿದ್ದೆ ನಮಗೆ. ಆದರೆ ಅವತ್ತು ಇವತ್ತಿನಷ್ಟು ಧೈರ್ಯವಿರಲಿಲ್ಲ. ನನ್ನೆಲ್ಲ ಕನಸುಗಳ ತುಂಬ ನೀನಿದ್ದೆ ಮತ್ತು ಬಹುಪಾಲು ನೀನು ಮಾತ್ರ ಇದ್ದೆ. ಅವು ಬರೀ ಕನಸು ಮಾತ್ರ ಕಾಣಬಹುದಾಗಿದ್ದ ದಿನಗಳು ಕಂದಾ. ನೀನು ಮೊಳಕೆಯೊಡೆದಾಗಷ್ಟೇ ನಾವು ವಾಸ್ತವದ ಕಡೆ ತಿರುಗಿದ್ದು; ಅಧೀರರಾಗಿದ್ದು. ನಿಜ ಹೇಳಲಾ ನಿನ್ನ ಇರುವಿಕೆಗಿಂತ ನೀ ಭೂಮಿಗೆ ಬಂದ ನಂತರದ ದಿನಗಳಿಗೆ ಹೆಚ್ಚು ಹೆದರಿದ್ದು. ಕಷ್ಟಗಳ ಕಣಿವೆಯಲ್ಲಿ ನಡೆಯುತ್ತಿದ್ದ ದಿನಗಳವು. ನಮಗೇ ಅದನ್ನೆದುರಿಸುವುದಾಗದೆ ತತ್ತರಿಸಿದಾಗ ನೀ ಬಂದು ನೀನೂ ಆ ನೊವಿನಲ್ಲಿ ಬೇಯುವುದು ಬೇಡವಾಗಿತ್ತು ಮಗೂ. ನಮ್ಮ ಬಾಲ್ಯದ ನಿರಾಸೆ, ಅವಮಾನಗಳು ನಿನ್ನ ಬಾಲ್ಯದ ವರೆಗೂ ಮುಂದುವರಿಯುವುದು ಇಷ್ಟವಿರಲಿಲ್ಲ. ಸುತ್ತೆಲ್ಲಿ ಕಣ್ಣು ಹಾಯಿಸಿದರೂ ಕಾಣುತ್ತಿದ್ದುದು ನಾವೇರಲಾರದ ಶಿಖರಗಳು…ಕಣ್ಣು ಮುಚ್ಚಿದ್ದರೂ ಏನೋ ಭೀತಿ, ಆತಂಕ.
ಆಗಿನ್ನೂ ಮೊಳಕೆಯೊಡೆದಿದ್ದರೂ ನೀನು ನಿನ್ನ ಇರುವುಕೆಯನ್ನು ನಾನಾ ರೀತಿಯಲ್ಲಿ ತೋರಿಸಿದ್ದೆ. ಆ ದಿನಗಳಲ್ಲಿ ನನ್ನ ಭಾವಲೋಕದ ಬಾಗಿಲಲ್ಲಿ ಸಪ್ತವರ್ಣದ ಕಾಮನಬಿಲ್ಲು. ಮುಸ್ಸಂಜೆ ಸುಮ್ಮನೇ ಮೆಟ್ಟಿಲ ಬಳಿ ಬಂದು ಕೂತರೆ ಛಕ್ಕನೆ ನೀ ಬಂದು “ಅಮ್ಮಾ” ಅಂದಂತೆ ಭಾಸ.. ಎದ್ದು ನೋಡಿದರೆ ನೀನಿಲ್ಲ ಆದರೂ ಪುಳಕ. ಅದುವರೆಗೂ ಸಾಮಾನ್ಯವೆನಿಸುತ್ತಿದ್ದ ಎಲ್ಲವೂ ನೀನಿದ್ದಾಗ ಬೆರಗು ಮೂಡಿಸುತ್ತಿತ್ತು. ಮಳೆಬಿಲ್ಲು, ನಕ್ಷತ್ರ, ನರ್ಸರಿ ಮಕ್ಕಳ ಹಾಡು, ಆಗಸದಲ್ಲಿ ಮೋಡ ಬರೆದ ಚಿತ್ರ, ಮಳೆ ಹನಿಯ ತುಂತುರು, ಮನೆಯೆದುರಿನ ಪಾರ್ಕಿಗೆ ವಾಕಿಂಗ್ ಬರುವ ಅಜ್ಜ ಅಜ್ಜಿ ಎಲ್ಲದರಲ್ಲೂ ಹೊಸತನ ದಕ್ಕಿದ್ದು ನಿನ್ನಿಂದ ಕಂದಾ. ಇಂಥದ್ದೊಂದು ಅದ್ಭುತ ಮಾಯಾಲೋಕದ ಸೃಷ್ಟಿಗೆ ಕಾರಣವಾದ ನಿನ್ನನ್ನೇ ನಾವು ಬೇಡವೆಂದೆವು. ಕ್ಷಮಿಸುವೆಯಾ ?
ತುಂಬಾ ಕನಸು ಕಂಡಿದ್ದೆ ನಾನು. ನಿನ್ನ ಪುಟಾಣಿ ಗುಲಾಬಿ ಪಾದಗಳಿಗೆ ಮುತ್ತಿಡುತ್ತಲೇ ಇರಬೇಕು, ಚಿಗುರು ಬೆರಳು ಹಿಡಿದು ತುಂಗೆಯ ತೀರದುದ್ದಕ್ಕೂ ಅಲೆದಾಡಬೇಕು, ನಾವಿಬ್ಬರೂ ಜತೆಯಾಗಿ ನೀರಿನಲ್ಲಿ ಕಾಲು ಇಳಿಬಿಟ್ಟು ಮೀನುಗಳ ಆಟ ನೊಡುತ್ತಾ ಮೈ ಮರೆಯಬೇಕು, ಮರಕೋತಿ ಆಟ ಆಡಬೇಕು, ಕನ್ನಡಿಯಷ್ಟು ನುಣುಪಾದ ನಿನ್ನ ಕೆನ್ನೆಯಲ್ಲಿ ನಗು ತುಂಬಿದಾಗ ನಾನದರ ಚಿತ್ರ ಬರೆಯಬೇಕು, ಪ್ರಕೃತಿಯ ಎಲ್ಲಾ ವಿಸ್ಮಯಗಳಿಗೆ ತೆರೆದುಕೊಳ್ಳುವಂತೆ ನೀನು ರೂಪುಗೊಳ್ಳಬೇಕು.. ಮುಂದೊಂದು ದಿನ ಜಗತ್ತೇ ಮೆಚ್ಚುವ ವಿಜ್ಞಾನಿ ನೀನಾಗಬೇಕು.. “ಹಿಂದೂಸ್ಥಾನವು ಎಂದೂ ಮರೆಯದ….” ಮತ್ತು ಇವೆಲ್ಲಕ್ಕೂ ಮೊದಲು ನಿಂಗೆ ನಿನ್ನಪ್ಪನಷ್ಟೇ ಒಳ್ಳೆಯ ಮನಸಿರಬೇಕು… ಪುಟ್ಟೂ, ನೀನು ಹೆಣ್ಣೇ ಆಗಿರುತ್ತೀ ಎಂಬ ದೊಡ್ಡ ನಂಬಿಕೆಯಿಂದ ನಿಂಗೆ “ಪ್ರಣತಿ” ಅಂತ ಹೆಸರಿಟ್ಟಿದ್ದೆ; ಒಂದು ವೇಳೆ ಅಲ್ಲದೇ ಹೋದರೆ “ಪ್ರಣೀತ್”.. ಹೀಗೇ ಕೋಟಿ ಕನಸುಗಳಿದ್ದವು. ಆದರೆ ವಿಧಿ ಅವನ್ನೆಲ್ಲ ಅಳಿಸಿ ಹಾಕಿತ್ತು. ಈಗ ಅನ್ನಿಸುತ್ತಿದೆ ಪರಿಸ್ಥಿತಿಯಲ್ಲ ಕಂದಾ, ಅದನ್ನೆದುರಿಸಲಾರದ ನಮ್ಮ ಹೇಡಿತನ ನಿನ್ನನ್ನು ಜಗತ್ತಿಗೆ ಬರಲಾರದಂತೆ ಮಾಡಿದ್ದು.
ಯಾವ ಭರವಸೆಯೂ ಇಲ್ಲದ ಆ ದಿನಗಳಲ್ಲಿ ನಮ್ಮನ್ನು ಜೀವಂತವಾಗಿರಿಸಿದ್ದು ಪ್ರೀತಿ..ಪ್ರೀತಿ ಮತ್ತು ಪ್ರೀತಿ. ಅದೊಂದು ನಮ್ಮ ದಾಂಪತ್ಯದಲ್ಲಿ ಹೊಳೆಯಾಗಿ ಹರಿಯುತ್ತಿತ್ತು. ಅಂಥದ್ದೇ ಯಾವುದೋ ಒಂದು ಘಳಿಗೆಯಲ್ಲಿ ಬಹುಶಃ ನೀ ಕುಡಿಯೊಡೆದಿದ್ದೆ. ನಾವು ಅಷ್ಟೇ ಪ್ರೀತಿಯಿಂದ ರಾಜಕುಮಾರಿಯಂತೆ ಬರಮಾಡಿಕೊಳ್ಳಬಹುದೆಂಬ ಆಸೆಯಿಂದ ನೀನೂ ಬಂದಿರಬೇಕು ಅಲ್ವಾ ? ಅಂಥಾ ನಿಂಗೆ ತುಂಬಾ ನೋವು ಮಾಡಿದೆ ನಾನು ಅಲ್ವಾ ? ಸಾರಿ ಕಂದಾ..
ಅವತ್ತು ನೀ ಬೇಡವೆಂದು ನಿರ್ಧಾರ ಮಾಡಿದ ದಿನವೂ ಕೂಡ ಎಂದಿನಂತಿರಲು ಪ್ರಯತ್ನ ಮಾಡಿದೆ. ಆಫೀಸಿಗೂ ಹೋಗಿ ಬಂದೆ. ಆದ್ರೆ ರಾತ್ರಿ ರಾಣಿ ತನ್ನ ಕತ್ತಲ ಚಾದರ ಹಾಸುತ್ತಿದ್ದಂತೆ ಯಾಕೋ ದುಖಃ ತಡೆಯಲಾಗಲಿಲ್ಲ. ನಾನೊಂದು ಕಡೆ, ಅವನೊಂದು ಕಡೆ ಕೂತು ಕಂಬನಿಯ ಕುಯಿಲು… ನಂತರದ ದಿನಗಳಲ್ಲಿ ಅರ್ಥವಾಯಿತು ಕಂದಾ, ಕಷ್ಟಗಳಿಗೆ ಹೆದರಿ ನಿನ್ನನ್ನು ಬೇಡವೆಂದಿದ್ದೇ ಬದುಕಿನ ಅತಿ ದೊಡ್ಡ ತಪ್ಪಾಯಿತು. ನಿನ್ನನ್ನು ಕಳಕೊಂಡ ಯಾತನೆಯಿಂದ ಹೊರಬರಲಾರದೇ ಹೋದೆ. ತಪ್ಪಿತಸ್ಥ ಭಾವ ನನ್ನ ದಿನವೂ ಕೊಲ್ಲುತ್ತಿತ್ತು. ಬದುಕಲ್ಲಿ ಮೊತ್ತ ಮೊದಲ ಬಾರಿಗೆ ಸೋಲಿನ ಅನುಭವವಾಯ್ತು. ಸುತ್ತಲಿನವರ ಮಾತು ಒತ್ತಟ್ಟಿಗಿರಲಿ, ನನ್ನೊಳಗಿನ ಪ್ರಶ್ನೆಗಳಿಗೇ ನನ್ನಲ್ಲಿ ಉತ್ತರವಿರಲಿಲ್ಲ. ಪೂರ್ತಿಯಾಗಿ ಸೋತಿದ್ದೆ ನಾನು. ನಂತರ ನನಗೆ ನಿನ್ನ ಹೊರತಾಗಿ ಬೇರೇನೂ ಬೇಡವೆನಿಸಿತ್ತು. ಕುಡಿಯಲು ಕಣ್ಣೀರು, ಉಣ್ಣಲು ಬೇಸರ, ಮಲಗಲು ಸಂಕಟದ ಹಾಸಿಗೆ, ಸೋಲಿನ ಹೊದಿಕೆ, ನಿರಾಸೆಯ ದಾರಿ…. ನನ್ನನ್ನೇ ನಾನು ಕ್ಷಮಿಸಲಾಗಿಲ್ಲ ಕಣೋ… ಬೆಳದಿಂಗಳಾಗಿ ಬರಬಹುದಾಗಿದ್ದ ಜೀವ ನೀನು; ಆದರೆ ನನಗೇ ಅದೃಷ್ಟವಿರಲಿಲ್ಲ. ನಿನ್ನಂಥ ಬೆಳಕಿನ ಕುಡಿಯನ್ನು ಮನೆಯೊಳಗಿರಿಸಿಕೊಳ್ಳಲಾರದೇ ಹೋದೆ. ಕತ್ತಲಲ್ಲಿ ಹೊಳೆದ ಬೆಳ್ಳಿ ಮಿಂಚನ್ನು ಗುರುತಿಸಲಾರದ ಮೂರ್ಖಳಾಗಿಬಿಟ್ಟೆ. ನಾ ಅವತ್ತು ಕಳಕೊಂಡಿದ್ದು ಕೇವಲ ನಿನ್ನನ್ನಲ್ಲ; ಬಾಳಿನುದ್ದಕ್ಕೂ ಜತೆಗಿರಬಹುದಾಗಿದ್ದ ಸಂಭ್ರಮವನ್ನು ಕೂಡ. ಅವತ್ತು ಬೇಡವಾಗಿದ್ದ ನೀನು ಇವತ್ತು ಮನೆಯ ಮಂದಾರವೆನಿಸುತ್ತಿದ್ದೀ. ಇದಲ್ಲವೇ ದುರಂತ ಅಥವಾ ಸ್ವಯಂಕೃತಾಪರಾಧ ?
ಕಂದಾ, ಈ ಮನೆಯಲ್ಲೀಗ ಕಷ್ಟಗಳಿಲ್ಲ. ನಾವಿಬ್ಬರಿದ್ದರೂ ಇದ್ದರೂ ಯಾರಿಲ್ಲ ಅನಿಸಹತ್ತಿದೆ. ನೀ ಬಿಟ್ಟು ಹೋದ ನೆನಪುಗಳು ಪದೇ ಪದೇ ಕೈ ಹಿಡಿದು ಜಗ್ಗುತ್ತಿವೆ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು; ಕನಸಿಲ್ಲದ ದಾರಿಯಲ್ಲಿ ನಡೆಯಲಾಗದು ಕಂದಾ, ಅರ್ಥವಾಗಿದೆ. ಒಡ್ಡಿಲ್ಲದ ಅಣೆಕಟ್ಟಿನಂತೆ ಯಾತನೆಯ ಧಾರೆ. ಅವ್ಯಕ್ತ ವೇದನೆಯೊಂದು ಹಿಂಡುತ್ತಿದೆ. ಎಲ್ಲಿದ್ದೀ ಹುಡುಗಾ ಅಂದರೆ “ಯಾಕೆ” ಎಂಬೊಂದು ಮೆಸೇಜು ಕಳುಹಿಸಿದ ನೋಡು ಆ ಕ್ಷಣ ನೀನು ನೆನಪಾದೆ. ಇಷ್ಟು ದಿನ ಸುಡುತ್ತಿದ್ದ ಎಲ್ಲ ಬೆಂಕಿಯನ್ನು ನಿನ್ನೆದುರು ಹೊರ ಚೆಲ್ಲಿರುವೆ. ಬಹುಶಃ ಈ ನೋವುಗಳೆಲ್ಲ ನಿನ್ನ ಕಂಬನಿಯ ಶಾಪ. ಬೇಡ ಕಂದಾ ಭರಿಸಲಾರೆ ಈ ಯಾತನೆ. ಬೇಸರದ ಬಿಸಿ ಬದುಕು ಸಾಕಾಗಿದೆ ನನಗೆ; ಕ್ಷಮಿಸಿದ್ದೇನೆ ಅಂತೊಮ್ಮೆ ಅಲ್ಲಿಂದಲೇ ಅಂದು ಬಿಡು. ಮನದಲ್ಲಿ ಮನೆಯಲ್ಲಿ ತಂಗಾಳಿ ಹರಡಲಿ. ಇನ್ನು ನನ್ನ ಕಾಡಬೇಡ ಪ್ಲೀಸ್…
“ದೀಪವು ನಿನ್ನದೇ ಗಾಳಿಯು ನಿನ್ನದೇ…
ಆರದಿರಲಿ ಬೆಳಕು… ಮುಳುಗದಿರಲಿ ಬದುಕು…”
(ಬರಹ ಕಾಲ್ಪನಿಕ, ಚಿತ್ರ ಮಾತ್ರ ನಿಜಾ ನಿಜ…)

September 9, 2009 Posted by | ನೋವು, ಪರಿತಾಪ | , | 24 Comments

Follow

Get every new post delivered to your Inbox.